ವರ್ಷಕ್ಕೊಮ್ಮೆ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಅಭಿಷೇಕ ಮಾಡುವ ನದಿ
Recommended Video

ಉಡುಪಿ, ಆಗಸ್ಟ್ 14: ಪರಶುರಾಮ ಸೃಷ್ಟಿಯಲ್ಲಿ ಒಂದು ಎಂದು ನಂಬಲಾಗುವ ಉಡುಪಿ ಜಿಲ್ಲೆಯ ಪುರಾಣ ಪ್ರಸಿದ್ದ ದೇವಾಲಯಗಳಿಗೆ ಒಂದೊಂದಕ್ಕೊಂದು ಒಂದೊಂದು ಇತಿಹಾಸವಿದೆ. ಅಂತಹ ದೇವಾಲಯಗಳಲ್ಲೊಂದು ಕುಂದಾಪುರ ತಾಲೂಕಿನ ಬ್ರಾಹ್ಮೀ ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನ.
ಆಷಾಢ ಅಥವಾ ಶ್ರಾವಣ ಮಾಸದ ಮಳೆಯಲ್ಲಿ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಪುಣ್ಯಸ್ನಾನ ಆಗುವುದು ವಾಡಿಕೆ. ಈ ದೇವಾಲಯದ ಪಕ್ಕದಲ್ಲೇ ಹರಿಯುವ ಕುಬ್ಜಾ ನದಿನೀರು ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸಿ, ತಾಯಿಗೆ ಅಭಿಷೇಕ ಮಾಡಿ, ಮತ್ತೆ ಇಳಿಮುಖವಾಗುತ್ತದೆ.
ಪ್ರತೀವರ್ಷ ತಪ್ಪದೇ ನಡೆಯುವ ಈ ವಾಡಿಕೆಗೆ ಭಕ್ತರು ಪುಳಕಗೊಳ್ಳುತ್ತಾರೆ, ನದಿನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೇ ವಿಶೇಷ ಮಂಗಳಾರತಿ ನಡೆಯುತ್ತದೆ. ಇದಾದ ನಂತರ ಈ ನದಿನೀರಿನಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಗಮನಿಸಬೇಕಾದ ಅಂಶವೇನಂದರೆ, ಗರ್ಭಗುಡಿ ಪ್ರವೇಶಿಸುವ ನದಿನೀರು ಎಂದೂ ತಾಯಿಯ ಪಾದದ ಮೇಲೆ ಆವೃತವಾಗದೇ ಇರುವುದು.

ಇಂತಹ ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಘಟನೆ, ಶ್ರಾವಣ ನಾಗ ಚತುರ್ಥಿಯ ದಿನ (ಆಗಸ್ಟ್ 14) ಬೆಳಗ್ಗೆ 7.45 ಸುಮಾರಿಗೆ ನಡೆದಿದೆ. ಮೈದುಂಬಿ ಹರಿಯುತ್ತಿರುವ ಕುಬ್ಜಾ ನದಿಯ ನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೇ, ಭಕ್ತರು ಜೈಘೋಷ ಮುಗಿಲು ಮುಟ್ಟಿದೆ. ಜುಲೈ ಮೊದಲವಾರದಲ್ಲಿ ಕುಬ್ಜಾ ನದಿ ದೇವಾಲಯದೊಳಗೆ ಪ್ರವೇಶಿಸಿದ್ದರೂ, ಗರ್ಭಗುಡಿಯೊಳಗೆ ಪ್ರವೇಶಿಸಿರಲಿಲ್ಲ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ 35ಕಿ.ಮೀ ದೂರದಲ್ಲಿ ಸುಂದರವಾದ ಹಚ್ಚಹಸಿರಿನ ಕಾಡಿನ ಮಧ್ಯೆ ಹೋದರೆ ಕಮಲಶಿಲೆ ಎನ್ನುವ ಊರು ಸಿಗುತ್ತದೆ ಅದರ ತಪ್ಪಲಿನಲ್ಲಿ ಕುಬ್ಜ ನದಿ ಹರಿಯುತ್ತದೆ. ಕಮಲಶಿಲೆಯಲ್ಲಿ ಪ್ರಾಚೀನ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಗ್ರಾಮದ ಹೃದಯ ಭಾಗದಲ್ಲಿದೆ.

ಕಮಲಶಿಲೆಯು ಪ್ರಪಂಚ ಹುಟ್ಟಿದಾಗಲೇ ಉದ್ಭವವಾಯಿತು, ಮೊದಲಿಗೆ ಇಲ್ಲಿ ಕಮಲಶಿಲೆಯನ್ನು ಬ್ರಹ್ಮಲಿಂಗೇಶ್ವರ ಎಂದು ಪೂಜಿಸಲಾಗುತ್ತಿತ್ತು ನಂತರ ಇದು ಬ್ರಾಹ್ಮಿ ದುರ್ಗಾಪರಮೇಶ್ವರೀ ಎಂದು ತಿಳಿದು ಪೂಜಿಸಿಕೊಂಡು ಬರಲಾಯಿತು ಎನ್ನುವುದು ದೇವಾಲಯದ ಇತಿಹಾಸ.
ಪ್ರತಿದಿನ ಸಂಜೆ ಇಲ್ಲಿ ದೇವಿಗೆ ವಿಶೇಷವಾದ 'ಸಲಾಂ ಪೂಜೆ' ನಡೆಯುತ್ತದೆ ಇದನ್ನು ಮುಸ್ಲಿಂ ಆಡಳಿತಗಾರರಾಗಿದ್ದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಚರಿಸಿಕೊಂಡು ಬಂದಿದ್ದಾರೆ. ಈಗಲೂ ಈ ಸಂಪ್ರದಾಯ ದೇವಾಯಲದಲ್ಲಿ ಮುಂದುವರಿದು ಕೊಂಡು ಬಂದಿದೆ.












Click it and Unblock the Notifications