'ದೇಶದಲ್ಲಿ ಬಡವರ ಬದುಕು ಹಿಂದೆಂದಿಗಿಂತ ದುಸ್ತರವಾಗಿದೆ'
ಉಡುಪಿ, ಸೆಪ್ಟೆಂಬರ್ 8: ಉಡುಪಿಯಲ್ಲಿ ಕೋಮು ಸೌಹಾರ್ದ ವೇದಿಕೆ ಮತ್ತು ಗೌರಿ ಬಳಗದಿಂದ ಗೌರಿ ಸಂಸ್ಮರಣ ಮತ್ತು ಎ.ಕೆ ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಮುಸ್ಲಿಂ ವೆಲ್ ಫೇರ್ ಅಸೋಸಿಯೇಷನ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಗತಿಪರ ಚಿಂತಕರು ಪತ್ರಕರ್ತೆ ಗೌರಿ ಅವರ ವಿಚಾರಧಾರೆ, ಬದುಕು ಮತ್ತು ಹೋರಾಟಗಳ ಕುರಿತು ಉಪನ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಚಿಂತಕ ಜಿ. ರಾಜಶೇಖರ್, ದಮನಿತರ ಪರ ಸದಾ ಧ್ವನಿ ಎತ್ತಿದವರು ಗೌರಿ ಲಂಕೇಶ್. ಇದೇ ಕಾರಣಕ್ಕೆ ಅವರು ತಮ್ಮ ಪ್ರಾಣ ಸಮರ್ಪಣೆ ಮಾಡಿದರು ಎಂದರು.
ಒಳ್ಳೆಯ ಉದ್ದೇಶ ಮತ್ತು ಮೌಲ್ಯಗಳಿಗಾಗಿ ಅವರು ಪ್ರಾಣ ಅರ್ಪಿಸಿದರು. ನಾವು ಕೂಡ ಅವರದೇ ಮೌಲ್ಯಗಳನ್ನು, ಸಿದ್ಧಾಂತಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಮತ್ತು ಅದಕ್ಜಾಗಿಯೇ ಜೀವನವನ್ನು ಸಮರ್ಪಿಸಬೇಕಾಗಿದೆ ಎಂದರು.

ಇವತ್ತು ದೇಶದಲ್ಲಿ ಬಡವರ ಬದುಕು ಎಂದಿಗಿಂತ ಹೆಚ್ಚು ದುಸ್ತರವಾಗಿದೆ. ಕೊಬ್ಬಿದ ಶ್ರೀಮಂತರು ಅಹಂಕಾರದ ಮಾತುಗಳನ್ನಾಡುವುದನ್ನು ನೋಡುತ್ತಿದ್ದೇವೆ. ಪ್ರಧಾನಿಯಾಗಿ ಮೋದಿ ಬಂದ ನಂತರ ಬಡವರು ಇನ್ನಷ್ಟು ಬಡವರಾಗಿಯೂ ಶ್ರೀಮಂತರು ಮತ್ತಷ್ಟು ಕೊಬ್ಬುತ್ತಲೂ ಇದ್ದಾರೆ ಎಂದು ಅಭಿಪ್ರಾಯ ಪಟ್ಟರು.
ದೇಶದಲ್ಲಿ ದಮನಿತರು ಮತ್ತು ಬಡವರು ಗೌರವಯುತವಾಗಿ ಬದುಕಬೇಕಾದರೆ ನರೇಂದ್ರ ಮೋದಿಯವರ ಸರ್ಕಾರ ತೊಲಗಬೇಕಾಗಿದೆ ಮತ್ತು ನಮ್ಮ ಹೋರಾಟದ ಉದ್ದೇಶವೂ ಇದೇ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ದಿವಂಗತ ಗೌರಿ ಲಂಕೇಶ್ ಮತ್ತು ಎ.ಕೆ ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.












Click it and Unblock the Notifications