ಸೌದಿಯಲ್ಲಿ ಮೃತಪಟ್ಟ ಜಾನ್ ಶವ 9 ತಿಂಗಳ ಬಳಿಕ ಮೂಲ್ಕಿಗೆ ಬಂತು!
ಸೌದಿ ಅರೇಬಿಯಾದಲ್ಲಿ ಕಠಿಣ ಕಾನೂನುಗಳಿವೆ ;ಹಾಗಾಗಿ ಅಲ್ಲಿ ಅಪರಾಧಗಳು ಕಡಿಮೆ ಎಂಬ ಚರ್ಚೆ ಸದ್ಯ ಚಾಲ್ತಿಯಲ್ಲಿವೆ.ಆದರೆ ಸೌದಿ ಅರೇಬಿಯಾ ಸರಕಾರ ವಿದೇಶೀ ಪ್ರಜೆಗಳ ಜೊತೆ ಕಠಿಣ ಕಾನೂನಿನ ಹೆಸರಲ್ಲಿ ಆಡುವ ಚೆಲ್ಲಾಟಗಳು ಅನೇಕರನ್ನು ಬಲಿ ಪಡೆದಿವೆ. ಇದಕ್ಕೆ ತಾಜಾ ಉದಾಹರಣೆ ,ಮೂಲ್ಕಿಯ ಜಾನ್ ಮೋಂತೆರೋ.ಕಾರಣವೇ ಇಲ್ಲದೆ ಐದು ವರ್ಷ ಸೌದಿ ಜೈಲಿನಲ್ಲಿ ಕಳೆದ ಈ ನತದೃಷ್ಟನ ಶವವನ್ನೂ ಆ ದೇಶ ಘನತೆಯಿಂದ ಹಿಂದುರಿಗಸದೆ ಕಿರುಕುಳ ಕೊಟ್ಟ ಅಪರೂಪದ ಪ್ರಕರಣ ಇದು. ಇದೀಗ ಜಾನ್ ಪತ್ನಿ ಮತ್ತು ಮಕ್ಕಳು ಅನ್ನಕ್ಕೂ ಗತಿ ಇಲ್ಲದೆ ನ್ಯಾಯಕ್ಕಾಗಿಅಂಗಲಾಚುವಂತಾಗಿದೆ
ದೆಹಲಿಯಲ್ಲಿ ರಾಜರಂತೆ ಬದುಕಿದ್ದ ಕುಟುಂಬ!
ಒಂದು ಕಾಲಕ್ಕೆ ರಾಜರಂತೆ ದೆಹಲಿಯಲ್ಲಿ ಜೀವನ ನಡೆಸಿದ ಪುಟ್ಟ ಕುಟುಂಬ ಇದು.ಮೂಲ್ಕಿ ಮೂಲದ ಜಾನ್ ಮೋಂತೆರೋ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿ ದುಬೈ ಸೇರಿಕೊಂಡದ್ದು,ಇಪ್ಪತ್ತು ವರ್ಷಗಳ ಹಿಂದೆ. ಅಲ್ಲಿ ಬಹಳ ವರ್ಷ ದುಡಿದು ನಂತರ ದೆಹಲಿಯಲ್ಲೂ ನೌಕರಿ ಮಾಡಿದ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಸೌದಿ ಅರೇಬಿಯಾ ಕೈ ಬೀಸಿ ಕರೆದಾಗ ,ಸೌದಿ ಅರೇಬಿಯಾ ಸೇರಿಕೊಂಡರು. ಇದು 2003ನೇ ಇಸವಿಯ ಕತೆ.ಅಲ್ಲಿ ಮೈಮುರಿದು ದುಡಿಯುತ್ತಾ ,ತನ್ನ ಏರ್ ಕಂಡಿಷನರ್ ಮೆಕ್ಯಾನಿಕ್ ನೈಪುಣ್ಯವನ್ನು ಒರೆಗೆ ಹಚ್ಚುತ್ತಾ ,ಪತ್ನಿ ಮಕ್ಕಳನ್ನು ಚೆನ್ನಾಗಿಯೇ ಸಾಕಿದ್ದರು. ಮಕ್ಕಳಿಗೆ ದೆಹಲಿಯ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿದರು. ಹೀಗಿರುತ್ತಾ ,2014 ರಲ್ಲಿ ಈ ಪುಟ್ಟ ,ಸುಂದರ ಫ್ಯಾಮಿಲಿಗೆ ಬರಸಿಡಿಲು ಬಡಿದಂತಹ ಸುದ್ದಿ ಸೌದಿಯಿಂದ ಬಂದಿತ್ತು; ಜಾನ್ ಮಾಂತೆರೋ ಸೌದಿಯಲ್ಲಿ ಜೈಲು ಪಾಲಾದ ಸುದ್ದಿ ಅದು! ಅವರನ್ನು ಯಾಕೆ ಜೈಲಿಗೆ ಹಾಕಲಾಯಿತು ,ಅವರು ಮಾಡಿದ ಅಪರಾಧ ಏನು? ಉಹೂಂ, ಹೆಂಡತಿ ಮಕ್ಕಳಿಗೆ ಬಿಡಿ...ಸ್ವತಃ ಜಾನ್ ಅವರಿಗೇ ಗೊತ್ತಿರಲಿಲ್ಲ.ಈ ಕಡೆ ದೆಹಲಿಯಲ್ಲಿದ್ದ ಪತ್ನಿ ಅಮೀನಾ ಮತ್ತು ಮಕ್ಕಳಿಗೆ ಸುದ್ದಿ ಕೇಳಿ ಅಕ್ಷರಶಃ ಬರಸಿಡಿಲು ಬಡಿದಂತಾಗಿತ್ತು.ಬಂಧುಗಳ ಜೊತೆ ,ಸೌದಿಯ ಸ್ನೇಹಿತರ ಜೊತೆ ವಿಚಾರಿಸಿದರೂ ಜಾನ್ ಜೈಲುಪಾಲಾದ ಕತೆ ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಜಾನ್ ಕೂಡ ಬಹಳ ಕಷ್ಟದಿಂದ ಪತ್ನಿಯನ್ನು ಸಂಪರ್ಕಿಸಿ ...ನನ್ನನ್ನು ಜೈಲಿಗೆ ಹಾಕಿದ್ದಾರೆ...ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಪತ್ನಿಯ ಜೊತೆ ಹೇಳುತ್ತಾರೆ.....

ರಿಪೇರಿಗೆ ಹೋದವರನ್ನೇ ಜೈಲಿಗೆ ತಳ್ಳಿದರು!
ಅದು ಸೌದಿ ರಾಜಧಾನಿ ರಿಯಾದ್ನಿಂದ 350 ಕಿ.ಮೀ ದೂರವಿರುವ ಅಲ್ ದುವಾದ್ಮಿ ಎಂಬ ಜೈಲಾಗಿತ್ತು.ಅದೇ ಜೈಲಿಗೆ ಅವರು ಏರ್ ಕಂಡೀಷನರ್ ರಿಪೇರಿಗೆಂದು ಹೋಗಿದ್ದರು.ಹಾಗೆ ಹೋದವರನ್ನು ಯಾವುದೋ ಆರೋಪ ಹೊರಿಸಿ ಒಳಗೆ ಹಾಕಲಾಗಿತ್ತು. ಅಷ್ಟರವರೆಗೂ ರಾಜರಂತೆ ಜೀವನ ನಡೆಸಿದ್ದ ಜಾನ್ ಕುಟುಂಬ ದಿಕ್ಕೆಟ್ಟು ಹೋಯಿತು. ಯಾರನ್ನು ಸಂಪರ್ಕಿಸಿದರೂ ಪ್ರಯೋಜನವಿಲ್ಲ.ಯಾರ ಯಾರ ಮೂಲಕವೋ ಭಾರತೀಯ ದೂತಾವಾಸ ಕಚೇರಿಯನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ.ಜಾನ್ ಗೂ ಸ್ನೇಹಿತರ ಸಂಪರ್ಕವಾಗಲೀ ,ವಕೀಲರ ನೆರವನ್ನಾಗಲೀ ಪಡೆಯಲು ಅವಕಾಶಗಳೇ ಇರಲಿಲ್ಲ. ನೀವು ನಂಬಲೇಬೇಕು ;ಅವರಿಗೆ ಐದು ವರ್ಷ ಶಿಕ್ಷೆಯಾಗಿತ್ತು.ಈ ಅವಧಿಯಲ್ಲಿ ಖಾಯಿಲೆ ಕಸಾಲೆ ಎಂದು ಜಾನ್ ಜೈಲಿನ ಒಳಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಇಷ್ಟೊತ್ತಿಗೆ ದೆಹಲಿಯಲ್ಲಿದ್ದ ಪತ್ನಿ ಮತ್ತಿಬ್ಬರು ಮಕ್ಕಳು ಅನ್ನಕ್ಕೂ ಪರಿತಪಿಸಬೇಕಾಗಿ ಬಂತು.
ಮೃತಪಟ್ಟ ಒಂಬತ್ತು ತಿಂಗಳ ಬಳಿಕ ಬಂತು ಶವ!
ಅಂತೂ 2019 ಜನವರಿಯಲ್ಲಿ ,ಅವರ ಬಿಡುಗಡೆಗೆ ಆರು ತಿಂಗಳು ಇರುವಾಗ ಜಾನ್ ಆರೋಗ್ಯ ಹದಗೆಡುತ್ತೆ.ಅವರ ಕುತ್ತಿಗೆಯ ಬಲಭಾಗದಲ್ಲಿ ಬಾತು ಕಾಣಿಸಿಕೊಳ್ಳುತ್ತದೆ.ಆದರೂ ಸೌದಿ ಸರಕಾರ ಅವರಿಗೆ ಸೂಕ್ತ ಚಿಕಿತ್ಸೆ ನೀಡದೆ ಕಾಡುತ್ತದೆ. ದಿನೇ ದಿನೇ ರೋಗ ಉಲ್ಬಣಗೊಂಡು ಫೆಬ್ರವರಿ 16 ಕ್ಕೆ ಅವರು ಕೊನೆಯುಸಿರೆಳೆಯುತ್ತಾರೆ. ಅವರ ಐದು ವರ್ಷದ ಶಿಕ್ಷೆ ಮುಗಿಯಲು ಕೇವಲ ಮೂರೂವರೆ ತಿಂಗಳಷ್ಟೇ ಬಾಕಿ ಇತ್ತು!

ನೀವು ನಂಬಲೇಬೇಕು ,ಈ ವರ್ಷ ಫೆಬ್ರವರಿ ಹದಿನಾರನೇ ತಾರೀಕಿಗೆ ಮೃತಪಟ್ಟ ಜಾನ್ ಶವ ಊರಿಗೆ ಬಂದದ್ದು ,ಮೊನ್ನೆ ! ಅಂದರೆ ,ಮೃತಪಟ್ಟು ಒಂಬತ್ತು ತಿಂಗಳ ನಂತರ! ಎಂಥಾ ದೌರ್ಭಾಗ್ಯವೋ ನೋಡಿ ,ಮಾಡದ ತಪ್ಪಿಗೆ ಜೈಲು ಸೇರಿದ ವ್ಯಕ್ತಿಯ ಶವವನ್ನೂ ಘನತೆ, ಗೌರವದಿಂದ ಸ್ವೀಕರಿಸಲಾಗದ ಸ್ಥಿತಿ ಕುಟುಂಬದವರಿಗೆ. ಇದೀಗ ಎರಡು ದಿನದ ಹಿಂದೆ ಹುಟ್ಟೂರಲ್ಲಿ ಶವ ಸಂಸ್ಕಾರವೇನೋ ನಡೆದಿದೆ.ಆದರೆ ಊಟಕ್ಕೂ ಗತಿ ಇಲ್ಲದ ,ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಜಾನ್ ಅವರ ಪತ್ನಿ ಮತ್ತು ಮಕ್ಕಳಿಬ್ಬರು ನ್ಯಾಯಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶಾನುಭಾಗ್ ಮೊರೆ ಹೋಗಿದ್ದಾರೆ.ಇಂತಹ ಅನೇಕ ಜಟಿಲ ಕೇಸುಗಳನ್ನು ಹ್ಯಾಂಡಲ್ ಮಾಡಿದಶಾನುಭಾಗ್ ,ಶತಾಯಗತಾಯ ಮೃತ ಜಾನ್ ಪತ್ನಿ ಮತ್ತು ಮಕ್ಕಳಿಗೆ ನ್ಯಾಯ ಕೊಡಿಸುವ ಶಪಥ ಮಾಡಿದ್ದಾರೆ.
ನ್ಯಾಯಕ್ಕಾಗಿ ಮೊರೆ
ಸದ್ಯ ಉಡುಪಿಯ ಚರ್ಚೊಂದರಲ್ಲಿ ನತದೃಷ್ಟ ಜಾನ್ ಅವರ ಪತ್ನಿ ಮತ್ತು ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ .ಮಾಡದ ತಪ್ಪಿಗೆ ಹಿಂಸೆ ಅನುಭವಿಸಿ ಮೃತಪಟ್ಟ ಗಂಡನಂತೆಯೇ ,ತಾವು ಮಾಡದ ತಪ್ಪಿಗೆ ವಿಧಿಯು ಪತ್ನಿ ಮತ್ತು ಮಕ್ಕಳಿಗೆ ಕ್ರೂರ ಶಿಕ್ಷೆಯನ್ನೇ ನೀಡಿದೆ.ಇದೀಗ ಮಾನವ ಹಕ್ಕುಗಳ ಹೋರಾಟಗಾರ ಡಾ.ರವೀಂದ್ರನಾಥ್ ಶಾನುಭಾಗ್ ಅವರ ಮೂಲಕ ತಮ್ಮ ಕತ್ತಲು ತುಂಬಿದ ಬದುಕಲ್ಲಿ ನ್ಯಾಯ ಎಂಬ ಸಣ್ಣ ಮಿಣುಕು ಹುಳದಂತಹ ದೀಪಕ್ಕೆ ಕಾಯುತ್ತ ದಿನ ಕಳೆಯುತ್ತಿದೆ ಈ ನತದೃಷ್ಟ ಕುಟುಂಬ. ಐದು ವರ್ಷ ಕಣ್ಣು ಕಿವಿ ಇಲ್ಲದಂತೆ ವರ್ತಿಸಿದ್ದ ಭಾರತದ ದೂತಾವಾಸ ಕಚೇರಿ ಮತ್ತು ಕ್ರೌರ್ಯದ ಪರಮಾವಧಿ ಪ್ರದರ್ಶಿಸಿದ್ದ ಸೌದಿ ಸರಕಾರ ,ಈ ಕುಟುಂಬಕ್ಕೆ ನ್ಯಾಯ ಕೊಡುತ್ತಾ? ಕಾದು ನೋಡಬೇಕು.












Click it and Unblock the Notifications