ಆಸ್ಪತ್ರೆ ತಾಜ್ಯದಿಂದ ಆದಾಯ; ಮಾದರಿಯಾದ ಉಡುಪಿ ಆಸ್ಪತ್ರೆ
ಉಡುಪಿ, ಫೆಬ್ರವರಿ 12: ತಾಜ್ಯಗಳ ವಿಂಗಡನೆ, ವಿಲೇವಾರಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ. ಅದರಲ್ಲೂ ಆಸ್ಪತ್ರೆಯ ತಾಜ್ಯವೆಂದರೆ ಜನರು ಮೂಗು ಮುರಿಯುವುದೇ ಹೆಚ್ಚು. ಆಸ್ಪತ್ರೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ವಿಲೇವಾರಿ ಮಾಡಿ ಆದರಿಂದ ಆದಾಯವನ್ನು ಗಳಿಸುತ್ತಿದೆ ಉಡುಪಿಯ ಸರ್ಕಾರಿ ಆಸ್ಪತ್ರೆ.
ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ಕೇಂದ್ರದ ಯಶೋಗಾಥೆ ಇದು. ತ್ಯಾಜ್ಯ ಸಂಪನ್ಮೂಲ ಕೇಂದ್ರವು ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತೆ ಮೂಡಿಸುವುದರ ಜೊತೆಗೆ, ಆದಾಯವನ್ನು ತಂದುಕೊಡುತ್ತಿದೆ.
ಆಸ್ಪತ್ರೆ ತ್ಯಾಜ್ಯದ ವೈಜ್ಞಾನಿಕ ವಿಂಗಡನೆ, ಮಾರಾಟದಿಂದ ದೊರೆಯುವ ಆದಾಯವನ್ನು ಜಿಲ್ಲಾ ಆರೋಗ್ಯ ರಕ್ಷಾ ಕವಚ ನಿಧಿಗೆ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯವಿರುವ ಔಷಧ ಮತ್ತು ಯಂತ್ರೋಪಕರಣಗಳು ಹಾಗೂ ರೋಗಿಗಳಿಗೆ ಒದಗಿಸುವ ಸೌಲಭ್ಯಗಳ ಖರೀದಿಗೆ ಬಳಕೆ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿನ ಹಸಿ ತ್ಯಾಜ್ಯಗಳಾದ ಉಳಿದ ಊಟ, ಹಣ್ಣಿನ ಸಿಪ್ಪೆಗಳು ಮುಂತಾದವುಗಳನ್ನು ವಿಲೇವಾರಿ ಮಾಡಲು ಬಯೋಗ್ಯಾಸ್ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಇದರಿಂದ ಆಸ್ಪತ್ರೆಯ ಬಳಕೆಗೆ ಗ್ಯಾಸ್ ಹಾಗೂ ಉತ್ತಮ ಗೊಬ್ಬರ ಸಹ ದೊರೆಯಲಿದೆ.

ಆಸ್ಪತ್ರೆ ತಾಜ್ಯದಿಂದ ಆದಾಯ
ಆಸ್ಪತ್ರೆಯ ತ್ಯಾಜ್ಯ ಎಂದರೆ ರೋಗಿಯ ರಕ್ತಸಿಕ್ತ ಬ್ಯಾಂಡೇಜ್, ಹತ್ತಿ, ಸಿರೆಂಜ್ಗಳು ಎಂಬ ಭಾವನೆ ಇದೆ. ಆದರೆ, ಈ ತ್ಯಾಜ್ಯಗಳು ವೈದ್ಯಕೀಯ ತ್ಯಾಜ್ಯವಾಗಿ ಬೇರೆ ಕಡೆ ಕಳಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಬಳಸುವ ಸಿರೆಂಜ್ ಪ್ಯಾಕೆಟ್ ಮೇಲಿನ ಕವರ್, ಮಾತ್ರೆ ಮೇಲಿನ ಕವರ್, ಔಷಧದ ಪ್ಯಾಂಕಿಂಗ್ ಬಾಕ್ಸ್, ಖಾಲಿ ಗ್ಲುಕೋಸ್ ಬಾಟಲ್, ಆವರಣದಲ್ಲಿ ದೊರೆಯುವ ಖಾಲಿ ನೀರಿನ ಬಾಟಲ್ ಮುಂತಾದ ನಿರುಪಯುಕ್ತ ವಸ್ತುಗಳು ಆಸ್ಪತ್ರೆಗೆ ಆದಾಯವನ್ನು ತಂದುಕೊಡುತ್ತಿವೆ.

