ಸಂಕಷ್ಟ ನಿವಾರಣೆಗೆ ಮೂಕಾಂಬಿಕೆಗೆ ಮೊರೆ ಹೋದ ಸಚಿವ ಡಿಕೆ ಶಿವಕುಮಾರ್
Recommended Video
ಕೊಲ್ಲೂರು (ಉಡುಪಿ), ಅಕ್ಟೋಬರ್ 2: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರನ್ನು ಬೆಂಬಿಡದೆ ಕಾಡುತ್ತಿರುವ ಇಡಿ (ಜಾರಿ ನಿರ್ದೇಶನಾಲಯ) ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ನಾನಾ ದೈವದ ಮೊರೆ ಹೋಗುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಈಗ ಕೊಲ್ಲೂರು ಮೂಕಾಂಬಿಕೆಯನ್ನು ಕುಟುಂಬ ಸಮೇತರಾಗಿ ದರ್ಶನ ಮಾಡಿದ್ದಾರೆ.
ಅಷ್ಟೇ ಅಲ್ಲ, ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ಸಿಬಿಐ ಹಾಗೂ ಇಡಿ ತನಿಖೆಯಿಂದ ಕಂಗೆಟ್ಟಿರುವ ಡಿ.ಕೆ.ಶಿವಕುಮಾರ್, ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನದಲ್ಲಿ ತಲೆ ಬಾಗಿದ್ದಾರೆ. ಪತ್ನಿ ಉಷಾ, ಮಗಳು ಐಶ್ವರ್ಯಾ ಜೊತೆ ಆಗಮಿಸಿದ ಅವರು, ದೇವಸ್ಥಾನದ ಪ್ರಾಂಗಣಕ್ಕೆ ಪ್ರವೇಶಿಸಿ, ಗರುಡಗಂಬಕ್ಕೆ ಮೊದಲು ಪೂಜೆ ಸಲ್ಲಿಸಿದರು.
ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್
ಆ ನಂತರ ದೇವಾಲಯದಲ್ಲಿ ಡಿಕೆಶಿ ಕುಟುಂಬ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿತು. ರಾಜಕೀಯವಾಗಿ ಶ್ರೇಯೋಭಿವೃದ್ಧಿ, ಬೆನ್ನು ಹತ್ತಿರುವ ಸಂಕಟಗಳೆಲ್ಲಾ ನಿವಾರಣೆಯಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ದೇಗುಲ ಭೇಟಿಯ ನಂತರ ದೇವಸ್ಥಾನದ ಪ್ರಾಂಗಣದಲ್ಲಿದ್ದ ಎಲ್ಲಾ ಗುಡಿಗಳ ಬಳಿಗೆ ತೆರಳಿದ ಅವರು ವೀರಭದ್ರ, ದೇವಿ, ಗಣಪತಿ ಗುಡಿಗಳಿಗೆ ಪೂಜೆ ಸಲ್ಲಿಸಿದರು.
ದೇವಸ್ಥಾನ ಭೇಟಿಯ ನಂತರ ಬೈಂದೂರು ತಾಲೂಕಿನ ವರಾಹಿ ನೀರಾವರಿ ಯೋಜನೆ ಬಗ್ಗೆ ಅಧಿಕಾರಿಗಳ ಜೊತೆ ಸಭೆಗೆ ತೆರಳಿದರು. ಇತ್ತೀಚೆಗೆ ಶಬರಿಮಲೆ, ತುಮಕೂರಿನ ಅಜ್ಜಯ್ಯನ ಗದ್ದುಗೆ, ಕಲಬುರ್ಗಿಯ ದೇವಲ ಗಾಣಗಾಪುರದ ದತ್ತಾತ್ರೇಯ ಸನ್ನಿಧಿ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್, ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದನ್ನು ಸ್ಮರಿಸಬಹುದು.