'ಕೃಷ್ಣಮಠದಲ್ಲಿ ಭದ್ರತೆಯಿಲ್ಲ ಅಂದರೆ ಶ್ರೀಕೃಷ್ಣನನ್ನೇ ಅವಮಾನಿಸಿದಂತೆ'
ಉಡುಪಿ, ಮೇ 3 : ಶ್ರೀ ಕೃಷ್ಣಮಠದಲ್ಲಿ ಪ್ರಧಾನಿಗೆ ಭದ್ರತೆ ಇಲ್ಲ ಎಂದರೆ ಶ್ರೀಕೃಷ್ಣನನ್ನೇ ಅವಮಾನಿಸಿದಂತೆ. ಇದು ಉಡುಪಿ ಜಿಲ್ಲೆಯ ಜನತೆಗೂ ಮಾಡಿದ ಅವಮಾನ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಉಡುಪಿಯಲ್ಲಿ ಮತಯಾಚನೆ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕಾನೂನು ಸುವ್ಯವಸ್ಥೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಈ ಬಗ್ಗೆ ಲೋಕಸಭಾ ಸದಸ್ಯರು ಹೆಮ್ಮೆಪಡಬೇಕು. ಅದು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ, ಕ್ರೀಡಾ ಸಚಿವ, ಪ್ರಮೋದ್ ಮಧ್ವರಾಜ್ ಸಂದರ್ಶನ
ಶ್ರೀಕೃಷ್ಣನಷ್ಟು ಶಕ್ತಿಶಾಲಿ ದೇವರು ಯಾರಿದ್ದಾರೆ? ಅವರ ಆಶೀರ್ವಾದದಿಂದ ನನಗೆ ಮೂರು ಭಡ್ತಿ ಸಿಕ್ಕಿತು. ಪ್ರಧಾನಿ ಬಾರದೇ ಇರುವುದಕ್ಕೆ ಈ ರೀತಿ ಸಬೂಬು ನೀಡೋದು ಸರಿಯಲ್ಲ ಎಂದು ಹೇಳಿದ್ದಾರೆ. ಈ ಮೊದಲು ಬಿಜೆಪಿಯವರು ಸಿದ್ದರಾಮಯ್ಯ ಮಠಕ್ಕೆ ಬಂದಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದರು.
ಆದ್ರೆ, ಪ್ರಧಾನ ಮಂತ್ರಿ ಬರುವುದಿಲ್ಲ ಎಂದು ಗೊತ್ತಾದ ಮೇಲೂ ನಾಟಕ ಮಾಡಿದ್ದು ಯಾಕೆ? ಪೂಜೆ ಸ್ಥಗಿತ ಮಾಡಿ ಭಕ್ತರನ್ನು ತಡೆದಿದ್ದೇಕೆ? ಪ್ರಧಾನಿ ಭೇಟಿ ನೀಡ್ತಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದೇಕೆ ಎಂದು ಹೇಳಿದ್ದಾರೆ. ಪಾಪ ಸಂಸದೆ ಶೋಭಾ ಅವರಿಗೆ ತಮ್ಮದು ಯಾವ ಕ್ಷೇತ್ರ ಅಂತಾನೇ ಗೊತ್ತಿರಲಿಕ್ಕಿಲ್ಲ. ಇಡೀ ರಾಜ್ಯ ಸುತ್ತಾಡೋದ್ರಿಂದ ತನ್ನ ಕ್ಷೇತ್ರ ಮರೆತು ಹೋಗಿರಬಹುದು ಅಂತ ಸಚಿವರು ವ್ಯಂಗ್ಯವಾಡಿದ್ದಾರೆ.
ಕೃಷ್ಣಮಠದಲ್ಲಿ ಮೋದಿಗೆ ಜೀವ ಬೆದರಿಕೆ ಇತ್ತು: ಶೋಭಾ
ನರೇಂದ್ರ ಮೋದಿಯವರು ದೇಶದ ಪ್ರಧಾನಿ ಇರಬಹುದು. ನನ್ನ ಹೆಸರು ಪಿಎಂ. ಅಂದ್ರೆ ಪ್ರಮೋದ್ ಮಧ್ವರಾಜ್. ಉಡುಪಿಗೆ ನಾನೇ ಪಿಎಂ. ಇಲ್ಲಿ ಪ್ರಧಾನಿ ಬಂದು ಹೋದ್ರೆ ಯಾವುದೇ ಪರಿಣಾಮ ಬೀರದು. ಸ್ಥಳೀಯ ಕೆಲಸಗಳನ್ನು ನಾನೇ ಮಾಡಬೇಕು ಎಂದು ಹೇಳಿದರು.