ದೇವೇಗೌಡರಿಂದ ಅತಿರುದ್ರ ಯಾಗ, ಇದೀಗ ಡಿಕೆಶಿಯಿಂದ ಚಂಡಿಕಾ ಯಾಗ
ಉಡುಪಿ, ಜನವರಿ 06: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಒಂದು ಕಡೆ ಚುನಾವಣೆ ಪ್ರಚಾರ ಬಿರುಸುಗೊಂಡಿದ್ದರೆ, ಮತ್ತೊಂದೆಡೆ ಪೂಜೆ-ಪುನಸ್ಕಾರ, ಯಾಗಗಳು ಗರಿಗೆದರಿವೆ.
ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶೃಂಗೇರಿಯ ಶಾರದಾ ಮಾತೆ ದೇವಸ್ಥಾನದಲ್ಲಿ ಬುಧವಾರದಿಂದ (ಜನವರಿ 3) ಅತಿರುದ್ರ ಮಹಾಯಾಗವನ್ನು ಮಾಡಿಸುತ್ತಿದ್ದರೆ, ಇತ್ತ ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಅವರೂ ಸಹ ಉಡುಪಿಯ ಕಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಇಂದಿನಿಂದ (ಜನವರಿ 6) ಮೂರು ದಿನಗಳ ಕಾಲ ಶತಚಂಡಿಕಾ ಯಾಗವನ್ನು ಕೈಗೊಂಡಿದ್ದಾರೆ.
ಶೃಂಗೇರಿಯಲ್ಲಿ ದೇವೇಗೌಡರಿಂದ ಅತಿರುದ್ರ ಯಾಗ, ಯಾವ ಕಾರಣಕ್ಕೆ?
ಶತಚಂಡಿಕಾ ಯಾಗವನ್ನು ಅರ್ಚಕ ನರಸಿಂಹ ಅಡಿಗ ಎನ್ನವರ ನೇತೃತ್ವದಲ್ಲಿ ಕಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನಗಳ ವರೆಗೆ ಶತಚಂಡಿಕಾ ಯಾಗ ನಡೆಯಲಿದ್ದು, ಯಾಗದಲ್ಲಿ ಡಿಕೆಶಿ ಕುಟುಂಬಸ್ಥರು ಭಾಗವಹಿಸಿದ್ದಾರೆ.
ಆದರೆ, ಈ ಯಾಗವನ್ನು ಯಾವ ಫಲಾಪೇಕ್ಷೆ ಇಟ್ಟುಕೊಂಡು ಡಿಕೆ ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಶತಚಂಡಿಕಾ ಯಾಗವನ್ನು ಇಷ್ಟಾರ್ಥ ಸಿದ್ಧಿಗಾಗಿ ಮಾಡಲಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತಿದೆ.