ಜನಪ್ರತಿನಿಧಿಗಳಿಗೆ ಶುರುವಾಯ್ತು ಚುನಾವಣೆ ಬಹಿಷ್ಕಾರದ ಬಿಸಿ
ಉಡುಪಿ, ಮಾರ್ಚ್ 12: ಉಡುಪಿ ಜಿಲ್ಲೆಯಲ್ಲಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ವಿಧಾನಸಭೆ ಕ್ಷೇತ್ರ ಬೈಂದೂರು. ಕ್ಷೇತ್ರಾದಾದ್ಯಂತ ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ ಎನ್ನುವ ಕೂಗು ಇಂದು ನಿನ್ನೆಯದೆಲ್ಲ.
ಆದರೆ ಈಗ ಎದ್ದಿರುವ ರಸ್ತೆ ದುರಸ್ಥಿ ಕೂಗು ಮಾತ್ರ ಮುಂಬರುವ ಚುನಾವಣೆಯ ಅಭ್ಯರ್ಥಿಗಳಿಗೆ ಸಮಸ್ಯೆ ನೀಡಲಿರುವುದು ಖಂಡಿತ. ಬೈಂದೂರಿನ ನಾಗೂರು ಹೇರೂರು ಸಂಪರ್ಕ ರಸ್ತೆ ದುರಸ್ಥಿ ಮಾಡಿ, ಇಲ್ಲವಾದರೆ ಚುನಾವಣಾ ಬಹಿಷ್ಕಾರ ಎದುರಿಸಿ ಎನ್ನುತ್ತಿರುವ ಸ್ಥಳೀಯರು ಬೀದಿಗಿಳೀದು ಪ್ರತಿಭಟನೆ ಮಾಡುತ್ತಿದ್ದಾರೆ.
ಜೆಡಿಎಸ್ ಹಿರಿಯ ನಾಯಕರ ಕೈ ಸೇರಿದ ದ.ಕ.ಆಕಾಂಕ್ಷಿಗಳ ಪಟ್ಟಿ
ಹೌದು, ಜನರ ತಾಳ್ಮೆಗೂ ಮಿತಿ ಇದೆ, ಬಹುಕಾಲದಿಂದ ನಾಗೂರು ಹೇರೂರು ಸಂಪರ್ಕ ರಸ್ತೆ ದುರಸ್ಥಿ ಕಾಣದೆ ನೆನಗುದಿಗೆ ಬಿದ್ದ ಪರಿಣಾಮವಾಗಿ ಸಾರ್ವಜನಿಕರು ರಸ್ತೆಗೆ ಇಳಿದು ಪ್ರತಿಭಟಿಸಿರುವ ದೃಶ್ಯ ಇದು. ಈ ರಸ್ತೆಯ ಸುಮಾರು ಐದು ಕಿ.ಮೀ ಭಾಗವಂತೂ ವಾಹನ ಚಲಾಯಿಸುವುದು ಬಿಡಿ, ನಡೆದು ಸಾಗುವುದೇ ದುಸ್ಥರ ಎನ್ನುವ ಸ್ಥಿತಿಯಲ್ಲಿದೆ.
ಸುಮಾರು 2 ವರ್ಷಗಳಿಂದ ಈ ಸಂಪರ್ಕ ರಸ್ತೆಯ ದುರಸ್ಥಿಗೆ ಸಾರ್ವಜನಿಕರು ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯ ದುರವಸ್ಥೆಯಿಂದಾಗಿ ಇಲ್ಲಿ ಒಡಾಡುತ್ತಿದ್ದ ಎರಡು ಖಾಸಗಿ ಬಸ್ಗಳು ಇದೇ ಕಾರಣಕ್ಕೆ ಓಡಾಟ ನಿಲ್ಲಿಸಿವೆ. ಮುಂದೆ ಓದಿ...
ಓಡಾಡುವವರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು
ಸಂಜೆಯ ಬಳಿಕ ಹೇರೂರುವಿನಲ್ಲಿ ಆಟೋ ಓಡಿಸುವುದಿಲ್ಲ. ಇಡೀ ರಸ್ತೆಯಲ್ಲಿ ಧೂಳು ಏಳುತ್ತಿದೆ. ಯಡಕಂಟ, ಉಪ್ರಳ್ಳಿ, ಮೇಕೋಡು, ಹೇರೂರು, ನೂಜಾಡಿ, ತಂಕಬೆಟ್ಟು, ಹಳಗೇರಿಯ 4,000 ಕುಟುಂಬಗಳು, ರಸ್ತೆಯ ಅಕ್ಕಪಕ್ಕ ಇರುವ 3 ಹಿರಿಯ ಪ್ರಾಥಮಿಕ, 2 ಕಿರಿಯ ಪ್ರಾಥಮಿಕ ಶಾಲೆಗಳ, 4 ಅಂಗನವಾಡಿಗಳ ಸುಮಾರು 300 ಮಕ್ಕಳು ಈ ರಸ್ತೆಯನ್ನು ಪ್ರತಿದಿನ ಬಳಸಬೇಕಾಗಿದೆ. ಇವುಗಳ ಜತೆಗೆ ರಸ್ತೆ ಬದಿಯ ಮನೆ, ಅಂಗಡಿಗಳು ಧೂಳಿನ ಸ್ನಾನ ಮಾಡುತ್ತಿವೆ. ಓಡಾಡುವವರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕಾಗಿದೆ. ರಸ್ತೆಯ ಸ್ಥಿತಿ ಸಹಿಸಲು ಅಸಾಧ್ಯ ಎನ್ನುವ ಮಟ್ಟ ತಲಪಿದೆ . ಹೀಗಾಗಿ ಗ್ರಾಮಸ್ಥರು ಪ್ರತಿಭಟನೆಯ ಮೊರೆ ಹೋಗಿದ್ದಾರೆ.
