ಉಡುಪಿಯಲ್ಲಿ 'ಪವಾಡ' : ಸಾವಿರಾರು ವರ್ಷ ಹಳೆಯ ನಾಗರಕಲ್ಲು ಪತ್ತೆ
Recommended Video

ಉಡುಪಿ, ನವಂಬರ್ 19 : ತುಳುನಾಡಿನಲ್ಲಿ 'ನಾಗ'ನನ್ನು ದೈವವಾಗಿ ಪೂಜಿಸುವ ಪರಿಪಾಠ ತುಂಬಾ ಅನಾದಿಕಾಲದಿಂದಲೂ ನಡೆದು ಬಂದಿದೆ. ಸರ್ಪದೋಷ ಪರಿಹಾರ ಪೂಜೆಯಲ್ಲಿ ಇಲ್ಲಿನ ಹಲವಾರು ದೇವಸ್ಥಾನಗಳಲ್ಲಿ ಮಾಡುತ್ತಾರೆ. ಭಕ್ತಾದಿಗಳು ಎಲ್ಲೆಡೆಯಿಂದ ಬಂದು ನಾಗದೇವನನ್ನು ಪೂಜಿಸಿ ಪರಿಹಾರ ಕಂಡುಕೊಳ್ಳುತ್ತಾರೆ.
ಸಂತಾನ ಪ್ರಾಪ್ತಿಗಾಗಿ, ಸರ್ಪ ದೋಷ ನಿವಾರಣೆಗಾಗಿ ಮತ್ತು ಇನ್ನೂ ಹಲವಾರು ಬೇಡಿಕೆಗಳ ಆಗ್ರಹ ಇಟ್ಟುಕೊಂಡು ಭಕ್ತರು ನಾಗ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ದೋಷ ನಿವಾರಣೆಗಾಗಿ ಆಯಾ ಕ್ಷೇತ್ರಗಳಿಗೇ ಹೋಗಿ ನಾಗ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ. ತುಳು ನಾಡಿನ ಬಂಟರು ತಾವು ನಾಗ ವಂಶದ ಕ್ಷತ್ರಿಯರೆಂದು ಕೂಡ ಹೇಳಿಕೊಳ್ಳುತ್ತಾರೆ. ಇನ್ನು ನಾಗರ ಪಂಚಮಿಯನ್ನಂತೂ ತುಳು ನಾಡಿನಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ನಾಗರ ಹಾವನ್ನು ಕಣ್ಣಿಗೆ ಕಾಣುವ ದೇವರೆಂದೇ ಇಲ್ಲಿನ ಜನರು ಆರಾಧಿಸುತ್ತಾರೆ.
ಇದೀಗ ಉಡುಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಾಗ ದೇವತೆಗೆ ಸಂಬಂಧಿಸಿದಂತೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಭಕ್ತಾದಿಗಳನ್ನು ಭಕ್ತಿಯ ಪರವಶತೆಯಲ್ಲಿ ಮುಳುಗಿಸಿದೆ. ಮಣ್ಣಲ್ಲಿ ಹುದುಗಿದ್ದ ಸಾವಿರಾರು ವರ್ಷ ಹಳೆಯ ನಾಗವಿಗ್ರಹವೊಂದು ಪತ್ತೆಯಾಗಿದ್ದು, ಅದು ಸಿಕ್ಕ ಮನೆಯ ಮಾಲಿಕರನ್ನು ಆನಂದ ತುಂದಿಲರನ್ನಾಗಿ ಮಾಡಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಆಧ್ಯಾತ್ಮಿಕ ಚಿಂತಕ ನಾಗರಾಜ್ ಭಟ್ ಅವರು ಹೇಳಿದ ನುಡಿ ಸತ್ಯವಾಗಿದೆ. ಅವರು ಏನು ಹೇಳಿದ್ದರು? ಎಂಬುದನ್ನು ಮುಂದೆ ಓದಿರಿ.
ಈ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನು 'ಪವಾಡ' ಅನ್ನುವುದು ಬಿಡುವುದು ಓದುಗರಿಗೆ ಬಿಟ್ಟ ಸಂಗತಿ. ಆದರೆ, ಈ ಅಚ್ಚರಿಯ ಘಟನೆ ಮತ್ತು ಅದರ ಹಿನ್ನೆಲೆ ಭಾರೀ ವಿಶಿಷ್ಟದ್ದಾಗಿದೆ.

ಕಣ್ಣಿಗೆ ಕಾಣುವ ದೇವರೆಂದೇ ನಂಬುತ್ತಾರೆ
ದಕ್ಷಿಣ ಭಾರತದ ಹಲವು ನೆಲೆಗಳಲ್ಲಿ 'ನಾಗ'ನನ್ನು ದೈವವಾಗಿ ಪೂಜಿಸುವ ಪರಿಪಾಠ ತುಂಬಾ ಪ್ರಾಚೀನವಾದುದು. ಅದರಲ್ಲೂ ಪಶ್ಚಿಮ ಘಟ್ಟದಿಂದ ಕರಾವಳಿಯವರೆಗಿನ ದಟ್ಟಾರಣ್ಯ ಪ್ರದೇಶ ಈ ನಾಗಾರಾಧನೆಯ ಮೂಲ ಭೂಮಿ ಎಂದು ಹೇಳಲಾಗುತ್ತದೆ. ಸರ್ಪ ಫಲೋತ್ಪತ್ತಿಯ ಸಂಕೇತವಾಗಿ ಕೂಡ ಆರಾಧನೆಗೆ ಒಳಪಟ್ಟಿದೆ. ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗಾರಾಧನೆಗೆ ಅದರದೇ ಆದ ಮಹತ್ವವಿದ್ದು, ನಾಗನನ್ನು ಈ ಭಾಗದ ಜನ ಕಣ್ಣಿಗೆ ಕಾಣುವ ದೇವರೆಂದೇ ನಂಬುತ್ತಾರೆ. ನಾಗರಪಂಚಮಿಯನ್ನು ನಾಗನ ವಿಗ್ರಹಕ್ಕೆ ಹಾಲೆರೆಯುವ ಮೂಲಕ ನಾಗನ ಕೃಪೆಗೆ ಪಾತ್ರರಾಗುತ್ತಾರೆ.

ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ 'ಪವಾಡ'
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಎಂ ಪುಟ್ಟ ಹಳ್ಳಿಯಲ್ಲಿ ನಾಗ 'ಪವಾಡ' ನಡೆದಿರುವುದು ಬೆಳಕಿಗೆ ಬಂದಿದೆ. ಹಳ್ಳಿಯ ಜನರು ಇದನ್ನು ಪವಾಡವೆಂದೇ ಕರೆಯುತ್ತಿದ್ದಾರೆ. ಆದದ್ದೇನೆಂದರೆ, ಈ ಹಳ್ಳಿ ಮೂಲದ ಉದ್ಯಮಿ ಗಂಗಾಧರ ಶೆಟ್ಟಿ ಮುಂಬೈನಲ್ಲಿ ನೆಲೆಸಿದ್ದಾರೆ. ಉದ್ಯಮದಲ್ಲಿ ಹೆಸರು, ಸಂಪಾದನೆ ಮಾಡಿದ ಗಂಗಾಧರ ಶೆಟ್ಟಿ ಅವರು, ಮುದ್ರಾಡಿಯಲ್ಲಿ ಒಂದು ಬಂಗ್ಲೆ ಕಟ್ಟಿಸುತ್ತಿದ್ದಾರೆ. ಆ ಹಳ್ಳಿಯಲ್ಲೇ ಅದು ದೊಡ್ಡ ಮನೆ. ಎಷ್ಟು ಹಣ ಮಾಡಿದರೇನು, ಎಷ್ಟು ಬಂಗಲೆ ಕಟ್ಟಿದರೇನು? ನೆಮ್ಮದಿ ಎಲ್ಲಕ್ಕಿಂತ ಮುಖ್ಯ ತಾನೆ? ಹೊಸ ಮನೆಯಲ್ಲಿ ಗಂಗಾಧರ ಶೆಟ್ರಿ ಅವರಿಗೆ ನೆಮ್ಮದಿ ಇರಲಿಲ್ಲ.

ಎಲ್ಲಾ ತೊಂದರೆಗೂ ನಾಗದೋಷವೇ ಕಾರಣ
ಆರಂಭದಲ್ಲಿ ಸಾಕಷ್ಟು ಹಣ ಗಳಿಸಿದ್ದರು ಗಂಗಾಧರ ಶೆಟ್ಟಿ. ನಂತರ ಉದ್ಯಮದಲ್ಲೂ ನಷ್ಟವಾಗಲು ಆರಂಭಿಸಿತು. ಈ ಹಿನ್ನೆಲೆಯಲ್ಲಿ ಅಧ್ಯಾತ್ಮ ಚಿಂತಕ ಹಾಗು ನಾಗಾರಾಧಕರಾದ ತೀರ್ಥಹಳ್ಳಿಯ ನಾಗರಾಜ್ ಭಟ್ ಅವರನ್ನು ಭೇಟಿ ಮಾಡಿ ಪರಿಹಾರದ ಬಗ್ಗೆ ವಿಚಾರಿಸಿದ್ದಾರೆ. ಅವರು ಕೊಟ್ಟ ಸಲಹೆ ವಿಚಿತ್ರವಾಗಿತ್ತು ಮತ್ತು ವಿಶೇಷವಾಗಿತ್ತು. ಗಂಗಾಧರ ಅವರು ನೀಡಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಅವರು, ನಿಮ್ಮ ಮನೆಯ ಹಾಲ್ ನಲ್ಲಿ ಸಮಸ್ಯೆ ಇದೆ ಎಂದು ಯಾವುದನ್ನೂ ಖುದ್ದಾಗಿ ನೋಡದೆಯೆ ಹೇಳಿದ್ದರು. ಗಂಗಾಧರ ಶೆಟ್ಟಿ ಅವರಿಗೆ ಇರುವ ಎಲ್ಲಾ ತೊಂದರೆಗೂ ನಾಗದೋಷವೇ ಕಾರಣ ಎಂದು ನಾಗರಾಜ್ ಭಟ್ ತಿಳಿಸಿದ್ದರು.

