ಕಾರ್ಕಳ : ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ
ಕಾರ್ಕಳ, ಜನವರಿ. 17 : ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ ಘಟನೆ ಬೈಲೂರು ಕೌಡೂರಿನಲ್ಲಿ ನಡೆದಿದೆ.
ಹಲವು ವರ್ಷಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುತ್ತಿರುವಲ್ಲಿ ಜನಜನಿತರಾಗಿದ್ದ ನಗರದ ಪತ್ತೊಂಜಿಕಟ್ಟೆಯ ಆನಂದ ಅಂಚನ್(61) ಎಂಬವರು ಬೈಲೂರು ಕೌಡೂರು ಮನೆಯೊಂದರಲ್ಲಿ ಹಾವು ಹಿಡಿಯುತ್ತಿದ್ದ ಸಂದರ್ಭದಲ್ಲಿ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಹಾವು ಹಿಡಿಯುವುದು ಹಾಗೂ ನಾಟಿ ಮದ್ದು ನೀಡುವುದನ್ನು ಆನಂದ್ ಅಂಚನ್ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದರು. ಮೊಬೈಲ್ ಕರೆಯ ಮೇರೆಗೆ ಹಾವು ಹಿಡಿಯಲು ಕೌಡೂರುಗೆ ತೆರಳಿದ್ದರು. ಹಾವು ಹಿಡಿಯುವ ಸಂದರ್ಭದಲ್ಲಿ ಭಯಭೀತಗೊಂಡ ನಾಗರಹಾವು ಆನಂದ್ ಮೇಲೆ ದಾಳಿ ಮಾಡಿ ಗಾಯಗೊಳಿಸಿತು.

ಹಾವು ಹಿಡಿಯುವ ವೇಳೆ ಉಂಟಾಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕೆಲವೊಂದು ನಾಟಿಮದ್ದುಗಳನ್ನು ಕೊಂಡು ಹೋಗುತ್ತಿದ್ದರಾದರೂ. ಈ ಹಾವು ಹಿಡಿಯಲು ಹೋಗುವಾಗ ನಾಟಿಮದ್ದುಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವುದರಿಂದ ಪ್ರಾಣ ತೆರಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಹಾವು ಕಡಿತಕ್ಕೊಳಗಾದ ವೇಳೆ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸ್ಥಳೀಯರು ವಿನಂತಿಸಿಕೊಂಡರೂ ಅದ್ಯಾವುದಕ್ಕೂ ಕ್ಯಾರೇ ಅನ್ನದೇ ನೇರವಾಗಿ ಕಾರ್ಕಳಕ್ಕೆ ಹಿಂತಿರುಗಿದ್ದಾರೆ.
ಹಾವು ಕಚ್ಚಿ ಗಂಟೆಗಳೇ ಉರುಳಿತ್ತು. ಆನಂದ್ ಅವರ ದೈಹಿಕ ಸ್ವಾಸ್ಥ್ಯದಲ್ಲಿ ಏರುಪೇರು ಕಂಡುಬರಲು ಶುರುವಾಗಿತ್ತು. ಹಾಗಾಗಿ, ಸಮೀಪದ ಆಸ್ಪತ್ರೆಗೆ ತೆರಳಿ ಚುಚ್ಚು ಮದ್ದು ಪಡೆದುಕೊಂಡು ಮನೆಗೆ ಹಿಂದಿರುಗಿದ್ದರು.
ಆದರೆ, ಕಾಲ ಮಿಂಚಿಹೋಗಿತ್ತು. ಸಾವಿರಾರು ಹಾವುಗಳನ್ನು ಹಿಡಿದು ಕಾಡಿಗೆ ಅಟ್ಟುತ್ತಿದ್ದ ಉರಗ ತಜ್ಞ ಆನಂದ್ ಕೊನೆಗೆ ಹಾವಿನ ವಿಷಕ್ಕೇ ಬಲಿಯಾದದ್ದು ವಿಧಿಯಾಟವೇ ಸರಿ.












Click it and Unblock the Notifications