ಉಡುಪಿಯಲ್ಲಿ ಜೆಸಿಬಿ ತಡೆದು ಹೆಬ್ಬಾವು ರಕ್ಷಿಸಿದ ಉರಗ ತಜ್ಞ
ಉಡುಪಿ, ಮಾರ್ಚ್ 09: ಗಿಡ-ಗಂಟಿಗಳಿದ್ದ ಜಮೀನನ್ನು ಸ್ವಚ್ಛತೆ ಮಾಡುವಂತಹ ಸಂದರ್ಭದಲ್ಲಿ ಹೆಬ್ಬಾವೊಂದು ಕಾಣಸಿಕೊಂಡಿದೆ.
ಉಡುಪಿ ಜಿಲ್ಲೆಯ ಪೆರ್ಡೂರು ವ್ಯಾಪ್ತಿಯಲ್ಲಿ ಸ್ಥಳೀಯರೊಬ್ಬರು ಮನೆ ನಿರ್ಮಾಣಕ್ಕಾಗಿ ಜಮೀನನ್ನು ಸಮತಟ್ಟು ಮಾಡುತ್ತಿದ್ದ ಸಂದರ್ಭದಲ್ಲಿ ಹುತ್ತವೊಂದು ಇರುವುದನ್ನು ಮಾಲೀಕರು ನೋಡಿದ್ದಾರೆ.
ಜಮೀನಿನಲ್ಲಿರುವ ಹುತ್ತದೊಳಗೆ ಹಾವು ಇರಬಹುದು ಎಂದು ಮಾಲೀಕರು ಸಂಶಯ ಪಟ್ಟಿದ್ದಾರೆ. ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಜಮೀನಿನ ಮಾಲೀಕರು ತಕ್ಷಣ ಫೋನ್ ಕರೆ ಮಾಡಿದ್ದಾರೆ.

ಗುರುರಾಜ್ ಸ್ಥಳಕ್ಕೆ ಆಗಮಿಸಿ ಹುತ್ತವನ್ನು ಪರಿಶೀಲನೆ ಮಾಡಿದಾಗ ಹುತ್ತದ ಒಳಗೆ ಹೆಬ್ಬಾವು ಇರುವುದು ಗುರುರಾಜ್ ಅವರ ಗಮನಕ್ಕೆ ಬಂದಿದೆ. ಜೆಸಿಬಿ ಕಾರ್ಯಾಚರಣೆಯನ್ನು ನಿಲ್ಲಿಸಿದ ಗುರುರಾಜ್ ತನ್ನ ಸಲಕರಣೆಯ ಮೂಲಕ ಹುತ್ತವನ್ನು ಅಗೆದು ಹುತ್ತದ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಇರುವುದು ಗಮನಿಸಿದ್ದಾರೆ.

ಕೂಡಲೇ ಗುರುರಾಜ್ ಅವರು ಹೆಬ್ಬಾವನ್ನು ಹುತ್ತದಿಂದ ಹೊರಕ್ಕೆ ತೆಗೆದಿದ್ದಾರೆ. ಹುತ್ತದೊಳಗೆ ಬೇರೆ ಹಾವುಗಳು ಇದೆಯಾ ಎಂದು ಪರಿಶೀಲನೆ ಮಾಡಿದ ನಂತರ ಜೆಸಿಬಿ ಕಾರ್ಯಾಚರಣೆ ಮುಂದುವರಿದಿದೆ. ಹೆಬ್ಬಾವನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.












Click it and Unblock the Notifications