ಸೌದಿ ದೊರೆ ವಿರುದ್ಧ ಪೋಸ್ಟ್; ಹರೀಶ್ ಬಗ್ಗೆ ಮಾಹಿತಿಯೇ ಇಲ್ಲ!
ಉಡುಪಿ, ಫೆಬ್ರವರಿ 05 : ಸೌದಿ ದೊರೆಯ ವಿರುದ್ಧ ಫೇಸ್ಬುಕ್ನಲ್ಲಿ ಪೋಸ್ಟ್ಗಳನ್ನು ಹಾಕಿದ್ದ ಹರೀಶ್ ಬಂಗೇರಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹರೀಶ್ ಬಿಡುಗಡೆಗೆ ಪ್ರಯತ್ನ ನಡೆಸುತ್ತಿರುವುದಾಗಿ ಮಾತ್ರ ಹೇಳುತ್ತಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಯಾಡಿಬೆಟ್ಟು ನಿವಾಸಿ ಹರೀಶ್ ಬಂಗೇರಾ (32)ರನ್ನು ಸೌದಿ ಅರೇಬಿಯಾದಲ್ಲಿ ಡಿಸೆಂಬರ್ನಲ್ಲಿ ಬಂಧಿಸಲಾಗಿತ್ತು. ಎರಡು ತಿಂಗಳು ಕಳೆದರೂ ಹರೀಶ್ ಎಲ್ಲಿದ್ದಾರೆ? ಎಂಬ ಮಾಹಿತಿಯೇ ಸಿಗುತ್ತಿಲ್ಲ.
ಸೌದಿ ದೊರೆ ವಿರುದ್ಧ ಪೋಸ್ಟ್; ಹರೀಶ್ ನಿವಾಸಕ್ಕೆ ಅಧಿಕಾರಿಗಳ ಭೇಟಿ
ಹರೀಶ್ ಬಂಗೇರಾ ಬಗ್ಗೆ ಇದುವರೆಗೆ ಮನೆಯವರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಜನಪ್ರತಿನಿಧಿಗಳು ಮಾತ್ರ ಬಿಡುಗಡೆಗೆ ನಾವು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಭರವಸೆಯನ್ನು ನೀಡುತ್ತಿದ್ದಾರೆ. ಸದ್ಯಕ್ಕೆ ಹರೀಶ್ ಎಲ್ಲಿದ್ದಾರೆ? ಎಂಬುದು ಸಹ ಗೊತ್ತಿಲ್ಲ.
ಸೌದಿ ಅರಸ ಹಾಗೂ ಮೆಕ್ಕಾ ಬಗ್ಗೆ ಅವಹೇಳನ: ಭಾರತೀಯನ ಬಂಧನ
ಫೇಸ್ಬುಕ್ನಲ್ಲಿ ಸೌದಿ ದೊರೆ ಹಾಗೂ ಮೆಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಡಿ ಹರೀಶ್ನನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿದ್ದರು. ಆದರೆ, ಮುಂದೇನಾಗಿದೆ? ಎಂಬುದು ಇದುವರೆಗೂ ನಿಗೂಢವಾಗಿ ಉಳಿದಿದೆ.
ಸೌದಿ ಅರೇಬಿಯಾದಿಂದ ಭಾರತದಲ್ಲಿ $ 100 ಬಿಲಿಯನ್ ಹೂಡಿಕೆ
ಹರೀಶ್ ಪತ್ನಿ ಹೇಳಿದ್ದೇನು?
ಹರೀಶ್ ಬಂಗೇರಾ ಪತ್ನಿ ಸುಮನಾ ಈ ಕುರಿತು ಮಾತನಾಡಿದ್ದು, "ನನ್ನ ಪತಿ ಸೌದಿಯಲ್ಲಿ ಬಂಧನಕ್ಕೆ ಒಳಗಾಗಿ ತಿಂಗಳುಗಳು ಕಳೆದಿವೆ. ಈವರೆಗೆ ಯಾವುದೇ ಸಂಪರ್ಕವಿಲ್ಲ. ಯಾರ ಬಳಿ ಕೇಳಿದರೂ ಮಾಹಿತಿ ಇಲ್ಲ ಎಂದು ಹೇಳುತ್ತಾರೆ" ಎಂದು ಹೇಳಿದ್ದಾರೆ.
ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ
"ಸದ್ಯಕ್ಕೆ ಅವರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಮೊದಲು ಇದ್ದ ಸ್ಥಳದಿಂದ ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ. ಸೌದಿಯಲ್ಲಿರುವ ಅವರ ಗೆಳೆಯರು ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ. ಜನಪ್ರತಿನಿಧಿಗಳು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾತ್ರ ಹೇಳುತ್ತಾರೆ" ಎಂದು ಸುಮನಾ ಬೇಸರ ವ್ಯಕ್ತಪಡಿಸಿದ್ದಾರೆ.
ರಾಯಭಾರ ಕಚೇರಿ ಜೊತೆ ಸಂಪರ್ಕ
ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಈ ಕುರಿತು ಹೇಳಿಕೆ ನೀಡಿದ್ದು, "ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದೇವೆ. ಬಿಡುಗಡೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಅಧಿಕಾರಿಗಳು ಭೇಟಿ ಕೊಟ್ಟಿದ್ದರು
ಹರೀಶ್ ಬಂಗೇರಾ ಬಂಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಹರೀಶ್ ಬಂಗೇರಾ ನಿವಾಸಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದರು.