ಕನ್ನಡದಲ್ಲಿಯೇ ಸಂದರ್ಶನಗಳು ನಡೆಯಲಿ : ಸಚಿವ ಮಧ್ವರಾಜ್
ಉಡುಪಿ, ಜನವರಿ.16 : 'ಕನ್ನಡ ಭಾಷೆ ಹಾಗೂ ಕನ್ನಡ ಮಕ್ಕಳ ಹಿತರಕ್ಷಣೆಯ ದೃಷ್ಟಿಯಿಂದ ರಾಜ್ಯದಲ್ಲಿ ನಡೆಯುವ ಎಲ್ಲ ಸಂದರ್ಶನಗಳನ್ನು ಕನ್ನಡದಲ್ಲಿಯೇ ನಡೆಸುವಂತೆ ಸಮ್ಮೇಳನ ನಿರ್ಣಯ ಕೈಗೊಂಡು, ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕಲಿತು ಶೇ.90 ಅಂಕ ಗಳಿಸಿದ ಹುಡುಗ, ಆಂಗ್ಲ ಮಾಧ್ಯಮದಲ್ಲಿ ಕಲಿತು ಶೇ.60ರಷ್ಟು ಅಂಕ ಗಳಿಸಿದ ಹುಡುಗನ ಎದುರು ಸಂದರ್ಶನ ಸಮಯದಲ್ಲಿ ಮಂಕಾಗುತ್ತಾನೆ.
ಇಂಗ್ಲೀಷ್ ಮಾತನಾಡಲು ತಡವರಿಸುತ್ತಾನೆ ಎಂಬ ಒಂದೇ ಕಾರಣದಿಂದ ಕನ್ನಡದ ಹುಡುಗ ಉದ್ಯೋಗ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದರು.

ಜಪಾನ್ ದೇಶದಲ್ಲಿ ಜಪಾನಿ, ಚೈನಾದಲ್ಲಿ ಚೈನೀಸ್, ಜರ್ಮನಿಯಲ್ಲಿ ಜರ್ಮನಿ ಭಾಷೆಯಲ್ಲಿಯೇ ಸಂದರ್ಶನ ಏರ್ಪಡಿಸಿ ಪ್ರತಿಭೆಗಳಿಗೆ ಮನ್ನಣೆ ನೀಡಿದರೆ, ನಮ್ಮಲ್ಲಿ ಕನ್ನಡ ಭಾಷೆಯಲ್ಲಿ ಸಂದರ್ಶನ ನಡೆಸಲು ಯಾಕೆ ಸಾಧ್ಯವಾಗುತ್ತಿಲ್ಲ? ಈಗಿರುವ ಈ ಪರಿಸ್ಥಿತಿ ಮುಂದುವರಿದರೆ ಕನ್ನಡ ಮಾಧ್ಯಮ ಹುಡುಗರು ಎಲ್ಲ ರೀತಿಯಲ್ಲಿ ಅವಕಾಶ ವಂಚಿತರಾಗುತ್ತಾರೆ.
ಆದ್ದರಿಂದ ರಾಜ್ಯದಲ್ಲಿ ನಡೆಯುವ ಎಲ್ಲ ಸಂದರ್ಶನಗಳನ್ನು ಕನ್ನಡದಲ್ಲಿಯೇ ನಡೆಸಲು ಒತ್ತಾಯಿಸಿ ಸಮ್ಮೇಳನ ನಿರ್ಣಯ ಕೈಗೊಳ್ಳಬೇಕು. ಈ ಮೂಲಕ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು' ಎಂದು ಹೇಳಿದರು.
ಮಾತೃ ಭಾಷೆಯಲ್ಲಿ ಸಂದರ್ಶನಗಳನ್ನು ನಡೆಸದೇ ಹೋದರೆ ದೇಶದ ಸಾವಿರಾರು ಭಾಷೆಗಳ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ. ಪ್ರವೇಶ ಪರೀಕ್ಷೆಗಳು ಕೂಡ ಮಾತೃ ಭಾಷೆಯಲ್ಲಿ ನಡೆಯಬೇಕು.
ಈ ವ್ಯವಸ್ಥೆ ಜಾರಿಗೆ ಬಂದರೆ ಕನ್ನಡ ಭಾಷೆ ಹಾಗೂ ಕನ್ನಡ ಮಕ್ಕಳ ಭವಿಷ್ಯ ಸುದೃಢವಾಗುತ್ತದೆ ಎಂದು ಅಭಿಪ್ರಾಯಪಟ್ಟರು.












Click it and Unblock the Notifications