"ನಾರ್ಮಲ್" ಹೆರಿಗೆ ಮಾಡಿಸುವ ವೈದ್ಯರ ಭರವಸೆ ಪ್ರಾಣಕ್ಕೇ ಎರವಾಗಿ ಹೋಯ್ತು
ಉಡುಪಿ, ಡಿಸೆಂಬರ್ 16: ಹೆರಿಗೆ ಸಂದರ್ಭ ಆದ ಅಧಿಕ ರಕ್ತಸ್ರಾವದಿಂದಾಗಿ ಬಾಣಂತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ. ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕುಟುಂಬದವರು, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವೈದ್ಯರ ನಿರ್ಲಕ್ಷ್ಯಕ್ಕೆ ದಂಡ ತೆರಬೇಕು, ಬಡಕುಟುಂಬಕ್ಕೆ ಸಹಾಯ ನೀಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.
ಶಬರಿಮಲೆಗೆ ಹೊರಟಿದ್ದ ಪೇದೆ ನೀರಿನಲ್ಲಿ ಮುಳುಗಿ ಸಾವು
ಕುಂದಾಪುರ ಸಮೀಪದ ಅಂಕದಕಟ್ಟೆಯ ನಿವಾಸಿ ಸುಧೀರ್ ದೇವಾಡಿಗ ಎಂಬುವರ ಪತ್ನಿ ಸುಜಾತ (27) ಎಂಬುವರೇ ಸಾವನ್ನಪ್ಪಿದ ದುರ್ದೈವಿ. ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸುಧೀರ್ ದೇವಾಡಿಗರಿಗೆ ಒಂದು ವರ್ಷದ ಹಿಂದೆ ವಿವಾಹವಾಗಿತ್ತು. ಪತ್ನಿ ಗರ್ಭಿಣಿಯಾದ ಬಳಿಕ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೇ ತಪಾಸಣೆ ನಡೆಸಿದ್ದು, ಎಂಟು ತಿಂಗಳ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಸಾಮಾನ್ಯ ಹೆರಿಗೆ ಅಸಾಧ್ಯ ಎಂದು ವರದಿ ಹೇಳಿತ್ತು. ಆದರೆ ಸಾಮಾನ್ಯ ಹೆರಿಗೆ ಮಾಡಿಸುತ್ತೇನೆ ಎಂದು ವೈದ್ಯೆ ಭರವಸೆ ನೀಡಿದ್ದಾರೆ.
ಅದರಂತೆ ಡಿಸೆಂಬರ್ 11ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 13ರಂದು ಅತಿಯಾದ ಹೊಟ್ಟೆನೋವು ತಾಳಲಾರದೇ ಸಿಸೇರಿಯನ್ ಮಾಡಿಸಿ ಎಂದು ಗರ್ಭಿಣಿ ಸುಜಾತ ಹೇಳಿದ್ದರೂ ವೈದ್ಯೆ ನಿರ್ಲಕ್ಷ್ಯ ತೋರಿದ್ದಲ್ಲದೇ ಸಾಮಾನ್ಯ ಹೆರಿಗೆ ಮಾಡಿಸುತ್ತೇನೆ ಎಂದು ಹೇಳಿದ್ದರು. ಮಾರನೇ ದಿನ ಸಹಜ ಹೆರಿಗೆ ಮಾಡಿಸಿದ್ದು, ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಮೌಢ್ಯದ ಪರಮಾವಧಿ: ಮೋಕ್ಷ ಪ್ರಾಪ್ತಿಗಾಗಿ ತಿರುಪತಿಯಲ್ಲಿ ಭಕ್ತ ಮಾಡಿದ್ದೇನು?
ಬಳಿಕ ತೀರ ರಕ್ತಸ್ರಾವ ಆಗಿದ್ದು, ಇದರಿಂದ ಅಸ್ವಸ್ಥರಾದ ಸುಜಾತ ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಾಬರಿಗೊಂಡ ವೈದ್ಯೆ ಇತರ ಇಬ್ಬರು ವೈದ್ಯರ ಜೊತೆಗೆ ಸುಜಾತರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ರಕ್ತ ಸ್ರಾವ ನಿಲ್ಲಿಸಲು ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಬಾಣಂತಿ ಮೃತಪಟ್ಟಿದ್ದಾರೆ.
ಬಾಣಂತಿ ಮೃತಪಟ್ಟ ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆಯವರು ಸುಮಾರು ಎರಡು ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ. ಕಡು ಬಡತನದಲ್ಲಿರುವ ಸುಧೀರ್ ಈ ಬೆಳವಣಿಗೆಯಿಂದ ಕಂಗಾಲಾಗಿದ್ದು, ಪತ್ನಿಯ ಸಾವಿಗೆ ಹೆರಿಗೆ ವೈದ್ಯೆ ರಜನಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.