ಮುಂಬೈಯಲ್ಲಿ ಪೇಜಾವರ ಶ್ರೀಗಳ ಸಹಾಯಕ್ಕೆ ಬಂದದ್ದು ಶರ್ಫುದ್ದೀನ್ ಮಲಿಕ್
ಉಡುಪಿ, ಜುಲೈ 4: ಮುಂಬೈ ಮಹಾಮಳೆಯಲ್ಲಿ ಪೇಜಾವರ ಶ್ರೀಗಳು ಸಮಸ್ಯೆಯಲ್ಲಿ ಸಿಲುಕಿದಾಗ ಮುಸ್ಲಿಂ ಕಾರು ಚಾಲಕನೊಬ್ಬ ಸಹಾಯ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ. ಈ ಕುರಿತ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಹಿಂದುತ್ವದ ಪ್ರತಿಪಾದಕರೆಂದೇ ಉಡುಪಿ ಪೇಜಾವರ ಶ್ರೀಗಳನ್ನು ಗುರುತಿಸಲಾಗುತ್ತದೆ. ಆದರೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಸುಮಾರು ವರ್ಷಗಳಿಂದ ದೊಡ್ಡಣಗುಡ್ಡೆ ಮೊಹಮ್ಮದ್ ಆರಿಫ್ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆರಿಫ್ ಅವರ ಅಣ್ಣನೂ ಕೆಲವರ್ಷ ಶ್ರೀಗಳಿಗೆ ಚಾಲಕರಾಗಿ ಕೆಲಸ ಮಾಡಿದ್ದರು ಎಂಬುದು ಬಲ್ಲ ಸಂಗತಿ. ಮುಂಬೈ ಮಳೆಯಲ್ಲಿ ಶ್ರೀಗಳು ಸಿಲುಕಿಕೊಂಡಾಗಲೂ ಅವರ ನೆರವಿಗೆ ಬಂದಿದ್ದು ಒಬ್ಬ ಮುಸ್ಲಿಂ ಕಾರು ಚಾಲಕ.
ಬರೋಡಾದಿಂದ ರಾತ್ರಿ ಮುಂಬೈಗೆ ಆಗಮಿಸಿದ ಶ್ರೀಗಳನ್ನು ಡೊಂಬಿವಿಲಿ ರಾಘವೇಂದ್ರ ಮಠಕ್ಕೆ ಕನ್ನಡಿಗ ಮುಸ್ಲಿಂ ಚಾಲಕ, ಕಲಬುರ್ಗಿಯ ಶರ್ಪುದ್ದೀನ್ ಮಲಿಕ್ ತಲುಪಿಸಿದ್ದಾರೆ.

ಭಾರೀ ಮಳೆಯ ನಡುವೆ ಪೇಜಾವರ ಶ್ರೀಗಳು ಬೊರಿವಿಲಿ ರೈಲು ನಿಲ್ದಾಣದಲ್ಲಿ ಇಳಿದು ಬಳಿಕ ಸಾಂತಾಕ್ರೂಸ್ ನ ಶಾಖಾ ಮಠದ ಸ್ವಂತ ಕಾರಿನಲ್ಲಿ ಡೊಂಬಿವಿಲಿ ತಲುಪಲು ನಿರ್ಧರಿಸಿದ್ದರು. ಆದರೆ ಭಾರಿ ಮಳೆಯ ಕಾರಣ ಮಹಾನಗರದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಶ್ರೀಗಳಿಗೆ ಬಾಡಿಗೆ ಕಾರು ವ್ಯವಸ್ಥೆ ಮಾಡಲಾಯಿತು. ಸೋಮವಾರ ರಾತ್ರಿ 8 ಗಂಟೆಗೆ ತಡವಾಗಿ ರೈಲು ನಿಲ್ದಾಣ ತಲುಪಿದ್ದು, ನಿಗದಿ ಮಾಡಿದ್ದ ಕಾರು ಚಾಲಕ ಕಾದು ಹೊರಟು ಹೋಗಿದ್ದ.
ಆ ಬಳಿಕ ಇನ್ನೊಂದು ಕಾರು ಬುಕ್ ಮಾಡಲಾಯಿತು. ಆಗ ಬಂದವರೇ ಕನ್ನಡಿಗ ಮುಸ್ಲಿಂ ಚಾಲಕ, ಕಲಬುರ್ಗಿಯ ಶರ್ಪುದ್ದೀನ್ ಮಲಿಕ್. ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನ ಚಾಲನೆ ಕಷ್ಟವೆನಿಸಿದರೂ ಸುಮಾರು 40 ಕಿ.ಮೀ. ಅಂತರವನ್ನು 3 ಗಂಟೆಯಲ್ಲಿ ಕ್ರಮಿಸಿ ಶ್ರೀಗಳನ್ನು ಸುರಕ್ಷಿತವಾಗಿ ಮಠಕ್ಕೆ ತಲುಪಿಸಿದ್ದರು. ಈ ಕುರಿತ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications