ಉಡುಪಿಯಲ್ಲಿ ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿ ಮುಂದೆ ಸರತಿ ಸಾಲು
ಉಡುಪಿ, ಮೇ 04: ಉಡುಪಿ ಜಿಲ್ಲೆಯಾದ್ಯಂತ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದೆ. ಹೀಗಾಗಿ ಮದ್ಯ ಕೊಂಡುಕೊಳ್ಳಲು ಬೆಳಿಗ್ಗಿನಿಂದಲೇ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ.
ಇಂದು ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಸರತಿ ಸಾಲಿನಲ್ಲಿ ನಿಂತಿದ್ದ ಗ್ರಾಹಕರು ಮದ್ಯದಂಗಡಿ ತೆರೆಯುವುದನ್ನೇ ಕಾಯುತ್ತಿದ್ದರು. ಕೆಲವೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಮಧ್ಯಾಹ್ನದವರೆಗೆ ಮಾತ್ರ ಮದ್ಯ ಮಾರಾಟ: ಉಡುಪಿ ಶಾಸಕ
ಇನ್ನು ಉಡುಪಿಯ ಹಲವೆಡೆಗಳಲ್ಲಿ ಭದ್ರತೆ ಮತ್ತು ಕಾನೂನು ಪಾಲನೆ ದೃಷ್ಟಿಯಿಂದ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ವೈನ್ ಶಾಪ್ ಗಳ ಮುಂದೆ ಮೀಟರ್ ಅಂತರದಲ್ಲಿ ಸರ್ಕಲ್ ಮಾರ್ಕ್ ಹಾಕಲಾಗಿದೆ. ಗ್ರಾಹಕರು ಅದರಲ್ಲಿ ನಿಂತು ಮದ್ಯ ಖರೀದಿಸಬೇಕಾಗಿದೆ.
ನಿನ್ನೆಯಷ್ಟೇ, ಉಡುಪಿಯಲ್ಲಿ ಮಧ್ಯಾಹ್ನದ ತನಕ ಮಾತ್ರ ಮದ್ಯದಂಗಡಿಗಳು ತೆರೆದಿರಲಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದರು. "ನಮ್ಮ ಜಿಲ್ಲೆಯಲ್ಲಿ ಮದ್ಯವನ್ನು ಸಂಜೆಯ ತನಕ ಮಾರಾಟ ಮಾಡುವುದಿಲ್ಲ. ನಮ್ಮ ಮದ್ಯದಂಗಡಿ ಮುಖ್ಯ ಅಲ್ಲ, ಅದಕ್ಕಿಂತ ಜಿಲ್ಲೆಯ ಜನರ ಆರೋಗ್ಯ ನಮಗೆ ಮುಖ್ಯ" ಎಂದು ಹೇಳಿದ್ದರು.