ಪಡುಬಿದ್ರಿ; ತಂದೆ, ಮಗನನ್ನು ಬಲಿ ಪಡೆದ ಲಾರಿ ಕ್ಲೀನರ್, ಆತಂಕಕಾರಿ ಮಾಹಿತಿ ಬಯಲು
ಮಂಗಳೂರು, ಸೆಪ್ಟೆಂಬರ್, 16: ಉಡುಪಿಯ ಪಡುಬಿದ್ರಿಯಲ್ಲಿ ರಸ್ತೆ ಬದಿ ನಿಂತಿದ್ದ ತಂದೆ-ಮಗನ ಮೇಲೆ ಲಾರಿ ಹರಿದಿದೆ. ಕ್ಲೀನರ್ ಆಗಿದ್ದ 16 ವರ್ಷದ ಬಾಲಕ ಲಾರಿ ಹರಿಸಿದ ಪರಿಣಾಮ 56 ವರ್ಷದ ಪ್ರಭಾಕರ್ ಶಂಕರ್ ಪೊದ್ದಾರ್ , ಅವರ ಮಗ 13 ವರ್ಷದ ಸಮರ್ಥ್ ಪೊದ್ದಾರ್ ಸಾವನ್ನಪ್ಪಿದ್ದಾರೆ. ಪಡುಬಿದ್ರೆ ಠಾಣಾ ವ್ಯಾಪ್ತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗ ಬುಧವಾರ ಬೆಳಗ್ಗೆ ಅಪಘಾತ ನಡೆದಿದ್ದು, ಪ್ರಭಾಕರ್ ಶಂಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಮಗ ಸಮರ್ಥ್ ಪೊದ್ದಾರ್ ಗುರುವಾರ ಸಂಜೆ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
56 ವರ್ಷದ ಶಂಕರ್ ಪೊದ್ದಾರ್ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಭಗವಾನ್ ಗಲ್ಲಿ ನಿವಾಸಿ ಆಗಿದ್ದು, ಆಭರಣ ವ್ಯಾಪಾರಿ ಆಗಿದ್ದಾರೆ. ಮತ್ತು ಅವರ 13 ವರ್ಷದ ಮಗ ಸಮರ್ಥ್ ಪೊದ್ಧಾರ್ ಉಡುಪಿಯ ಕುತ್ಯಾರು ಆನೆಗುಂದಿ ಮಠದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಚೌತಿ ರಜೆ ಮುಗಿಸಿ ಪ್ರಭಾಕರ್ ಶಂಕರ್ ಮಗನನ್ನು ಊರಿನಿಂದ ಕರೆದುಕೊಂಡು ಬಂದಿದ್ದರು. ಬೆಳಗ್ಗೆ ಬಸ್ನಿಂದ ಇಳಿದು ತಂದೆ-ಮಗ ಇಬ್ಬರೂ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಯವಸ್ವರೂಪಿಯಾಗಿ ಬಂದ ಹದಿನಾಲ್ಕು ಚಕ್ರದ ಲಾರಿ ತಂದೆ-ಮಗನ ಮೇಲೆ ಹರಿದಿದ್ದು, ತಂದೆ ಶಂಕರ್ ಪೊದ್ಧಾರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗ ಸಮರ್ಥ್ ಗುರುವಾರ ಸಂಜೆ ಉಡುಪಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಲಾರಿ ಚಾಲಕ
ತಂದೆ-ಮಗನಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ ಪರಾರಿ ಆಗಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಲಾರಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಲಾರಿ ಸೂರತ್ನಿಂದ ಗಂಜಿಮಠದ ಸಮೀಪದ ಫ್ಯಾಕ್ಟರಿಗೆ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ನಂತರ ಲಾರಿ ಚಾಲಕ ಶೇಖರ್ನನ್ನು ವಶಕ್ಕೆ ಪಡೆದಾಗ ಆತ ಪೊಲೀಸರ ಮುಂದೆ ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

ಲಾರಿಯನ್ನು ಕ್ಲೀನರ್ ಆಗಿದ್ದ, 16 ವರ್ಷದ ಬಾಲಕ ಚಲಾಯಿಸುತ್ತಿದ್ದ ಎಂದು ಚಾಲಕ ಶೇಖರ್ ಬಾಯಿಬಿಟ್ಟಿದ್ದಾನೆ. ಲಾರಿಯನ್ನು 16 ವರ್ಷದ ಬಾಲಕ ರಾತ್ರಿಯಿಡೀ ಚಲಾಯಿಸಿಕೊಂಡು ಬಂದಿದ್ದ ಎಂದು ಅಘಾತಕಾರಿ ಮಾಹಿತಿಯನ್ನು ಚಾಲಕ ಶೇಖರ್ ಹೊರಹಾಕಿದ್ದಾನೆ. ಆತ ಲಾರಿಯ ಕ್ಲೀನರ್ ಬಾಯ್ ಆಗಿದ್ದ. ಈ ಬಾಲಕನು ಲಾರಿ ಚಲಾಯಿಸುವ ಹಠವನ್ನು ಹೊಂದಿದ್ದು, ಯಾವುದೇ ಲಾರಿ ಆದರೂ ರಾತ್ರಿ ವೇಳೆ ಮುಂಬಯಿ ಎಕ್ಸ್ಪ್ರೆಸ್ ವೇನಂತಹ ಹೆದ್ದಾರಿಯಲ್ಲೂ ಚಲಾಯಿಸಿಕೊಂಡು ಬರುತ್ತಿದ್ದ ಎಂದು ಹೇಳಿದ್ದಾನೆ.
