ಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೆ ವೇದಿಕೆಯಾಗುತ್ತಿರುವ ಉಡುಪಿ ಜಿಲ್ಲಾ ಎಸ್ಪಿ ವರ್ಗಾವಣೆ
ಉಡುಪಿ, ಅಕ್ಟೋಬರ್. 03: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ವರ್ಗಾವಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ.
ಈ ವಿಚಾರದಲ್ಲಿ ನಿನ್ನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವೆ ಜಯಮಾಲ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇತ್ತ ಕಡೆ ಲಕ್ಷ್ಮಣ ನಿಂಬರಗಿ ಬೆಂಬಲಿಸಿ ಬಿಜೆಪಿ ಫೀಲ್ಡ್ ಗೆ ಇಳಿದಿದೆ.
ಹೌದು, ವಿಧಾನಪಕ್ಷದ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ "ಸುಸೂತ್ರ ಆಡಳಿತಕ್ಕೆ ನಮ್ಮ ಸಹಕಾರವಿದೆ. ಆದರೆ ಉಡುಪಿ ಜಿಲ್ಲಾ ಎಸ್ಪಿಯವರನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಸಹಿಸೋದಿಲ್ಲ" ಎಂದು ರಾಜ್ಯ ಸರಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ್ದು, ಟ್ವೀಟ್ ಸಹ ಮಾಡಿದ್ದಾರೆ.
ಭಾರತ್ ಬಂದ್ ಸಂದರ್ಭದಲ್ಲಿ ಉಡುಪಿಯಲ್ಲಿ ನಡೆದಿದ್ದ ಲಾಠಿಚಾರ್ಜ್ ವಿಚಾರ ಈಗ ರಾಜಕೀಯ ಸಂಘರ್ಷಕ್ಕೆ ಎಡೆಯಾಗುತ್ತಿದೆ. ಭಾರತ್ ಬಂದ್ ಸಂದರ್ಭದಲ್ಲಿ ಉಡುಪಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ವಾಗ್ವಾದ ನಡೆದಿತ್ತು.

ವಾಗ್ವಾದ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುವ ಹೊತ್ತಿಗೆ ಮಧ್ಯ ಪ್ರವೇಶಿಸಿದ ಲಕ್ಷ್ಮಣ ನಿಂಬರಗಿ ಕಾರ್ಯಕರ್ತರ ಮೇಲೆ ಲಘು ಲಾಠಿ ಚಾರ್ಜ್ ನಡೆಸಿದ್ದರು. ಇದು ಈಗ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ನಿನ್ನೆ ಮಂಗಳವಾರ (ಅಕ್ಟೋಬರ್.02) ಕಾಂಗ್ರೆಸ್ ಕಾರ್ಯಕರ್ತರು ಸಚಿವೆ ಜಯಮಾಲಾರನ್ನು ತರಾಟೆಗೆತ್ತಿಕೊಂಡು ಎಸ್ಪಿ ವರ್ಗಾವಣೆಗೆ ಪಟ್ಟು ಹಿಡಿದಿದ್ದಾರೆ.

ಎಸ್ಪಿ ಲಕ್ಷ್ಮಣ ನಿಂಬರಗಿ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದ ಬಗ್ಗೆ ಸಿಟ್ಟಾದ ಕಾಂಗ್ರೆಸ್ ಕಾರ್ಯಕರ್ತರು, ಹಬ್ಬದ ಸಮಯದಲ್ಲಿ ಎಸ್ಪಿ ಅವರ ಮನೆಯಲ್ಲಿ ಗಣಪತಿ ಇಟ್ಟಾಗ ಊಟ ಮಾಡಲು ಹೋಗಿದ್ದೀರಾ? ಎಂದು ಜಯಮಾಲ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ.












Click it and Unblock the Notifications