ಕುಂದಾಪುರ ನಾಗರೀಕನ ಪತ್ರಕ್ಕೆ ಪ್ರಧಾನಿ ಕಚೇರಿ ಸ್ಪಂದನೆ
ಉಡುಪಿ, ಜನವರಿ 27: ದಶಕದಿಂದ ಉಡುಪಿಯ ಕುಂದಾಪುರದಲ್ಲಿ ಹೆದ್ದಾರಿ ಕಾಮಗಾರಿ ಮತ್ತು ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ ಎಂದು ಕುಂದಾಪುರ ನಾಗರೀಕನೋರ್ವ ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದನು.
Recommended Video
ಕುಂದಾಪುರದ ಗಾಂಧಿ ಮೈದಾನದ ಎದುರಿನ ಬಿ.ವಿ.ಎಸ್ ರಸ್ತೆಯ ನಿವಾಸಿ ವಿಘ್ನೇಶ್ ಶೆಣೈ ಎನ್ನುವವರು ಕುಂದಾಪುರದ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಶನಿವಾರ ಪ್ರಧಾನಿ ಕಚೇರಿಯಿಂದ ಸ್ಪಂದಿಸಿ ಉತ್ತರ ಬಂದಿದೆ.
ಉಡುಪಿಯ ಸಂತೆಕಟ್ಟೆಯಲ್ಲಿ ಕೆಲಸ ಮಾಡುತ್ತಿರುವ ವಿಘ್ನೇಶ್ ಡಿಸೆಂಬರ್ 24 ರಂದು ರಸ್ತೆ ಕಾಮಗಾರಿ ವಿಳಂಬದ ಕುರಿತು ಪತ್ರ ಬರೆದಿದ್ದರು, ಅದಕ್ಕೆ ಸ್ಪದಿಸಿದ ಪ್ರಧಾನಿ ಕಚೇರಿಯು, "ನಿಮ್ಮ ಪತ್ರ ನಮಗೆ ತಲುಪಿದೆ, ನಿಮ್ಮ ಪತ್ರ ಹಾಗೂ ಸಮಸ್ಯೆ ಕುರಿತು ಸಂಬಂಧಪಟ್ಟ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಗೆ ಕಳುಹಹಿಸಲಾಗಿದೆ' ಎಂದು ಉತ್ತರ ಬಂದಿದೆ.

ವಿಘ್ನೇಶ್ ಬರೆದ ಪತ್ರದಲ್ಲಿ "ಕುಂದಾಪುರದಲ್ಲಿ 10 ವರ್ಷಗಳಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ, ಇಲ್ಲಿ ಸರ್ವಿಸ್ ರಸ್ತೆ ಮತ್ತು ಹೆದ್ದಾರಿ ಒಂದೇ ಆಗಿದೆ. ದಿನನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ' ಎಂದು ಬರೆದಿದ್ದರು.
"ಬೆಂಗಳೂರು ಮತ್ತಿತರ ಕಡೆಯಿಂದ ಬರುವ ಬಸ್ ಗಳಿಗೆ ಸಮಸ್ಯೆಯಾಗುತ್ತಿದೆ. ಅಷ್ಟೇ ಅಲ್ಲದೇ ಸುರತ್ಕಲ್ ನಿಂದ ಕುಂದಾಪುರದವರೆಗೆ ಹೆದ್ದಾರಿ 66 ರ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೂ ಸಾಸ್ತಾನ, ಹೆಜಮಾಡಿಯಲ್ಲಿ ನಿರಂತರವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿ'' ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.
ಪ್ರಧಾನ ಮಂತ್ರಿಗೆ ಪತ್ರ ಬರೆದು, ವಾಪಸ್ ಸ್ಪಂದಿಸಿದ ಉತ್ತರ ಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ವಿಘ್ನೇಶ್ ಶೆಣೈ, ""ಈ ಬಗ್ಗೆ ಸಂಬಂಧಪಟ್ಟ ಸಂಸದರು, ಸಚಿವರು, ಶಾಸಕರು, ಅಧಿಕಾರಿಗಳ ಸಹಿತ ಎಲ್ಲರ ಗಮನಕ್ಕೂ ತಂದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಆದ್ದರಿಂದ ಬೇರೆ ದಾರಿ ಕಾಣದೇ ಪ್ರಧಾನಿಗೆ ಪತ್ರ ಬರೆದೆ'' ಎಂದು ಹೇಳಿದ್ದಾರೆ.












Click it and Unblock the Notifications