ಟೆಂಡರ್ ಇನ್ನೂ ಅಂತಿಮಗೊಂಡಿಲ್ಲ
ಬೈಂದೂರು ವಿಧಾನಸಭಾ ಚುನಾವಣೆಯ ಮುನ್ನ ಅಂದಿನ ಕಾಂಗ್ರೆಸ್ ಶಾಸಕ ಕೆ. ಗೋಪಾಲ ಪೂಜಾರಿ ಈ ರಸ್ತೆಗೆ 3 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದ್ದರು. ಚುನಾವಣೆಯಲ್ಲಿ ಅವರು ಸೋತು, ಬಿಜೆಪಿಯ ಬಿ.ಎಂ. ಸುಕುಮಾರ ಶೆಟ್ಟಿ ಶಾಸಕರಾದರು. ಸರ್ಕಾರವೂ ಬದಲಾಯಿತು. ರಸ್ತೆಯನ್ನು ಎರಡು ಭಾಗಗಳಲ್ಲಿ ದುರಸ್ತಿ ಮಾಡಲು ಒಟ್ಟು ರೂ.2. 4 ಕೋಟಿ ಮೊತ್ತದ ಅಂದಾಜು ತಯಾರಿಸಿ, ಟೆಂಡರು ಕರೆಯಲಾಯಿತು. ಆದರೆ ಇಲಾಖೆ ಅನುಸರಿಸಬೇಕಾದ ಪ್ರಕ್ರಿಯೆಗಳ ಕಾರಣಗಳಿಂದ ಟೆಂಡರು ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗುತ್ತಿದೆ.
ಒಂದೇ ಒಂದು ಕ್ಷೇತ್ರಕ್ಕೆ 3 ಹಂತದಲ್ಲಿ ಚುನಾವಣೆ: ಇದೊಂದು ದಾಖಲೆ
ದುರಸ್ತಿ ಮಳೆಗಾಲದ ಬಳಿಕ ಆರಂಭ?
ದುರಸ್ತಿ ಕಾರ್ಯ ತಕ್ಷಣ ಆರಂಭವಾಗದೆ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾದರೆ ದುರಸ್ತಿ ಕಾರ್ಯ ಮಳೆಗಾಲದ ಬಳಿಕ ಆರಂಭವಾಗಬೇಕಾಗುತ್ತದೆ. ಅಲ್ಲಿಯ ತನಕ ತಡೆದುಕೊಳ್ಳುವ ತಾಳ್ಮೆ ನಮಗಿಲ್ಲ, ಒಂದು ಹಂತದಲ್ಲಿ ನೀತಿಸಂಹಿತೆ ಜಾರಿ ಆಗುವುದರೊಳಗೆ ದುರಸ್ತಿ ಕಾರ್ಯ ಆರಂಭವಾಗದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟನಾ ನಿರತರು ಘೋಷಿಸಿದ್ದಾರೆ.
ಒಡೆದ ಸ್ಥಳೀಯರ ಸಹನೆ ಕಟ್ಟೆ
ಒಟ್ಟಿನಲ್ಲಿ ಭರವಸೆ, ಆಶ್ವಾಸನೆ ನೀಡಿ ಅಧಿಕಾರ ಪಡೆಯುವ ಜನಪ್ರತಿನಿಧಿಗಳು ಜನರನ್ನು ಮರೆತಿದ್ದಾರೆ. ನಿತ್ಯ ರಸ್ತೆ ಧೂಳು ಕುಡಿದು ರಸ್ತೆಯಲ್ಲಿ ಕಷ್ಟ ಪಟ್ಟು ನಡೆದು ಸಾಗುವ ಸ್ಥಳೀಯರ ಸಹನೆ ಕಟ್ಟೆ ಒಡೆದಿದೆ. ಚುನಾವಣಾ ಬಹಿಷ್ಕಾರ ಬೆದರಿಕೆಯಿಂದಾದ್ರೂ ರಸ್ತೆ ದುರಸ್ಥಿಯಾಗುತ್ತಾ ಕಾದು ನೋಡಬೇಕಾಗಿದೆ.