ಉಡುಪಿ ಪೊಲೀಸ್ ಕೇಸರಿ ವಸ್ತ್ರದ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಿಚಾರ; ತ್ರಿಶೂಲ ಕೊಡೋದು ಒಳ್ಳೆಯದೆಂದ ರಘುಪತಿ ಭಟ್
ಉಡುಪಿ, ಅಕ್ಟೋಬರ್ 18: ಆಯುಧ ಪೂಜೆಯ ದಿನ ಕೇಸರಿ ಶಾಲು ಧರಿಸಿದ ಪೊಲೀಸರ ಫೋಟೋ ಟ್ವೀಟ್ ಮಾಡಿ ಟೀಕಾ ಪ್ರಹಾರ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ನಿಗಿ ನಿಗಿ ಕೆಂಡವಾಗಿದ್ದಾರೆ.
ಉಡುಪಿಯ ಕಾಪು ಪೊಲೀಸರು ಮತ್ತು ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಆಯುಧ ಪೂಜೆಯ ದಿನ ಕೇಸರಿ ಶಾಲು ಧರಿಸಿ ಗ್ರೂಪ್ ಫೋಟೋ ತೆಗೆದುಕೊಂಡಿದ್ದು, ಸಿದ್ದರಾಮಯ್ಯ ಈ ಫೋಟೋಗಳನ್ನು ಹಾಕಿ ಸರಣಿ ಟ್ವೀಟ್ಗಳ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಈ ಟೀಕೆಗೆ ಉಡುಪಿ ಶಾಸಕ ರಘುಪತಿ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯಗೆ ಕೇಸರಿ ಕಂಡರೆ ಯಾಕಿಷ್ಟು ಭಯ?
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಶಾಸಕ ರಘುಪತಿ ಭಟ್, "ಸಿದ್ದರಾಮಯ್ಯ ಉಡುಪಿಯ ಕಾಪು ಪೊಲೀಸರು ಕೇಸರಿ ವಸ್ತ್ರ ಧರಿಸಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಾಕಿದ್ದಾರೆ. ಸಿದ್ದರಾಮಯ್ಯಗೆ ಕೇಸರಿ ಕಂಡರೆ ಯಾಕಿಷ್ಟು ಭಯ? ಪೊಲೀಸರು ಸಾಂಪ್ರದಾಯಿಕ ವಸ್ತ್ರವನ್ನು ಧರಿಸಿದ್ದಾರೆ. ನೀವು ಮುಖ್ಯಮಂತ್ರಿಯಾಗಿರುವಾಗ ಟಿಪ್ಪುವಿನ ಪೋಷಾಕು ಧರಿಸಿ ಖಡ್ಗ ಹಿಡಿದಿಲ್ಲವೇ? ಮಸೀದಿಗೆ ಭೇಟಿ ನೀಡಿದಾಗ ಪಂಚೆ ಶಾಲು, ಟೋಪಿ ಧರಿಸಿದಾಗ ಭಾವೈಕ್ಯತೆ ನೆನಪಾಗಲಿಲ್ಲವೇ? ಈಗ ಪೊಲೀಸರು ಕೇಸರಿ ಬಟ್ಟೆ ಧರಿಸಿದರೆ ನಿಮಗೆ ಏನು ಸಮಸ್ಯೆ," ಅಂತಾ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ.
ಕೇಸರಿಯನ್ನು ದ್ವೇಷ ಮಾಡಿದ್ದರಿಂದಲೇ ಕಾಂಗ್ರೆಸ್ಗೆ ಈ ಪರಿಸ್ಥಿತಿ
"ಕೇಸರಿ ತ್ಯಾಗದ ಸಂಕೇತ. ದೇಶದಲ್ಲಿ ಕೇಸರಿಯನ್ನು ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದೇವೆ. ಅಲ್ಪಸಂಖ್ಯಾತರ ಮತಬ್ಯಾಂಕ್ ಭದ್ರಗೊಳಿಸುವ ಉದ್ದೇಶದಿಂದ ಕೇಸರಿಯನ್ನು ದ್ವೇಷ ಮಾಡುತ್ತಿದ್ದೀರಿ. ಕೇಸರಿಯನ್ನು ದ್ವೇಷ ಮಾಡಿದ ಕಾರಣದಿಂದಲೇ ದೇಶದಲ್ಲಿ ಕಾಂಗ್ರೆಸ್ಗೆ ಈ ಪರಿಸ್ಥಿತಿ ಬಂದಿದೆ. ಕೇಸರಿಯನ್ನು ವಿರೋಧಿಸಿದರೆ ಮತ್ತಷ್ಟು ಮೂಲೆಗುಂಪಾಗುತ್ತೀರಿ. ನಮ್ಮ ರಾಷ್ಟ್ರ ಬಾವುಟದಲ್ಲಿ ಕೇಸರಿ ಬಣ್ಣವಿದೆ. ಪೊಲೀಸರು ಕೇಸರಿ ಧರಿಸಿದ್ದು ಅಪರಾಧ ಅಲ್ಲ. ಸಿದ್ದರಾಮಯ್ಯರ ಮಾನಸಿಕತೆ ಅವರ ಹೇಳಿಕೆಯಿಂದ ಅರ್ಥವಾಗುತ್ತದೆ," ಎಂದು ಉಡುಪಿ ಶಾಸಕ ರಘುಪತಿ ಭಟ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಿದ್ದರಾಮಯ್ಯ ತ್ರಿಶೂಲ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಘುಪತಿ ಭಟ್, "ತ್ರಿಶೂಲ ಯಾರನ್ನೂ ಕೊಲ್ಲುವ ಆಯುಧ ಅಲ್ಲ. ತ್ರಿಶೂಲ ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಆಯುಧ. ಸಿದ್ದರಾಮಯ್ಯ ಹೇಳಿರುವಂತೆ ಪೊಲೀಸರಿಗೆ ತ್ರಿಶೂಲ ಕೊಡುವುದು ಒಳ್ಳೆಯ ಸಂಗತಿ. ಸಿದ್ದರಾಮಯ್ಯ ಒಳ್ಳೆಯದ್ದನ್ನೇ ಹೇಳಿದ್ದಾರೆಂದು," ರಘುಪತಿ ಭಟ್ ವ್ಯಂಗ್ಯವಾಡಿದರು.
ಪೊಲೀಸ್ ದಿರಿಸಿನ ಬಗ್ಗೆ ಪರ- ವಿರೋಧ ಚರ್ಚೆ
ಇನ್ನೊಂದೆಡೆ ಸಿದ್ದರಾಮಯ್ಯ ಪೊಲೀಸ್ ದಿರಿಸು ಟ್ವೀಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವಜನರು ಪರ- ವಿರೋಧದ ಚರ್ಚೆ ಮಾಡಿದ್ದರು. ಹಲವು ಮಂದಿ ಸಿದ್ದರಾಮಯ್ಯ ಹೇಳಿರುವುದು ಸರಿ ಎಂದು ವಾದ ಮಾಡಿದರೆ, ಇನ್ನು ಕೆಲವರು ಸಿದ್ಧರಾಮಯ್ಯ ಹಿಂದೂ ಸಂಪ್ರದಾಯ ವಿರೋಧಿ ಅಂತಾ ಟೀಕೆ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿಗೆ ಪೊಲೀಸರು ಹಾಕಿರುವ ಕೇಸರಿ ವಸ್ತ್ರದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು. "ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದಿರಿ, ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು,'' ಅಂತಾ ಮೊದಲ ಟ್ವೀಟ್ ಮಾಡಿದ್ದರು.
ಯುವತಿ- ಯುವಕರ ಮೇಲೆ ಅನೈತಿಕ ಪೊಲೀಸ್ಗಿರಿ
ಬಳಿಕ "ಒಂದೆಡೆ ಅಮಾಯಕ ಯುವತಿ- ಯುವಕರ ಮೇಲೆ ಅನೈತಿಕ ಪೊಲೀಸ್ಗಿರಿಯ ದೌರ್ಜನ್ಯ. ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ. ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ. ಇದಕ್ಕೆಲ್ಲಾ ಬಹಿರಂಗ ಬೆಂಬಲ ನೀಡುವುದಕ್ಕೆ ರಾಜ್ಯದಲ್ಲಿ ಸರ್ಕಾರ ಇದೆಯೇ?,'' ಅಂತಾ ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಸಿಎಂರನ್ನು ಪ್ರಶ್ನೆ ಮಾಡಿದ್ದರು.
ಬಳಿಕ ಮತ್ತೊಂದು ಟ್ವೀಟ್ ಮಾಡಿ, "ಗೂಂಡಾಗಿರಿಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿದ ಸಿಎಂ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕೇಸರಿ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ. ನಾಡಿನ ಜನತೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವುದು ಸುರಕ್ಷಿತ,'' ಅಂತಾ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
Recommended Video