ಉಕ್ರೇನ್ನಲ್ಲಿ ಭಾರತೀಯರ ಮೇಲೆ ಪೆಪ್ಪರ್ ಸ್ಪ್ರೇ ಮಾಡುತ್ತಿದ್ದರು!
ಉಡುಪಿ, ಮಾರ್ಚ್ 13; ಯುದ್ಧಭೂಮಿ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಿ ತವರಿಗೆ ಕರೆ ತರುವ ಭಾರತ ಸರ್ಕಾರದ ಆಪರೇಷನ್ ಗಂಗಾ ಕಾರ್ಯಾಚರಣೆ ಅಂತಿಮ ಹಂತ ತಲುಪುತ್ತಿದೆ. ಉಕ್ರೇನ್ನಲ್ಲಿ ಸಿಲುಕಿದ್ದವರು ಸುರಕ್ಷಿತವಾಗಿ ವಾಪಸ್ ಆಗುತ್ತಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿದ್ದ ಉಡುಪಿಯ ಗ್ಲೆನ್ವಿಲ್ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಯುದ್ಧ ಭೂಮಿಯ ರೋಚಕ ಕ್ಷಣಗಳನ್ನು ತೆರೆದಿಟ್ಟಿದ್ದಾರೆ. ಖಾರ್ಕಿವ್ ನ್ಯಾಶನಲ್ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಗ್ಲೆನ್ವಿಲ್ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೆಮ್ಮಣ್ಣು ನಿವಾಸಿ.
ಯುದ್ಧ ಭೂಮಿಯ ವಾತವರಣದ ಬಗ್ಗೆ ಗ್ಲೆನ್ವಿಲ್ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. "ಯುದ್ದವನ್ನು ಪುಸ್ತಕ, ಸಿನಿಮಾದಲ್ಲಿ ಮಾತ್ರ ನೋಡಿದ್ದೆ. ಆದರೆ ಉಕ್ರೇನ್ನಲ್ಲಿ ನಿಜವಾದ ಯುದ್ದ ನೋಡಿ ಭಯದಲ್ಲೇ ದಿನಕಳೆಯುತ್ತಿದ್ದೆ. ಫೆಬ್ರವರಿ 23ರಂದು ನಮಗೆ ತರಗತಿ ಆರಂಭವಾಗಿತ್ತು. ಮರುದಿನವೇ ಬಂಕರ್ ತೆರಳುವಂತೆ ಕಾಲೇಜಿನ ಹಾಸ್ಟೆಲ್ ಆಡಳಿತ ಸೂಚನೆ ಕೊಟ್ಟಿತ್ತು" ಎಂದರು.

"ಮಾರ್ಕೆಟ್ನಿಂದ ನಾನು ಹಾಗೂ 14 ಮಂದಿ ಸ್ನೇಹಿತರು ಆದಷ್ಟು ಆಹಾರವನ್ನು ತೆಗೆದುಕೊಂಡಿದ್ದೆವು. ಎರಡು ದಿನದ ಬಳಿಕ ಕರ್ಪ್ಯೂ ಹಿನ್ನಲೆಯಲ್ಲಿ ಆಹಾರದ ಕೊರತೆ ಆರಂಭವಾಗಿತ್ತು. ಆಹಾರ ತರೋದು, ತಯಾರು ಮಾಡೋದು ಬಹಳ ಕಷ್ಟದ ಕೆಲಸವಾಗಿತ್ತು. ದಿನ ಹೋದಂತೆ ದಿನಕ್ಕೆ ಒಂದು ಹೊತ್ತು ಊಟ ಸಿಗುತ್ತಿತ್ತು" ಎಂದು ಗ್ಲೆನ್ವಿಲ್ ಅನುಭವ ಹಂಚಿಕೊಂಡರು.
"ಯುದ್ಧ ಭೂಮಿಯಲ್ಲೇ ಭಾರತೀಯ ರಾಯಭಾರಿ ಕಛೇರಿಯ ಸೂಚನೆಯಂತೇ ಮಾರ್ಚ್ 2ರಂದು ರೈಲು ನಿಲ್ದಾಣಕ್ಕೆ ಹೋದೆವು. ಅಲ್ಲಿ ಉಕ್ರೇನ್ ನಿವಾಸಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಭಾರತೀಯರ ಮೇಲೆ ಹಲ್ಲೆ ನಡೆಸುತ್ತಿದ್ದರು, ಕಾಲಿನಿಂದ ಒದ್ದು, ಪೆಪ್ಪರ್ ಸ್ಪ್ರೇ ಮಾಡುತ್ತಿದ್ದರು. ಅದನ್ನು ನೋಡಿ ನಮಗೂ ಭಯವಾಯಿತು. ರೈಲು ಹತ್ತುವ ಭರವಸೆಯನ್ನೂ ಕಳೆದುಕೊಂಡೆವು" ಎಂದು ನೆನಪು ಬಿಚ್ಚಿಟ್ಟರು.
"ರೈಲು ನಿಲ್ದಾಣದ ಬಳಿ ಏರ್ ಸ್ಟ್ರೈಕ್ ನಡೆಯಿತು. ದೂರದಿಂದ ಆರಂಭವಾದ ಬಾಂಬ್ ಶೆಲ್ಲಿಂಗ್ ಸದ್ದು ಹತ್ತಿರದಲ್ಲೇ ಕೇಳತೊಡಗಿತು. ಮೆಟ್ರೋ ರೈಲು ನಿಲ್ದಾಣದಿಂದ ನಡೆಯುತ್ತಿದ್ದಾಗ ನಮ್ಮ ಮೇಲೆ ಏರ್ ಸ್ಟ್ರೈಕ್ ಆಗಿತ್ತು. ಬಾಂಬ್ ಶೆಲ್ಲಿಂಗ್ ಮೆಟಲ್ ತುಂಡು ಮೇಲಿಂದ ಬೀಳುತ್ತಿತ್ತು. ಆಗ ನೇರ ಮೆಟ್ರೋ ಸ್ಟೇಷನ್ ಕೆಳಗಿನ ಬಂಕರ್ಗೆ ಹೋಗಿ ದಾಳಿಯಿಂದ ತಪ್ಪಿಸಿಕೊಂಡೆವು" ಎಂದು ಗ್ಲೆನ್ವಿಲ್ ವಿವರಿಸಿದರು.
"ಬಂಕರ್ನಲ್ಲಿ ಇರುವ ಸಂಧರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ಖಾರ್ಕಿವ್ಗೆ ಸಮೀಪ ಇರುವ ಪಿಸೋಚಿನ್ ನಗರಕ್ಕೆ ಹೋಗುವಂತೆ ಸೂಚನೆ ಬಂದಿತ್ತು. ಪಿಸೋಚಿನ್ನಲ್ಲಿ ಹೋಟೆಲ್ ಹಾಗೂ ಆಹಾರ ವ್ಯವಸ್ಥೆ ಮಾಡಿರುವುದಾಗಿ ಧೈರ್ಯ ಕೊಟ್ಟರು. ಅಲ್ಲಿಂದ 17 ಕಿಲೋಮೀಟರ್ ನಡೆದು ಪಿಸೋಚಿನ್ ಹೋದೆವು. ಮಾರ್ಚ್ 2ರಿಂದ ಎರಡು ದಿನ ಪಿಸೋಚಿನ್ನಲ್ಲಿ ಉಳಿದು ಬಸ್ ಮೂಲಕ ಪೋಲ್ಟೋವಾ ಪ್ರದೇಶಕ್ಕೆ ಹೋದೆವು" ಎಂದು ಹೇಳಿದರು.
