ಸಚಿವರಿಗೆ ಚಾತುರ್ಮಾಸ್ಯದಲ್ಲಿರುವ ಉಡುಪಿ ಪೇಜಾವರ ಶ್ರೀಗಳ ಮನವಿ
ಉಡುಪಿ, ಆ 2: ಚಾತುರ್ಮಾಸ್ಯದಲ್ಲಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು, ರಾಜ್ಯ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿದ್ದಾರೆ.
ಈ ಸಂದರ್ಭದಲ್ಲಿ, "ಕೊರೊನಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇರುವ ಗೋಶಾಲೆಗಳು ಸಂಕಷ್ಟಕ್ಕೆ ಒಳಗಾಗಿರುವುದರಿಂದ, ಗೋವುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಬೇಕು, ಈ ಕುರಿತು ತಾವು ಗಮನಹರಿಸಬೇಕೆಂದು" ಸಚಿವರನ್ನು, ಶ್ರೀಗಳು ಒತ್ತಾಯಿಸಿದರು.
ಆಗಸ್ಟ್ 5 ನೇ ತಾರೀಖು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮಂತ್ರಿಯವರ ನೇತೃತ್ವದಲ್ಲಿ ಶ್ರೀರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರುತ್ತಿರುವ ಹಿನ್ನೆಲೆಯಲ್ಲಿ, ಅಂದು ರಾಜ್ಯದಾದ್ಯಂತ ಇರುವ ದೇವಸ್ಥಾನಗಳಲ್ಲಿ, ಲೋಕ ಕಲ್ಯಾಣಾರ್ಥವಾಗಿ ರಾಮಮಂದಿರ ನಿರ್ವಿಘ್ನವಾಗಿ ನಿರ್ಮಾಣವಾಗಲಿ ಎಂಬ ಆಶಯವನಿಟ್ಟುಕೊಂಡು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಬೇಕಾಗುವಂತಹ ಕ್ರಮ ಕೈಗೊಳ್ಳುವುದು ಸೂಕ್ತ ಎನ್ನುವ ಸಲಹೆಯನ್ನು ಶ್ರೀಗಳು ನೀಡಿದರು.

"ರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕದ ಕೋಟ್ಯಾಂತರ ಭಕ್ತರ ಕಡೆಯಿಂದ ಕಾಣಿಕೆ ಸಲ್ಲಿಸಲು ಸಹ ಯೋಚನೆ ಮಾಡುವುದು ಉತ್ತಮ" ಎಂದು ಶ್ರೀಗಳು ತಿಳಿಸಿದರು.
ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ವೀಕ್ಷಣೆಗೆ ಹಾಗೂ ಶ್ರೀರಾಮನ ದರ್ಶನಕ್ಕೆ ರಾಜ್ಯದಿಂದ ಕೋಟ್ಯಾಂತರ ಭಕ್ತರು ತೆರಳಲಿದ್ದಾರೆ.
ಅವರ ವಾಸ್ತವ್ಯಕ್ಕಾಗಿ ಯಾತ್ರೀ ನಿವಾಸದ ಮಾದರಿಯಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡುವ ಸಲುವಾಗಿ, ಸ್ಥಳ ಕಾಯ್ದಿರಿಸಲು ಉತ್ತರಪ್ರದೇಶದ ಸರ್ಕಾರಕ್ಕೆ ಈಗಲೇ ಪ್ರಸ್ತಾವನೆಯನ್ನು ಸಲ್ಲಿಸುವುದು ಮತ್ತು ಕರ್ನಾಟಕ ಸರ್ಕಾರದ ಮೂಲಕ ಯಾತ್ರಿ ನಿವಾಸ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟರು.
"ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ, ರಾಮಮಂದಿರದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ, ಗೋವುಗಳ ಸಂರಕ್ಷಣೆಗೆ ನಮ್ಮ ಸರ್ಕಾರವು ಬದ್ಧವಾಗಿದೆ" ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications