ಡಿಕೆಶಿ ಎಂಟ್ರಿ; ಉಡುಪಿ ಕಾಂಗ್ರೆಸ್ನ ಬಂಡಾಯ ಶಮನ!
ಉಡುಪಿ, ಏಪ್ರಿಲ್ 24; ಕರ್ನಾಟಕ ವಿಧಾನಸಭೆ ಚುನಾವಣೆ ಕಣ ಅಂತಿಮಗೊಂಡಿದೆ. ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಸೋಮವಾರ ಮಧ್ಯಾಹ್ನ 3 ಗಂಟೆಯ ತನಕ ಅವಕಾಶವಿತ್ತು. ವಿವಿಧ ಪಕ್ಷಗಳು ಕಸರತ್ತು ನಡೆಸಿ ಹಲವು ಕ್ಷೇತ್ರಗಳ ಬಂಡಾಯ ಶಮನ ಮಾಡಿದ್ದಾರೆ. ಆದರೂ ಸಹ ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದು ಪಕ್ಷಗಳಿಗೆ ತಲೆನೋವು ಹೆಚ್ಚಿಸಿದ್ದಾರೆ. ಮೇ 10ರಂದು ಚುನಾವಣೆ ನಡೆಯಲಿದೆ. ಮೇ 13ರಂದು ಫಲತಾಂಶ ಪ್ರಕಟವಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೋಮವಾರ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡು ಕಾಂಗ್ರೆಸ್ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಕೆ. ಕೃಷ್ಣಮೂರ್ತಿ ಆಚಾರ್ಯ ನಾಮಪತ್ರ ಸಲ್ಲಿಸಿದ್ದರು.

ಡಿ. ಕೆ. ಶಿವಕುಮಾರ್ ಜೊತೆಗಿನ ಸಭೆಯ ಬಳಿಕ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಕೆ. ಕೃಷ್ಣಮೂರ್ತಿ ಆಚಾರ್ಯ ಮನವೊಲಿಸಿ ಸಾರ್ವಜನಿಕ ಸಭೆಗೆ ಡಿ. ಕೆ. ಶಿವಕುಮಾರ್ ಕರೆದುಕೊಂಡು ಬಂದರು. ಈ ವೇಳೆ ಕಾಂಗ್ರೆಸ್ನ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ರನ್ನು ಕೆ. ಕೃಷ್ಣಮೂರ್ತಿ ಆಚಾರ್ಯ ಅಪ್ಪಿಕೊಂಡು, ಒಗ್ಗಟ್ಟು ಪ್ರದರ್ಶಿಸಿದರು.
ಉದ್ಯಮಿಗೆ ಟಿಕೆಟ್ ನೀಡಿದ ಕಾಂಗ್ರೆಸ್; ಕೆ. ಕೃಷ್ಣಮೂರ್ತಿ ಆಚಾರ್ಯ ಉಡುಪಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ನ ಎರಡನೇ ಪಟ್ಟಿಯಲ್ಲಿ ಉದ್ಯಮಿ ಪ್ರಸಾದ್ ಕಾಂಚನ್ ರಾಜ್ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿತ್ತು. ಬಳಿಕ ಕೆ. ಕೃಷ್ಣಮೂರ್ತಿ ಆಚಾರ್ಯ ಅಸಮಾಧಾನಗೊಂಡಿದ್ದರು. ಉಡುಪಿಯ ಮಥುರಾ ಹೋಟೆಲ್ನಲ್ಲಿ ಅಭಿಮಾನಿಗಳ ಸಭೆ ನಡೆಸಿದ್ದರು. ಸಭೆಯ ಬಳಿಕ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದರು, ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ನಾಮಪತ್ರ ವಾಪಸ್ ಪಡೆದಿದ್ದಾರೆ.

ಪ್ರಸಾದ್ ಕಾಂಚನ್ ರಾಜ್ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್ ಪುತ್ರ. ಅವರು ಉಡುಪಿ, ಕಾರವಾರ, ಮಂಗಳೂರಿನಲ್ಲಿ ಕಾಂಚನಾ ಹುಂಡೈ ಶೋರೂಮ್ ಹೊಂದಿದ್ದಾರೆ. ಬಿಜೆಪಿ ಸಹ ಉಡುಪಿಯಲ್ಲಿ ಅಚ್ಚರಿಯ ಆಯ್ಕೆ ಮಾಡಿದೆ. 2004, 2008 ಮತ್ತು 2018ರಲ್ಲಿ ಉಡುಪಿಯಲ್ಲಿ ಗೆದ್ದಿದ್ದ ರಘುಪತಿ ಭಟ್ಗೆ ಟಿಕೆಟ್ ಕೈತಪ್ಪಿದೆ. ಯಶ್ ಪಾಲ್ ಸುವರ್ಣ ಬಿಜೆಪಿ ಅಭ್ಯರ್ಥಿ.
ಯುವಕ ಪ್ರಸಾದ್ ಕಾಂಚನ್ ರಾಜ್ ಚುನಾವಣಾ ರಾಜಕೀಯಕ್ಕೆ ಹೊಸ ಮುಖ. ಈ ಹಿಂದೆ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ನಲ್ಲಿದ್ದರು. ಆಗ ಅವರೇ ಅಭ್ಯರ್ಥಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅವರು ಬಿಜೆಪಿ ಸೇರಿದ ಬಳಿಕ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿತ್ತು. ಈಗ ಪ್ರಸಾದ್ ಕಾಂಚನ್ ರಾಜ್ ಅಭ್ಯರ್ಥಿಯಾಗಿದ್ದಾರೆ. ಯಶ್ ಪಾಲ್ ಸುವರ್ಣ ಮತ್ತು ಪ್ರಸಾದ್ ಕಾಂಚನ್ ರಾಜ್ ಇಬ್ಬರು ಹೊಸ ಮುಖಗಳು. ಎರಡೂ ರಾಷ್ಟ್ರೀಯ ಪಕ್ಷಗಳು ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಿವೆ.
ತಾಯಿ ಸರಳಾ ಕಾಂಚನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಜೊತೆ ಆಗಮಿಸಿ ಪ್ರಸಾದ್ ಕಾಂಚನ್ ರಾಜ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಬಳಿ 24.08 ಕೋಟಿ ಚರಾಸ್ತಿ ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಅವರ ಪತ್ನಿಯ ಬಳಿ 24.68 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.
ಪ್ರಸಾದ್ ಕಾಂಚನ್ ರಾಜ್ 111 ಕಂಪನಿಗಳ 3.64 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. 9.56 ಕೋಟಿ ರೂ. ಮೌಲ್ಯದ ಸ್ತಿರಾಸ್ತಿ ಹೊಂದಿದ್ದಾರೆ. ಪತಿ ಮತ್ತು ಪತ್ನಿ ಇಬ್ಬರೂ ಉದ್ಯಮಿಗಳು. ಜೆಎನ್ಆರ್ ರಾಜಸ್ತಾನ್ ವಿದ್ಯಾಪೀಠ ವಿವಿಯಿಂದ ಪ್ರಸಾದ್ ರಾಜ್ ಕಾಂಚನ್ ಎಂಬಿಎ ಪದವಿ ಪಡೆದಿದ್ದಾರೆ.












Click it and Unblock the Notifications