"ಅಲ್ಲಿಂದ 1 ಸಾವಿರ ಕಿಲೋಮೀಟರ್ ದೂರವಿರುವ ರೊಮೇನಿಯಾ ಗಡಿಯವರೆಗೆ ಭಾರತೀಯ ರಾಯಭಾರ ಕಚೇರಿ ಬಸ್ ವ್ಯವಸ್ಥೆ ಮಾಡಿತ್ತು. ಮಾರ್ಚ್ 7ಕ್ಕೆ ಗಡಿ ತಲುಪಿ ಅಲ್ಲಿಂದ ವಿಮಾನದ ಮೂಲಕ ಮರುದಿನ ದೆಹಲಿ ತಲುಪಿದೆ. ರಾಯಭಾರ ಕಚೇರಿ ಭಾರತಕ್ಕೆ ಕರೆತರುವ ಭರವಸೆ ನೀಡಿತ್ತು. ಭರವಸೆಯಂತೆ ನಮ್ಮನ್ನು ತಾಯ್ನಾಡಿಗೆ ಕರೆದುಕೊಂಡು ಬಂದಿದೆ. ತುಂಬಾ ದಕ್ಷತೆಯಿಂದ ನಮ್ಮನ್ನ ಕರೆದುಕೊಂಡು ಬಂದಿದೆ. ಹೃದಯಾಂತರಾಳದಿಂದ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದರು.
"ಭಾರತ ಧ್ವಜದೊಂದಿಗೆ ನಾವು ಸೇಫ್ ಆಗಿ ಬಂದಿರುವುದು ಹೆಮ್ಮೆ. ಭಾರತ ಧ್ವಜದ ಪವರ್ ಏನು ಎಂದು ತೋರಿಸಿದೆ. ಪಾಕಿಸ್ತಾನಿ ವಿದ್ಯಾರ್ಥಿಗಳು ಕೂಡ ಭಾರತದ ಧ್ವಜದ ಸಹಾಯದೊಂದಿಗೆ ನಮ್ಮೊಂದಿಗೆ ಬಂದಿದ್ದಾರೆ" ಎಂದು ಗ್ಲೆನ್ವಿಲ್ ತಮ್ಮ ಭಯಾನಕ ಅನುಭವ ಹಂಚಿಕೊಂಡರು.
ಮಗ ಸುರಕ್ಷಿತವಾಗಿ ಮನೆಗೆ ಆಗಮಿಸಿರುವುದರಿಂದ ಗ್ಲೆನ್ವಿಲ್ ಪೋಷಕರು ಸಂತಸಗೊಂಡಿದ್ದಾರೆ. ಗ್ಲೆನ್ವಿಲ್ ತಾಯಿ ಐಡಾ ಮಾತನಾಡಿ, "ಉಕ್ರೇನ್ನಲ್ಲಿ ಮಗನಿಗೆ ಮೆಡಿಕಲ್ ಸೀಟ್ ಸಿಕ್ಕಿರುವ ಖುಷಿಯಾಗಿತ್ತು. ಯುದ್ದ ಆರಂಭವಾದ ಮೇಲೆ ಆತಂಕ ಆಗಿತ್ತು. ನಮ್ಮ ಮಗನಿಗೆ ಸಣ್ಣ ವಯಸ್ಸು ಹೇಗೆ ಸಂಭಾಳಿಸುತ್ತಾನೆ ಅನ್ನೋ ಆತಂಕ ಇತ್ತು. ಪ್ರತಿ ಗಂಟೆ ಮಾತುಕತೆ ನಡೆಸುತ್ತಿದ್ದೆವು. ಊಟ ಇಲ್ಲ, ನೀರಿಗೆ ಕೊರತೆ ಎಲ್ಲಾ ಹಂಚಿಕೊಳ್ಳುತ್ತಿದ್ದ. ನಾವು ಊಟ ಮಾಡುವಾಗ ನಮ್ಮ ಮಗ ಹಸಿವೆಯಿಂದ ಇರೋದು ನಮಗೆ ಕಷ್ಟ ಆಗುತ್ತಿತ್ತು. ಈಗ ಸುರಕ್ಷಿತವಾಗಿ ಮನೆಗೆ ಬಂದಿರೋದು ಖುಷಿಯಾಗಿದೆ" ಎಂದು ಸಂತಸ ಹಂಚಿಕೊಂಡರು.












Click it and Unblock the Notifications