ಮಂಗಗಳ ಸಾವು:'ಮುಖ್ಯ ಪ್ರಾಣ'ನ ಮೊರೆ ಹೋದ ಉಡುಪಿ ನಾಗರಿಕರು
ಉಡುಪಿ, ಜನವರಿ 23: ಉಡುಪಿ ಜಿಲ್ಲೆಯಲ್ಲಿ ಮಾರಕ ಮಂಗನ ಕಾಯಿಲೆ ಹರಡುವ ಭೀತಿ ಎದುರಾಗಿದ್ದು, ಈ ಕಾಯಿಲೆ ಹರಡದಂತೆ ರಕ್ಷಣೆ ಕೋರಿ ನಾಗರಿಕರು ದೇವರ ಮೊರೆ ಹೋಗಿದ್ದಾರೆ. ಮಂಗನ ಕಾಯಿಲೆಯಿಂದ ರಕ್ಷಿಸುವಂತೆ ಉಡುಪಿಯ ಇಂದ್ರಾಳಿ ಮುಖ್ಯಪ್ರಾಣನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಮಂಗನ ಕಾಯಿಲೆ ಭೀತಿ ಆವರಿಸಿದ ಹಿನ್ನೆಲೆಯಲ್ಲಿ ಜನರಿಗೆ ಹಾಗೂ ಮಂಗಗಳಿಗೆ ರಕ್ಷಣೆ ನೀಡುವಂತೆ ಕೋರಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಮುಖ್ಯಪ್ರಾಣನ ಮೊರೆ ಹೋಗಿದೆ. ಇಂದ್ರಾಳಿಯ ಪ್ರಸಿದ್ಧ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಮಂಗನ ಕಾಯಿಲೆ ಯಾರಿಗೂ ಬಾಧಿಸದಿರಲಿ ಹಾಗೂ ಕಾಯಿಲೆ ದೂರವಾಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು , ಬಡಗಬೆಟ್ಟು ಕ್ರೆಡಿಟ್ ಕೋ_ ಅಪರೇಟಿವ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ ಸದಸ್ಯ ಅಶೋಕ್ ನಾಯ್ಕ್, ಕುಶಾಲ್ ಶೆಟ್ಟಿ , ಮನೋಹರ್ ಶೆಟ್ಟಿ, ಶೋಭಾ ಡಿ ಶೆಟ್ಟಿ,ಅರವಿಂದ ಶೆಟ್ಟಿ, ರವೀಂದ್ರನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಮತ್ತೆ 7 ಮಂಗಗಳ ಮೃತ ದೇಹ ಪತ್ತೆಯಾಗಿದೆ. ಜಿಲ್ಲೆಯ ಸಾಯಿಬರ ಕಟ್ಟೆ ಶಿರಿಯಾದಲ್ಲಿ 3 , ಬೈಂದೂರಿನಲ್ಲಿ 2, ಬಸ್ರೂರು, ನಂದಳಿಕೆಯಲ್ಲಿ ತಲಾ 1 ಮೃತ ದೇಹ ಪತ್ತೆಯಾಗಿದೆ. ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ ಬಾ ಆಸ್ಪತ್ರೆಗೆ ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ 109 ಮಂದಿ ದಾಖಲಾಗಿದ್ದಾರೆ.
45 ಮಂದಿಗೆ ಮಂಗನ ಕಾಯಿಲೆ ಇರುವುದು ದೃಢವಾಗಿದೆ. ಈವರೆಗೆ 81 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.












Click it and Unblock the Notifications