ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ, ವಿಶೇಷ ಪೂಜೆ
ಉಡುಪಿ, ಅಕ್ಟೋಬರ್ 25: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ರಥೋತ್ಸವ ಸಂಪನ್ನಗೊಂಡಿತು. ಈ ಬಾರಿ ಕೊರೊನಾ ಕಾರಣದಿಂದಾಗಿ ರಥೋತ್ಸವಕ್ಕೆ ಹೆಚ್ಚಿನ ಭಕ್ತರು ಇರಲಿಲ್ಲ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸಂಬಂಧಪಟ್ಟವರು ಮತ್ತು ದೇವಸ್ಥಾನದ ಅರ್ಚಕ ವೃಂದ, ಸಿಬ್ಬಂದಿಗಳು ಮತ್ತವರ ಕುಟುಂಬಸ್ಥರು ಮಾತ್ರ ರಥೋತ್ಸವಕ್ಕೆ ಸಾಕ್ಷಿಯಾದರು.
ನವರಾತ್ರಿ ಎಂದರೆ ಕೊಲ್ಲೂರಿನಲ್ಲಿ ವಿಶೇಷವಾದ ಹಬ್ಬದ ಸಡಗರ ಇರುತ್ತದೆ. ಲಕ್ಷಾಂತರ ಜನ ಭಕ್ತರು ಈ ಹಬ್ಬದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಈ ವರ್ಷ ಕೋವಿಡ್ ಕಾರಣದಿಂದಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಭಕ್ತರು ಇರಲಿಲ್ಲ.

ಹೊರ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಿಂದ ಬರುವ ಭಕ್ತರು ಕೊರೊನಾ ನಿರ್ಬಂಧದಿಂದ ಆಗಮಿಸಿರಲಿಲ್ಲ. ಹೀಗಾಗಿ ಈ ಬಾರಿಯ ನವರಾತ್ರಿ ಉತ್ಸವ ಕಳೆಗುಂದಿತ್ತು.
ಇನ್ನು ವರ್ಷಂಪ್ರತಿ ಇಲ್ಲಿ ಪುಷ್ಪ ರಥೋತ್ಸವ ಮಾಡುವುದು ವಾಡಿಕೆ. ಆದರೆ ಈ ಬಾರಿ ಚಿನ್ನದ ರಥದಲ್ಲಿ ದೇವರ ಮೂರ್ತಿಯನ್ನಿಟ್ಟು ರಥೋತ್ಸವ ನಡೆಸಲಾಯಿತು. ಕಳೆದ ಎಂಟೂ ದಿನಗಳಲ್ಲಿ ದೇವರಿಗೆ ಸಲ್ಲಬೇಕಾದ ವಿಶೇಷ ಪೂಜೆ ಪುನಸ್ಕಾರ ಮತ್ತು ಧಾರ್ಮಿಕ ವಿಧಿಗಳನ್ನಷ್ಟೇ ಪೂರೈಸಲಾಗಿದೆ.

ವಿಜಯದಶಮಿ ದಿನದಂದು ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ವಿದ್ಯಾರಂಭ ನಡೆಯಲಿದ್ದು, ಇದಕ್ಕೆ ಸೀಮಿತ ಭಕ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications