ಉಡುಪಿ ಶ್ರೀಕೃಷ್ಣ ದೇವಾಲಯ ನವೀಕರಣಕ್ಕೆ ಜಿಲ್ಲಾಡಳಿತ ತಡೆ
ಉಡುಪಿ, ಫೆಬ್ರವರಿ 1: ಅನುಮತಿ ಇಲ್ಲದೆ ಉಡುಪಿ ಶ್ರೀಕೃಷ್ಣ ದೇವಾಲಯ ನವೀಕರಣಕ್ಕೆ ಮುಂದಾಗಿರುವ ಶ್ರೀಕೃಷ್ಣ ಮಠದ ವಿರುದ್ಧ ಜಿಲ್ಲಾಡಳಿತ ಗರಂ ಆಗಿದ್ದು, ದೇವಸ್ಥಾನದ ವ್ಯವಸ್ಥಾಪಕರಿಗೆ ನೊಟೀಸ್ ಜಾರಿ ಮಾಡಿದೆ.
ಪುರಾತನವಾದ ಉಡುಪಿ ಶ್ರೀಕೃಷ್ಣ ದೇವಾಲಯದ ಒಳಗಿನ ಪ್ರಾಂಗಣ ಸೇರಿದಂತೆ ಕೆಲವೊಂದು ಭಾಗಗಳನ್ನು ನವೀಕರಿಸಲು ಭಕ್ತರ ಒತ್ತಾಯದ ಮೇರೆಗೆ ಶ್ರೀ ಮಠವು ಮುಂದಾಗಿತ್ತು. ಇದರ ಅನುಮತಿಯನ್ನು ಜಿಲ್ಲಾಡಳಿತದಿಂದ ಪಡೆಲಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.[ಉಡುಪಿ ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಸುಮ್ನೆ ಬಿಡ್ತೀವಾ?]
ಧರ್ಮಾದಾಯ ದತ್ತಿ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳ ಅಧಿನಿಯಮ 1997ರ ಸೆಕ್ಷನ್ 23ರ ಅನ್ವಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ದೇವಸ್ಥಾನ, ಬೃಂದಾವನ ಹಾಗೂ ಇತರ ಧಾರ್ಮಿಕ ಕೇಂದ್ರಗಳನ್ನು ಸೇರಿಸಲಾಗಿತ್ತು. ಆದರೆ, 2010ರಲ್ಲಿ ಈ ನಿಯಮಕ್ಕೆ ತಿದ್ದುಪಡಿ ಮಾಡಿ ಹೊರಡಿಸಿದ ಅಂದಿನ ಸರ್ಕಾರ, ನಾಲ್ಕು ಷರತ್ತುಗಳನ್ನು ವಿಧಿಸಿ ಶ್ರೀಕೃಷ್ಣ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಟ್ಟಿತ್ತು.[ಉಡುಪಿ ಮಠಕ್ಕೆ ಸಂವಿಧಾನ ಬೇಕಂತೆ; ಪೇಜಾವರ ವಿರುದ್ಧ ಕೋರ್ಟಿಗೆ ದೂರು]
ಅಧಿಸೂಚಿತ ಪಟ್ಟಿಯಿಂದ ಕೈಬಿಟ್ಟ ಮೇಲೆ ದೇವಾಲಯ ಹಾಗು ಶ್ರೀ ಮಠ ಸ್ವತಂತ್ರವಾಗಿದ್ದು, ತಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ಚಟುವಟಿಕೆ, ಆಚರಣೆ ನಡೆಸಲು ಅವಕಾಶವಿದೆ. ಆದರೆ ದೇವಾಲಯದ ನವೀಕರಣಕ್ಕೆ ಸಂಬಂಧಿಸಿದಂತೆ ತಿದ್ದುಪಡಿಯಲ್ಲಿ ಯಾವ ಷರತ್ತು ಇದೆ ಜೊತೆಗೆ ಜಿಲ್ಲಾಡಳಿತ ನೀಡಿರುವ ಕಾರಣ ಏನೆಂಬುದು ತಿಳಿಯಬೇಕಾಗಿದೆ.