ಉಡುಪಿ : ಪ್ರವೀಣ್ ಕೊಲೆ ಪ್ರಕರಣ ಹೆಬ್ರಿ ಠಾಣೆಗೆ ವರ್ಗಾವಣೆ
ಉಡುಪಿ, ಆಗಸ್ಟ್ 22 : ಭಾರೀ ಚರ್ಚೆಗೆ ಕಾರಣವಾಗಿರುವ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣದ ತನಿಖೆ ಹೆಬ್ರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಳ್ಳಲಿದೆ. ಸದ್ಯ, ಬ್ರಹ್ಮಾವರ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.
ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಜ್ಕೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಎನ್ನಲಾದ ಗುಂಪು ರಾಡ್ನಿಂದ ಪ್ರವೀಣ್ ಮತ್ತು ಅಕ್ಷಯ್ ಮೇಲೆ ಹಲ್ಲೆ ನಡೆಸಿತ್ತು. ಈ ವೇಳೆ ವಾಹನದಲ್ಲಿದ್ದ ರಮೇಶ್ ಪೂಜಾರಿ ತಪ್ಪಿಸಿಕೊಂಡಿದ್ದರು.[ಎಚ್ಚರಿಕೆ ಮೀರಿದ್ದು ಪ್ರವೀಣ್ ಪೂಜಾರಿ ಜೀವಕ್ಕೆ ಎರವಾಯಿತೆ?]

ಅನಂತರ ಪ್ರವೀಣ್ ಮತ್ತು ಅಕ್ಷಯ್ನನ್ನು ಜಾನುವಾರುಗಳ ಜತೆಗೆ ಹಾಕಿಕೊಂಡು ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಜೂರಿಗೆ ತರಲಾಗಿತ್ತು. ಹಲ್ಲೆ ನಡೆಸಿದ ಆರೋಪಿಗಳಲ್ಲಿ ಶ್ರೀಕಾಂತ್ ಎಂಬಾತನ ವಿರುದ್ಧ ಕೆಲವು ಸಮಯದ ಹಿಂದೆ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.[ಗೋವು ಸಾಗಾಟ ವಿವಾದ, ದಕ್ಷಿಣ ಕನ್ನಡದ ಹಿಂದಿನ ಘಟನೆಗಳು]
ಆದ್ದರಿಂದ, ಪ್ರವೀಣ್ ಮತ್ತು ಅಕ್ಷಯ್ ಮೇಲೆ ಹಲ್ಲೆ ನಡೆಸಿದ ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಗೆ ಕರೆ ತಂದಿದ್ದರು. ಹಲ್ಲೆ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಪ್ರವೀಣ್ ಮೃತಪಟ್ಟಿದ್ದು ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ.[ದನ ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತನ ಕೊಲೆ]
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಬಂಧಿಸಲಾಗಿರುವ ಆರೋಪಿಗಳು ವಾಸವಾಗಿದ್ದದ್ದು ಸಹ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಆದ್ದರಿಂದ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣದ ಹೆಬ್ರಿಗೆ ವರ್ಗಾವಣೆಯಾಗುತ್ತಿದೆ.
ಗೊಂದಲಗಳು ಬೇಡ : ಪೊಲೀಸ್ ಠಾಣೆ ವ್ಯಾಪ್ತಿಯ ಬಗ್ಗೆ ಪ್ರಶ್ನೆ ಬಂದು ತನಿಖೆಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್ ಅವರು ಈ ಪ್ರಕರಣವನ್ನು ಹೆಬ್ರಿ ಠಾಣೆಗೆ ಹಸ್ತಾಂತರಿಸಲು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪ್ರವೀಣ್ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿ ಮತ್ತು ಅದಕ್ಕೆ ಹಲ್ಲೆಗೆ ಕುಮ್ಮಕ್ಕು ನೀಡಿದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.












Click it and Unblock the Notifications