ಸಂತೋಷ್ ಆತ್ಮಹತ್ಯೆ; ಲಾಡ್ಜ್ ರೂಂನಲ್ಲಿ ಗಣಪತಿ ಹೋಮ
ಉಡುಪಿ, ಏಪ್ರಿಲ್ 14; ರಾಜ್ಯದಲ್ಲೇ ಭಾರೀ ಸುದ್ದಿಯಾದ ಸಂತೋಷ್ ಪಾಟೀಲ್ ಪ್ರಕರಣದ ತನಿಖೆಯನ್ನು ಉಡುಪಿ ಕೋರ್ಟ್ನಿಂದ ಬೆಂಗಳೂರಿನ ಜನತಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಸಂತೋಷ್ ಪಾಟೀಲ್ ಜೊತೆ ಉಡುಪಿಗೆ ಬಂದಿದ್ದ ಇಬ್ಬರು ಗೆಳೆಯರು ಪೊಲೀಸರ ವಶದಲ್ಲೇ ಇದ್ದು ವಿಚಾರಣೆ ಮುಂದುವರಿಸಿದ್ದಾರೆ. ಈ ನಡುವೆ ಹೋಟೆಲ್ನಲ್ಲಿ ಇಂತಹ ಅವಘಡ ಮುಂದೆ ಆಗದಂತೆ, ಮಾಲೀಕರು ದೇವರ ಮೊರೆ ಹೋಗಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಡೆತ್ ನೋಟ್ ಬರೆದು ಉಡುಪಿಯಲ್ಲಿ ಬಂದು ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಸದ್ಯ ತನಿಖೆ ಹಂತದಲ್ಲಿ ಇದೆ. ಈ ನಡುವೆ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಉಡುಪಿ ನಗರ ಠಾಣೆ ಪೊಲೀಸರು ಎಫ್ಐಆರ್ನಲ್ಲಿರುವ ಎಲ್ಲಾ ಅಂಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಮೊದಲ ಆರೋಪಿ. ಹೀಗಾಗಿ ಸಚಿವರೇ ಆರೋಪಿಯಾಗಿರುವ ಕಾರಣ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ.

ಪ್ರಕರಣದ ಎಫ್ಐಆರ್ ಪ್ರತಿಯನ್ನು ಉಡುಪಿ ಸೆಷನ್ಸ್ ಕೋರ್ಟ್ ಜಡ್ಜ್ ಬೆಂಗಳೂರಿಗೆ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಸಂತೋಷ್ ಗೆಳೆಯರ ವೀಡಿಯೋ ಹೇಳಿಕೆಯನ್ನು ಉಡುಪಿ ನಗರಠಾಣೆ ಪೊಲೀಸರು ಪಡೆದಿದ್ದಾರೆ.
ಇನ್ನು ಶಾಂಭವಿ ಹೋಟೆಲ್ ಮಾಲೀಕರೂ ಸಂತೋಷ್ ಪಾಟೀಲ್ ಬಂದಾಗಿನ ಕೆಲವೊಂದು ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಸಂತೋಷ್ ಸೋಮವಾರ ಸಂಜೆ ಬಂದು 207 ಹಾಗೂ 208 ಹೀಗೆ ಎರಡು ರೂಮ್ ಮಾಡಿದ್ದರಂತೆ.
ಸಂತೋಷ್ 207ರಲ್ಲೇ ಮಲಗಿದ್ದರು. ಮಂಗಳವಾರ ಬೆಳಗ್ಗೆ ಸಂತೋಷ್ ಗೆಳೆಯರು ಬಂದು ಸಂತೋಷ್ ಇದ್ದ ರೂಂ ಬಾಗಿಲು ತೆಗೆಯುತ್ತಿಲ್ಲ ಎಂದು ಹೇಳಿದ್ದರು. ಆ ನಂತರ ಹೋಟೆಲ್ ಸಿಬ್ಬಂದಿ ತಮ್ಮಲ್ಲಿರುವ ಇನ್ನೊಂದು ಕೀ ಬಳಸಿ ರೂಮ್ ಬಾಗಿಲು ತೆಗೆದು ನೋಡಿದಾಗ ಸಂತೋಷ್ ಮೃತಪಟ್ಟಿರುವ ವಿಷಯ ಬೆಳೆಕಿಗೆ ಬಂದಿದೆ.
ಇನ್ನೂ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ರೂಂ ಅನ್ನು ಯಾರಿಗೂ ನೀಡಲಾಗಿಲ್ಲ. "ಅಲ್ಲದೇ ಹೋಟೆಲ್ಗೆ ಬರುವ ಕಸ್ಟಮರ್ಗೆ ಯಾವುದೇ ಭಯ ಇರಬಾರದು ಎಂದು ಹೋಟೆಲ್ನಲ್ಲಿ ದೇವರ ಪೂಜೆ ಮಾಡಿ ಗಣ ಹೋಮ ನಡೆಸಲು ತೀರ್ಮಾನಿಸಲಾಗಿದೆ" ಎಂದು ಶಾಂಭವಿ ಲಾಡ್ಜ್ ಲೀಸ್ ಪಡೆದ ದಿನೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ. ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಈಶ್ವರಪ್ಪ ರಾಜೀನಾಮೆ ಬಳಿಕ ಈ ಪ್ರಕರಣ ಮುಂದೆ ಯಾವ ದಿಕ್ಕು ಪಡೆಯಲಿದೆ? ಎಂದು ಕಾದು ನೋಡಬೇಕಾಗಿದೆ.












Click it and Unblock the Notifications