ನಿದ್ದೆಯ ಮಂಪರಿನಲ್ಲಿ ಲಾರಿ ಚಲಾಯಿಸಿದ ಬಾಲಕ
ಉಚ್ಚಿಲದಲ್ಲಿ ಘಟನೆ ನಡೆದಿದ್ದ 20 ನಿಮಿಷದ ಮೊದಲು ಬಾಲಕ ತನಗೆ ನಿದ್ದೆ ಬರುತ್ತಿರುವುದಾಗಿ ಚಾಲಕ ಶೇಖರ್ನಿಗೆ ತಿಳಿಸಿದ್ದ. ಆದರೆ ಮುಂದೆ ಚಹದಂಗಡಿ ಇದೆ. ಅಲ್ಲಿ ತಾನು ಲಾರಿ ಚಲಾಯಿಸುವುದಾಗಿ ಶೇಖರ್ ಹೇಳಿದ್ದರಿಂದ ಬಾಲಕನೇ ಲಾರಿಯನ್ನು ಉಚ್ಚಿಲದಿಂದ ಮುಂದಕ್ಕೆ ಚಲಾಯಿಸಿದ್ದ. ಉಚ್ಚಿಲದಲ್ಲಿ ಆದ ಅಪಘಾತವಾದ ಬಳಿಕ ಬಾಲಕನು ಡಿವೈಡರ್ ಮೇಲೆ ಲಾರಿಯನ್ನು ಹತ್ತಿಸಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದ. ಅಲ್ಲಿಂದ ಸುಮಾರು ಒಂದೂವರೆ ಕಿಲೋ ಮೀಟರ್ ಕ್ರಮಿಸಿದ ಬಳಿಕ ನಿಲ್ಲಿಸಿ ಚಾಲಕ ಶೇಖರ್ಗೆ ವಿಷಯವನ್ನು ತಿಳಿಸಿದ್ದ. ಗಾಢ ನಿದ್ರೆಯಲ್ಲಿದ್ದ ಬಾಲಕ ರಸ್ತೆಯಲ್ಲಿ ನಿಂತಿದ್ದ ತಂದೆ-ಮಗನಿಗೆ ಲಾರಿ ಡಿಕ್ಕಿಯಾದ ಬಗ್ಗೆ ಅರಿವಿಗೆ ಬಂದಿರಲಿಲ್ಲ ಎಂದು ತಿಳಿದುಬಂದಿದೆ.
ಪ್ಲಾಸ್ಟಿಕ್ ಉತ್ಪಾದನೆಯ ಕಚ್ಚಾ ವಸ್ತುವನ್ನು ಗುಜರಾತ್ನಿಂದ ಹೊತ್ತು ಬರುತ್ತಿದ್ದ ಈ ಲಾರಿಯನ್ನು ಪೊಲೀಸರು ಗಂಜಿಮಠ ಪರಿಸರದಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಶೇಖರ್ನನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಾಲಕ ಶೇಖರ್ನ ಡ್ರೈವಿಂಗ್ ಲೈಸೆನ್ಸ್ ಮತ್ತು ಗೂಡ್ಸ್ ಲಾರಿ ಪರವಾನಿಗೆ ರದ್ದುಗೊಳಿಸಲು ಆರ್ಟಿ ಒ ಅಧಿಕಾರಿಗಳಿಗೆ ಪಡುಬಿದಿರೆ ಪೊಲೀಸರು ಸೂಚನೆ ನೀಡಿದ್ದಾರೆ. ಕೃತ್ಯ ಎಸಗಿದ ಬಾಲಕನನ್ನು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.












Click it and Unblock the Notifications