ಪುತ್ತಿಗೆ ಮಠದಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ.
ಉಡುಪಿ, ಏಪ್ರಿಲ್ 06: ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ತೋರುತ್ತಿದ್ದು, ಉಡುಪಿಯ ಪುತ್ತಿಗೆ ಮಠ ವತಿಯಿಂದ ಹತ್ತು ಲಕ್ಷ ರೂ. ದೇಣಿಗೆ ಕೊಡುತ್ತಿದ್ದೇವೆ ಎಂದು ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮಿಜಿ ಹೇಳಿದರು.
ಕೊರೊನಾ ವೈರಸ್ ನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ ಎಂಬ ಬಗ್ಗೆ ನಮಗೆ ಅನುಮಾನ ಇದೆ. ಕೊರೊನಾ ವೈರಸ್ ನರಕಾಸುರ ನಂತೆ ಭಾಸವಾಗುತ್ತಿದೆ, ಕೊರೊನಾವನ್ನು ಉಲ್ಟಾ ಹೇಳಿದರೆ ನರಕ ಎಂದಾಗುತ್ತದೆ ಎಂದು ವಿಶ್ಲೇಶಿಸಿದರು.
ನರಕಾಸುರನ ಸಂಹಾರ ಮಾಡಲು ಕೃಷ್ಣನ ಅವತಾರ ಎತ್ತಿ ಬರಬೇಕು. ಮಾನವ ಸಮುದಾಯ ಮಾಡಿದ ತಪ್ಪುಗಳಿಂದ ಈ ಪರಿಸ್ಥಿತಿ ಬಂದಿದೆ. ನಾವು ಪ್ರಾಚೀನ ಮೌಲ್ಯಗಳನ್ನು ಬದಿಗೆ ಸರಿಸಿದ್ದೇವೆ. ಅನಗತ್ಯ ಪ್ರಾಣಿ ಸಂಹಾರದಿಂದ ಕೊರೊನಾ ಬಂದಿದೆ ಎಂದರು.

ಮನುಷ್ಯನ ದೇಹಕ್ಕೆ ಸಸ್ಯಾಹಾರವೇ ಸೂಕ್ತ. ಮನುಷ್ಯ ಬದುಕಲು ಮಾಂಸಾಹಾರದ ಅಗತ್ಯ ಇಲ್ಲ, ಜೀವಂತ ಪ್ರಾಣಿಗಳನ್ನು ಹಿಡಿದು ತಿನ್ನುವುದರಿಂದ ಕೊರೊನಾ ವೈರಸ್ ಬಂದಿದೆ ಎಂದು ತಿಳಿಸಿದರು.
ಮಾನವ ಸಮುದಾಯ ವಿಧ್ವಂಸಕ ಚಿಂತನೆಯಲ್ಲಿ ಸಾಗುತ್ತಿದೆ. ಭಗವಂತ ಭೂಮಿಯನ್ನು ಸೃಷ್ಟಿ ಮಾಡಿದ್ದು ಬದುಕುವುದಕ್ಕಾಗಿ, ಮನುಷ್ಯರು ಶಸ್ತ್ರಾಸ್ತ್ರ ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊರೊನಾದಿಂದ ಜಗತ್ತನ್ನು ನಾಶ ಮಾಡಬಹುದೆಂದು ದುಷ್ಟರಿಗೆ ಗೊತ್ತಾಗಿದೆ, ಉದ್ದೇಶಪೂರ್ವಕವಾಗಿ ಕೊರೊನಾ ಹರಡುವ ಪ್ರಯತ್ನವೂ ಆಗಬಹುದು. ಒಬ್ಬ ದುಷ್ಟ ನಿಂದ ಸಮಾಜಕ್ಕೆ ದೇಶಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು.
ಜಾಗತಿಕ ವೇದಿಕೆಯಲ್ಲಿ ಕೊರೊನಾ ಬಗ್ಗೆ ಚರ್ಚೆಯಾಗಲಿ. ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ. ಕೊರೊನಾದ ವಿರುದ್ಧ ದೂರಗಾಮಿ ಆಲೋಚನೆಯ ಅಗತ್ಯತೆ ಇದೆ ಎಂದರು.
ಕೊರೊನಾದಿಂದ ಪುತ್ತಿಗೆ ಮಠದ ವಿದೇಶಿ ಬ್ರಾಂಚ್ ಗಳಿಗೆ ತೊಂದರೆಯಾಗಿದೆ. ಅಮೆರಿಕ, ಲಂಡನ್ ನ 11 ಶಾಖೆಗಳನ್ನು ಮುಚ್ಚಿದ್ದೇವೆ. ಮಠದ ಸಿಬ್ಬಂದಿಗಳು ಅರ್ಚಕರು ಗೊಂದಲದಲ್ಲಿದ್ದಾರೆ. ವಿದೇಶದ ಸರಕಾರಗಳು ನಮಗೆ ಸಾಕಷ್ಟು ಸಹಾಯ ಮಾಡಿವೆ ಎಂದು ಉಡುಪಿಯಲ್ಲಿ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.












Click it and Unblock the Notifications