ರೈತರ ಹೋರಾಟ; ಶೋಭಾ ಕರಂದ್ಲಾಜೆ ವಿವಾದಾತ್ಮಕ ಹೇಳಿಕೆ
ಉಡುಪಿ, ಡಿಸೆಂಬರ್ 18: ಹರ್ಯಾಣ ಮತ್ತು ಪಂಜಾಬ್ನ ರೈತರು ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ರೈತರ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಉಡುಪಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರೈತ ಚಳುವಳಿಯಲ್ಲಿ ದೇಶ ವಿರೋಧಿ ಪ್ರತ್ಯೇಕವಾದಿಗಳ ಪರ ಘೋಷಣೆ ಮೊಳಗುತ್ತಿದೆ. ಉಗ್ರರ ಬೆಂಬಲಿಗರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಖಾಲಿಸ್ತಾನ್ ಮೂಮೆಂಟ್ ಕಾರ್ಯಕರ್ತರು ಈ ಹೋರಾಟದ ಹಿಂದೆ ಇದ್ದಾರೆ" ಎಂದು ಹೇಳಿದರು.
"ದೇಶದ 338 ಸಂಸದರಲ್ಲಿ 18 ಜನ ಸಿಖ್ಖರು ಸಂಸದರಾಗಿದ್ದಾರೆ. ದೇಶದಲ್ಲಿ ಸಿಖ್ ಸಮಾಜದ ವಿರುದ್ಧ ಯಾವುದೇ ರೀತಿ ತಾರತಮ್ಯ ನಡೆದಿಲ್ಲ. ಆದರೂ ಜನಾಂಗೀಯ ತಾರತಮ್ಯದ ಆರೋಪವನ್ನು ಕೇಂದ್ರ ಸರಕಾರದ ಮೇಲೆ ಹೊರಿಸಲಾಗುತ್ತಿದೆ" ಎಂದರು.
"ಭಾರತದ ಆಂತರಿಕ ವಿಚಾರದಲ್ಲಿ ಕೆನಡಾ ಪ್ರಧಾನಿ ಮೂಗು ತೂರಿಸುತ್ತಿದ್ದಾರೆ. ಇದರಲ್ಲಿ ಕೆನಡಾದಲ್ಲಿ ನೆಲೆಸಿರುವ ಸಿಖ್ ಮುಖಂಡರ ಕೈವಾಡವಿದೆ. ಪಂಜಾಬಿನಲ್ಲಿ ಎಪಿಎಂಸಿ ಲಾಬಿ ನಡೆಸುವವರಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಮಧ್ಯವರ್ತಿಗಳ ಹಿತ ಕಾಪಾಡಲು ಈ ಹೋರಾಟ ನಡೆಯುತ್ತಿದೆ" ಎಂದು ಶೋಭಾ ಕರಂದ್ಲಾಜೆ ದೂರಿದರು.

ಕಾಂಗ್ರೆಸ್ ಕೈವಾಡ ಎದ್ದು ಕಾಣುತ್ತಿದೆ
"ರಾಜ್ಯದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟ ನಡೆಯಿತು. ಈ ಹೋರಾಟದಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮೊದಲಾದ ಕಾಂಗ್ರೆಸ್ಸಿಗರು ಭಾಗವಹಿಸಿದ್ದರು. ರೈತ ಹೋರಾಟದ ಹಿಂದೆ ಕಾಂಗ್ರೆಸ್ಸಿನ ಕೈವಾಡ ಎದ್ದು ಕಾಣುತ್ತಿದೆ" ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

ತುಕಡೆ ಗ್ಯಾಂಗ್ ಕೈವಾಡ
"ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ತುಕಡೆ ತುಕಡೆ ಗ್ಯಾಂಗ್ ಮತ್ತು ನಗರ ನಕ್ಸಲರ ಪಾತ್ರವಿದೆ. ದೇಶದಲ್ಲಿ ಎಪಿಎಂಸಿ ವ್ಯವಸ್ಥೆ ರೈತರ ರಕ್ತ ಹೀರುತ್ತಿದೆ. ಎಪಿಎಂಸಿ ದಲ್ಲಾಳಿಗಳು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನದ ದಲ್ಲಾಳಿಗಳ ವಿರುದ್ಧ ಈ ಹಿಂದೆ ಹಲವಾರು ಹೋರಾಟಗಳು ನಡೆದಿತ್ತು.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಪಿಎಂಸಿ ರದ್ದು ಮಾಡುವುದಾಗಿ ಭರವಸೆ ಕೊಟ್ಟಿತ್ತು" ಎಂದು ಹೇಳಿದರು.

ಎಪಿಎಂಸಿ ಕಾನೂನೇ ಜಾರಿಯಲ್ಲಿಲ್ಲ
"2010ರಲ್ಲಿ ಕೃಷಿ ಸಚಿವ ಶರದ್ ಪವಾರ್ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದರು. ಕೃಷಿ ಹೂಡಿಕೆಯಲ್ಲಿ ಖಾಸಗಿ ಪಾಲುದಾರಿಕೆಯ ಬಗ್ಗೆ ಅಭಿಪ್ರಾಯ ಕೇಳಿದ್ದರು. ತಮಿಳುನಾಡಿನಲ್ಲಿ ಡಿಎಂಕೆ ಕೂಡ ಎಪಿಎಂಸಿ ಕಾಯ್ದೆ ರದ್ದು ಮಾಡುವ ಆಶ್ವಾಸನೆ ಕೊಟ್ಟಿತ್ತು.ಕಾಂಗ್ರೆಸ್ ಆಡಳಿತ ನಡೆಸಿದ ಕೇರಳದಲ್ಲಿ ಎಪಿಎಂಸಿ ಕಾನೂನೇ ಜಾರಿಯಲ್ಲಿಲ್ಲ" ಎಂದು ಶೋಭಾ ಕರಂದ್ಲಾಜೆ ಹೇಳಿದರು.
Recommended Video

ವಿರೋಧ ಮಾಡುತ್ತಿದ್ದಾರೆ
"ರಾಹುಲ್ ಗಾಂಧಿಯವರು ಕಾಂಗ್ರೆಸ್ ಸರಕಾರವಿದ್ದ ರಾಜ್ಯಗಳಿಗೆ ಪತ್ರ ಬರೆದು ಹಣ್ಣು ಮತ್ತು ತರಕಾರಿಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡುವಂತೆ ಹೇಳಿದ್ದರು. ಆದರೆ, ಈಗ ಈ ಕಾನೂನು ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿರುವಾಗ ವಿರೋಧ ಮಾಡುತ್ತಿದ್ದಾರೆ" ಎಂದು ಶೋಭಾ ಕರಂದ್ಲಾಜೆ ಹೇಳಿದರು.












Click it and Unblock the Notifications