ಆರೋಗ್ಯ ರಕ್ಷಾ ಕವಚ ನಿಧಿ
ಆರಂಭದಲ್ಲಿ ಪ್ರತಿ ತಿಂಗಳು 250 ಕೆಜಿ ಘನ ತ್ಯಾಜ್ಯ ಆಸ್ಪತ್ರೆಯಲ್ಲಿ ದೊರೆಯುತ್ತಿತ್ತು. ಪ್ರಸ್ತುತ ಪ್ರತಿ ತಿಂಗಳು 1 ಟನ್ ನಷ್ಟು ತ್ಯಾಜ್ಯ ದೊರೆಯುತ್ತಿದೆ, ಇದನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ಮಾರಾಟಕ್ಕೆ ಸಿದ್ದಪಡಿಸುತ್ತಿದ್ದು, ಕಳೆದ ಬಾರಿ ಸುಮಾರು 5 ಟನ್ ನಷ್ಟು ಮಾರಾಟ ಮಾಡಿ 33,000 ರೂ. ಆದಾಯಗಳಿಸಲಾಗಿದೆ. ಈ ಹಣವನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಕವಚ ನಿಧಿಗೆ ಬಳಕೆ ಮಾಡಲಾಗುತ್ತಿದೆ.

ಟೆಂಡರ್ ಕರೆಯಲಾಗಿದೆ
ಪ್ರಸ್ತುತ ಸುಮಾರು 7 ಟನ್ ನಷ್ಟು ತ್ಯಾಜ್ಯ ಸಂಗ್ರಹ ಮಾಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಸಂಗ್ರಹಗೊಂಡ ತ್ಯಾಜ್ಯವನ್ನು ಹೆಚ್ಚಿನ ಮುತುವರ್ಜಿ ವಹಿಸಿ, ಸಮರ್ಪಕ ರೀತಿಯಲ್ಲಿ ವಿಂಗಡನೆ ಮಾಡಲಾಗಿದೆ. ಈ ಬಾರಿ ಸುಮಾರು 60,000 ರೂ. ಆದಾಯ ನಿರೀಕ್ಷಿಸಲಾಗಿದೆ. ವಸ್ತುಗಳ ಹರಾಜು ಕುರಿತಂತೆ ಈಗಾಗಲೇ ಟೆಂಡರ್ ಕರೆಯಲಾಗಿದೆ.

ಗೊಬ್ಬರ ತಯಾರಿ ಆರಂಭ
ಉಡುಪಿ ಆಸ್ಪತ್ರೆ ಮುಂದಿರುವ ಪಾರ್ಕ್ನಲ್ಲಿ ಸಂಗ್ರಹವಾಗುವ ಮರಗಿಡಗಳ ಕಸವನ್ನು ಸಂಗ್ರಹಿಸಿ ಗೊಬ್ಬರ ತಯಾರಿಸಲು ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ತಯಾರಾದ ಗೊಬ್ಬರವನ್ನು ಪ್ರತಿ ಬುಟ್ಟಿಗೆ ರೂ.20 ರಂತೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಸಂಗ್ರಹಗೊಂಡಿದ್ದ ಗೊಬ್ಬರವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಖರೀದಿಸಿದ್ದು, ಮತ್ತೊಮ್ಮೆ ಗೊಬ್ಬರ ತಯಾರಿಕೆ ಆರಂಭಗೊಂಡಿದೆ. ಇದೇ ಗೊಬ್ಬರವನ್ನು ಬಳಸಿ ಕೇಂದ್ರದಲ್ಲಿ ಚಿಕ್ಕ ಕೈತೋಟ ಹಾಗೂ ಔಷಧಿಯ ಗಿಡಗಳನ್ನು ಬೆಳೆಸಲಾಗುತ್ತಿದೆ.












Click it and Unblock the Notifications