ಅಂತೂ ಸಿಕ್ಕೇಬಿಟ್ಟಿತು ನಾಗ ವಿಗ್ರಹ
ಹಾಲ್ ನ ಮಾರ್ಬಲ್ ಅಗೆದು ಆರಡಿ ಒಳ ಹೋದರೆ ಒಂದು ನಾಗ ವಿಗ್ರಹ ಸಿಗುತ್ತೆ ಅಂತ ಚಿತ್ರವನ್ನೂ ಬಿಡಿಸಿಕೊಟ್ಟಿದ್ದರಂತೆ. ಅವರ ಮಾತು ನಂಬುವಂತಿರಲಿಲ್ಲ. ಆದರೂ ನಾಗರಾಜ್ ಭಟ್ ಅವರ ಮಾತು ನಂಬಿ, ಕೋಣೆಯ ನೆಲ ಅಗೆಯಲಾಯ್ತು. ನಾಗರಾಜ್ ಭಟ್ ಹೇಳಿದಂತೆ ಆರಡಿ ಆಳದಲ್ಲಿ ಪುರಾತನ ನಾಗ ವಿಗ್ರಹ ಪತ್ತೆಯೂ ಆಯ್ತು. ನೆಲವನ್ನು ಅಗೆಯುವ ಸಮಯದಲ್ಲಿ ನಾಗರಾಜ್ ಭಟ್ ಖುದ್ದಾಗಿ ಸ್ಥಳದಲ್ಲೇ ಇದ್ದು, ಎಲ್ಲಿ ಅಗೆಯಬೇಕು, ಎಷ್ಟು ಅಗೆಯಬೇಕು ಎಂದು ಮಾರ್ಗದರ್ಶನ ಮಾಡಿದ್ದರು. ಅವರ ಮಾರ್ಗದರ್ಶನದಂತೆ ಮತ್ತು ಅವರು ಮೊದಲೇ ಹೇಳಿದ್ದಂತೆ ನಾಗ ವಿಗ್ರಹವೊಂದು ಪತ್ತೆಯಾಯಿತು. ಗಂಗಾಧರ ಅವರ ಮನೆಯವರಿಗೆ ಸ್ವರ್ಗವೇ ಕೈಗೆಟುಕಿದಂತಾಗಿತ್ತು.

ಜೈನರಿಂದ ಆರಾಧನೆಯಾಗಿದ್ದ ನಾಗ ವಿಗ್ರಹ
ಇದು ಸಾವಿರಾರು ವರ್ಷಗಳ ಹಳೆಯ ವಿಗ್ರಹ ಎಂದು ತಿಳಿದುಬಂದಿದೆ. ಈ ನಾಗನ ಪ್ರತಿಮೆಗೆ ಜೈನರ ಕಾಲದಲ್ಲಿ ಆರಾಧನೆಯಾಗುತ್ತಿದ್ದು ಬಳಿಕ ಭೂಗರ್ಭ ಸೇರಿತ್ತು. ಕಾಲಾಂತರದಲ್ಲಿ ಗಂಗಾಧರ ಶೆಟ್ಟಿ ಅವರು ಅದೇ ಜಾಗದಲ್ಲಿ ಮನೆ ಕಟ್ಟಿದರು. ಆದರೆ ನಾಗ ದೋಷದಿಂದ ಅವರಿಗೆ ತೊಂದರೆ ಆಯ್ತು. ಹೂತಿದ್ದ ವಿಗ್ರವನ್ನು ನಿಗದಿತ ಸ್ಥಳದಲ್ಲೇ ಪತ್ತೆಮಾಡಿದ್ದು ವಿಶೇಷ. ಇದು ಮೊದಲನೇ ಬಾರಿಯೇನಲ್ಲ, ನಾಗರಾಜ್ ಭಟ್ ಅವರು ಈ ಹಿಂದೆಯೂ ಉಡುಪಿ ಹಾಗೂ ಮಲೆನಾಡು ಭಾಗದಲ್ಲಿ ಹಲವೆಡೆ ಮನೆಯೊಳಗೆ ಹೂತಿದ್ದ ನಾಗ ವಿಗ್ರಹ ಪತ್ತೆ ಮಾಡಿ ವಿಸ್ಮಯ ಮೂಡಿಸಿದ್ದಾರೆ ಅನ್ನೋದು ಗಮನಾರ್ಹ.












Click it and Unblock the Notifications