ಸಚಿವ ಡಿಕೆಶಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಲೋಡ್ ಶೆಡ್ಡಿಂಗ್ ಹೇರಿಕೆಗೆ ಮುಂದಾಗದಿರಲು ಇಂಧನ ಇಲಾಖೆ ನಿರ್ಧರಿಸಿದೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯಕ್ಕೆ ಅಗತ್ಯ ಬೀಳುವ ಹೆಚ್ಚುವರಿ ವಿದ್ಯುತ್ ಖರೀದಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಉತ್ಪಾದನೆ ಸುಧಾರಿಸುತ್ತಿದ್ದು, ಪ್ರಸರಣ ಹಾಗೂ ನಿರ್ವಹಣೆ ತುಂಬಾ ಕಷ್ಟ ಹಾಗೂ ಸವಾಲಿನ ಕೆಲಸ ಎಂದು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿಸಬೇಕು. ಅನಗತ್ಯ ವಿದ್ಯುತ್ ಬಳಕೆ, ವಿದ್ತ್ಯುತ್ ಸೋರಿಕೆ, ವಿದ್ಯುತ್ ಕಳ್ಳತನದ ಬಗ್ಗೆ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.
ದಾಮೋದರ್ ವ್ಯಾಲಿ ಕಾರ್ಪೋರೇಷನ್ ಕಂಪನಿ ಜತೆ ವಿದ್ಯುತ್ ಖರೀದಿಗಾಗಿ(ಸುಮಾರು 450 MW) ಶೀಘ್ರದಲ್ಲೇ ಒಪ್ಪಂದ ಮಾಡಿಕೊಂಡು ಒಡಂಬಡಿಕೆಗೆ ಸರ್ಕಾರ ಸಹಿ ಹಾಕಲಿದೆ. ಇತರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾಗಿರುವ ಕೋಟಾ ಹೆಚ್ಚಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ಸಚಿವ ಶಿವಕುಮಾರ್ ಹೇಳಿದರು.
ಸದ್ಯ ರಾಜ್ಯಕ್ಕೆ ದಿನನಿತ್ಯದ ಬೇಡಿಕೆ 10,334 ಮೆ.ವ್ಯಾ ನಷ್ಟಿದೆ. ಲಭ್ಯವಿರುವ ವಿದ್ಯುತ್ 8600 ಮೆ.ವ್ಯಾ ನಷ್ಟಿದೆ. ಅಂದಾಜು 4,300 ಮೆ.ವ್ಯಾ. ಮಾತ್ರ ಉತ್ಪಾದನೆಯಾಗುತ್ತಿದೆ.ಇದರೊಂದಿಗೆ ಪೂರೈಕೆ ವ್ಯತ್ಯಯದ ಸಮಸ್ಯೆಯೂ ಇದ್ದೇ ಇದೆ. ರಾಯಚೂರು ಮತ್ತು ಉಡುಪಿ ಕೇಂದ್ರಗಳಲ್ಲಿ ಉತ್ಪಾದನೆ ಕುಸಿಸಿದ್ದರಿಂದ ಒಟ್ಟು 1,198 ಮೆ.ವ್ಯಾ. ವಿದ್ಯುತ್ ಕೊರತೆ ಉಂಟಾಗಿದೆ. ಇದರ ಜೊತೆಗೆ ಪವನ ವಿದ್ಯುತ್ ಉತ್ಪಾದನೆ ಸಹ ಸಂಪೂರ್ಣ ಸ್ಥಗಿತಗೊಂಡಿದೆ. ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ನಿಲ್ಲಿಸಲಾಗಿದೆ. ಆದ್ದರಿಂದ ಲೋಡ್ ಶೆಡ್ಡಿಂಗ್ ಜಾರಿ ಅನಿವಾರ್ಯ ಎಂದು ಹೆಸ್ಕಾಂ, ಬೆಸ್ಕಾಂ, ಚೆಸ್ಕಾಂ ಮುಂತಾದ ಪ್ರಸರಣ ಸಂಸ್ಥೆಗಳು ಹೇಳಿವೆ.
ಈ ಬಾರಿ ಉತ್ತಮ ಮಳೆ ಸುರಿದು ವಿದ್ಯುತ್ ಉತ್ಪಾದಿಸುವ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದವು. ಆದ್ದರಿಂದ ಜಲವಿದ್ಯುತ್ ಕೇಂದ್ರಗಳು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಇಲ್ಲದಿದ್ದರೆ, ದಿನಕ್ಕೆ 6 ತಾಸು ಮಾತ್ರ ವಿದ್ಯುತ್ ಪೂರೈಸಲು ಶಕ್ತವಾಗುತ್ತಿತ್ತು ಎಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ.