'ರಮ್ಯಾ ಮೇಲೆ ಮೊಟ್ಟೆ ಎಸೆಯುವಂತಹ ಘಟನೆ ನಡೆಯಬಾರದಿತ್ತು'
ಉಡುಪಿ, ಆಗಸ್ಟ್ 26 : 'ರಮ್ಯಾ ಮೇಲೆ ಮೊಟ್ಟೆ ಎಸೆಯುವಂತಹ ಘಟನೆ ನಡೆಯಬಾರದಿತ್ತು. ಅವರು ನೀಡಿರುವ ಹೇಳಿಕೆ ಬಗ್ಗೆ ಈಗಾಗಲೇ ಹಲವು ಬಾರಿ ಸ್ಪಷ್ಟನೆಗಳನ್ನು ನೀಡಿದ್ದಾರೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಶುಕ್ರವಾರ ಉಡುಪಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ರಮ್ಯಾ ಅವರು ತಮ್ಮ ಹೇಳಿಕೆ ಬಗ್ಗೆ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಗುರುವಾರ ಮಂಗಳೂರಿನಲ್ಲಿಯೂ ಸ್ಪಷ್ಟನೆ ಕೊಟ್ಟಿದ್ದರು. ಅವರ ಮೇಲೆ ಮೊಟ್ಟೆ ಎಸೆಯುವಂತಹ ಘಟನೆ ನಡೆಯಬಾರದಿತ್ತು' ಎಂದರು.[ನನಗೆ ಮಂಗಳೂರು ಇಷ್ಟ. ಮಂಗಳೂರು ಹೆವೆನ್ : ರಮ್ಯಾ]
'ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಿಯನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ್ದರು. ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ರಮ್ಯಾ ಅವರು ಮಾತ್ರ ಪಾಕ್ ಬಗ್ಗೆ ಮಾತನಾಡಿದರೆ ತಪ್ಪೇ?. ಭಾರತದ ಪರವಾಗಿ ಅವರು ಅಲ್ಲಿಗೆ ಹೋಗಿದ್ದರು' ಎಂದು ಪರಮೇಶ್ವರ ಹೇಳಿದರು.['ಮಂಗಳೂರು ನಿಜ ಸ್ವರ್ಗ, ಐ ಲವ್ ಮಂಗಳೂರು']
ಮೊಟ್ಟೆ ತೂರಲಾಗಿತ್ತು : ಗುರುವಾರ ಕದ್ರಿ ಕ್ರಿಕೆಟರ್ಸ್ ವತಿಯಿಂದ ಕದ್ರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಮ್ಯಾ ಅವರು ಪಾಲ್ಗೊಂಡಿದ್ದರು. 'ಮಂಗಳೂರು ನರಕ' ಎಂದು ಅವರು ನೀಡಿದ್ದ ಹೇಳಿಕೆ ಖಂಡಿಸಿ ಅವರ ಮೇಲೆ ಕಲ್ಲು, ಶೂ ಮತ್ತು ಮೊಟ್ಟೆ ಎಸೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾಗಿತ್ತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಆಯೋಜಕರು ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರು.[ರಮ್ಯಾ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ : ಕೃಷ್ಣ ಬೈರೇಗೌಡ]
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, 'ಹಲವಾರು ಜನರ ಒತ್ತಾಯದಂತೆ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದೆವು. ಈಗ ತನಿಖೆ ಆರಂಭವಾಗಿದೆ. ನಾವು ವರದಿಗಾಗಿ ಕಾಯುತ್ತಿದ್ದೇವೆ' ಎಂದು ಹೇಳಿದರು.