ಉಡುಪಿ ಕೃಷ್ಣ ಮಠದಲ್ಲಿ 30 ಸಾವಿರ ಮಂದಿಗೆ ಅನ್ನ ಸಂತರ್ಪಣೆ
ಉಡುಪಿ, ಆಗಸ್ಟ್ 26: ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯಲ್ಲಿ ಎರಡು ದಿನಗಳ ಉಪವಾಸದ ಬಳಿಕ ಶುಕ್ರವಾರ ಬೆಳಗ್ಗೆ 10ಕ್ಕೆ ಶ್ರೀಕೃಷ್ಣ ಮಠದ ಭೋಜನ ಶಾಲೆ ಬಳಿ ಪಲ್ಲ ಪೂಜೆ ನಡೆಯಿತು. ಸುಮಾರು 30 ಸಾವಿರ ಜನರಿಗೆ ಅನ್ನಸಂತರ್ಪಣೆ ನಡೆದು, ಲಡ್ಡು, ಹಾಲು ಪಾಯಸ, ಚಕ್ಕುಲಿ ವಿತರಣೆಗೆ ಭರದಿಂದ ಸಿದ್ಧತೆ ನಡೆದಿದೆ.
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತವಾಗಿ ಗುರುವಾರ ರಾತ್ರಿ 11.48ಕ್ಕೆ ವಿಶ್ವೇಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ವಿಶ್ವನಂದನತೀರ್ಥ ಸ್ವಾಮೀಜಿ, ವಿಶ್ವಭೂಷಣ ತೀರ್ಥ ಸ್ವಾಮೀಜಿ, ಕ್ಷತ್ರಿಯ ಪೀಠಾದೀಶ ವಿಶ್ವಾರಾಜಾತೀರ್ಥ ಸ್ವಾಮೀಜಿ ಅರ್ಘ್ಯ ಪ್ರದಾನ ಮಾಡಿದರು.[ಪೇಜಾವರ ಶ್ರೀ ಪೂಜೆ, ಕೃಷ್ಣನಾಮ ಸ್ಮರಣೆ, ಹುಲಿ ವೇಷದ ಮೆರುಗು...]
ಭಕ್ತಾದಿಗಳು ಪ್ರಾಂಗಣದ ತುಳಸಿ ಕಟ್ಟೆಯಲ್ಲಿ ಕೃಷ್ಣನಿಗೆ ಅರ್ಘ್ಯ ಸಲ್ಲಿಸಿದರು. ಈ ಬಾರಿಯ ಜನ್ಮಾಷ್ಟಮಿಯು ಕೃಷ್ಣನಿಗೆ ಅರ್ಘ್ಯ ಪ್ರದಾನದೊಂದಿಗೆ ಸಂಪನ್ನಗೊಂಡಿತು. ಶುಕ್ರವಾರ ಮಧ್ಯಾಹ್ನ ಶ್ರೀಕೃಷ್ಣ ಲೀಲೋತ್ಸವ ನಿಗದಿಯಾಗಿದೆ. ಪ್ರತಿ ಸಲ ನೀಲಕೃಷ್ಣ ರಥದಲ್ಲಿ ಕಾಣಸಿಗುತ್ತಿದ್ದರೆ, ಈ ಬಾರಿ ಸ್ವರ್ಣ ಬಣ್ಣದ ಮೃಣ್ಮಯ ಮೂರ್ತಿ ಸ್ವರ್ಣ ರಥದಲ್ಲಿ ಕಂಗೊಳಿಸಲಿದೆ.[ಉಡುಪಿ : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದ್ದಾರೆ ಬಿ.ಆರ್.ಶೆಟ್ಟಿ]
ಹಾಗೆಯೇ ಮೊಸರು ಕುಡಿಕೆ ಉತ್ಸವಕ್ಕೆ ನವೋಲ್ಲಾಸ ತುಂಬಲಿದೆ. ಭಕ್ತಾದಿಗಳಿಂದ ಶ್ರೀಕೃಷ್ಣನ ಸಹಸ್ರ ನಾಮ ಘೋಷಣೆ ಕೂಡಾ ನಡೆಯಲಿದೆ. ಸ್ವರ್ಣ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯ ಜತೆಗೆ ಕ್ಷೇತ್ರದೊಡೆಯರಾದ ಅನಂತೇಶ್ವರ, ಚಂದ್ರಮೌಳೀಶ್ವರ ಕೂತು ಶ್ರೀಕೃಷ್ಣ ಲೀಲೋತ್ಸವ ಸಂಭ್ರಮ ಆಸ್ವಾದಿಸುತ್ತಾರೆ. ಶ್ರೀಕೃಷ್ಣ ಮಠದ ಮಧ್ವ ಸರೋವರದಲ್ಲಿ ಮೃಣ್ಮಯ ಮೂರ್ತಿಯ ವಿಸರ್ಜನೆ ನಡೆಯಲಿದೆ. ಕೃಷ್ಣ ಲೀಲೋತ್ಸವವು ಭಾರೀ ಜನ ಸಾಗರದ ನಡುವೆ ರಥಬೀದಿಗೆ ಬರಲಿದೆ.