ಅನಂತ್ ಕುಮಾರ್ ಹೇಳಿಕೆಗೂ ನನಗೂ ಸಂಬಂಧವಿಲ್ಲ: ರಘುಪತಿ ಭಟ್
ಉಡುಪಿ, ಮೇ 4 : ಉಡುಪಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಇಂದು ಶುಕ್ರವಾರ ಉಡುಪಿಯ ಜಾಮಿಯಾ ಮಸೀದಿಯಲ್ಲಿ ಮತ ಯಾಚನೆ ಮಾಡಿದರು. ನಗರದ ಹೃದಯ ಭಾಗದ ಮಸೀದಿಗೆ ತೆರಳಿದ ರಘುಪತಿ ಭಟ್ ಮುಸ್ಲಿಂ ಬಾಂಧವರ ಬಳಿ ಮತ ಕೇಳಿದರು.
ಇಂದು ಶುಕ್ರವಾರವಾಗಿದ್ದರಿಂದ ಸಹಸ್ರಾರು ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಸೇರಿದ್ದರು. ಸಾಮೂಹಿಕ ನಮಾಜಿನ ಬಳಿಕ ಮುಸ್ಲಿಮರು ಹೊರ ಬರುವಾಗ ರಘುಪತಿ ಭಟ್ ಒಬ್ಬೊಬ್ಬರನ್ನೂ ಎದುರುಗೊಂಡು ಹಸ್ತ ಲಾಘವ ಮಾಡಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಘುಪತಿ ಭಟ್, ಶುಕ್ರವಾರ ಆಗಿದ್ದರಿಂದ ಮುಸ್ಲಿಂ ಬಾಂಧವರ ಸಹಾಯ ಕೇಳಲು ಬಂದಿದ್ದೇನೆ. ಈ ಹಿಂದೆ ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯವನ್ನು ಮತ್ತೆ ಮುಂದುವರೆಸಲು ನಿಮ್ಮೆಲ್ಲರ ಬೆಂಬಲ ಬೇಕು.

ನಮಗೆ ಎಲ್ಲ ವರ್ಗದವರ ಬೆಂಬಲವೂ ಬೇಕು. ಮುಸ್ಲಿಂ ಬಾಂಧವರು ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ ಎಂದು ಪ್ರಶಂಸಿಸಿದರು. ಆದರೆ ಈ ಹಿಂದೆ ಬಿಜೆಪಿ ಸಚಿವ ಅನಂತ್ ಕುಮಾರ್ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತನ್ನು ಹೇಳಿದ್ದಕ್ಕೆ ಪ್ರತಿಕ್ರಯಿಸಿದ ರಘುಪತಿ ಭಟ್, ಅವರ ಹೇಳಿಕೆಗೂ ನನಗೂ ಸಂಬಂಧ ಇಲ್ಲ.
ನಾನು ಎಲ್ಲರ ಒಳಿತನ್ನು ಬಯಸುವವ. ಈ ಬಾರಿಯೂ ಎಲ್ಲಾ ಕಡೆ ಮತಯಾಚನೆ ಮಾಡಲು ಹೋಗಲಿದ್ದೇನೆ ಎಂದು ತಿಳಿಸಿದರು.












Click it and Unblock the Notifications