ಉಡುಪಿ: ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್
ಉಡುಪಿ, ಜೂನ್ 14: ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆದ ಘಟನೆ ಉಡುಪಿಯ ಇಂದ್ರಾಳಿ ರೈಲ್ವೇ ಸ್ಟೇಷನ್ ಸಮೀಪ ಮಂಗಳವಾರ ನಡೆದಿದೆ.
ಮಂಜುನಾಥ್ ಎಂಬವವರು ಬಳಸುತ್ತಿದ್ದ ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ಬ್ಲಾಸ್ಟ್ ಆಗಿದೆ. ಇಂದ್ರಾಳಿ ರೈಲ್ವೇ ಸ್ಟೇಷನ್ ರೋಡ್ನಲ್ಲಿ ಬೈಕಿನಲ್ಲಿ ಮಂಗಳವಾರ ಸಂಜೆ ಹೋಗುತ್ತಿದ್ದ ವೇಳೆ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೈಕ್ ನಿಲ್ಲಿಸಿದ ಕಟಪಾಡಿಯ ಮಂಜುನಾಥ್ ಮೊಬೈಲನ್ನು ರಸ್ತೆಗೆ ಎಸೆದಿದ್ದಾರೆ.
ರಸ್ತೆಗೆ ಬೀಳುತ್ತಿದ್ದಂತೆ ಮೊಬೈಲ್ ಬ್ಲಾಸ್ಟ್ ಆಗಿದೆ. ಬ್ಯಾಟರಿ ಸ್ಪೋಟದ ತೀವ್ರತೆ ಎಷ್ಟಿತ್ತು ಎಂದರೆ ರಸ್ತೆಯ ಡಾಂಬರು ಕೂಡಾ ಸುಟ್ಟುಹೋಗಿದೆ. ಮೊಬೈಲನ್ನು ರಸ್ತೆಗೆ ಎಸೆದಿದ್ದರಿಂದ ಅವಘಡ ತಪ್ಪಿದೆ.
"ನಾನು ಪತ್ನಿ ಜೊತೆ ರೈಲು ನಿಲ್ದಾಣಕ್ಕೆ ಟಿಕೆಟ್ ಬುಕ್ ಮಾಡಲು ಕಟಪಾಡಿಯಿಂದ ಉಡುಪಿಗೆ ಬಂದಿದ್ದೆ. ಮೊಬೈಲ್ ಬ್ಯಾಟರಿ ಇಡೀ ದಿನ ಚಾರ್ಜ್ ಇರುತ್ತಿತ್ತು. ಈವರೆಗೆ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ. ಆದ್ರೆ ಬೈಕಿನಲ್ಲಿ ಬರುತ್ತಿದ್ದಾಗ ಕಿಸೆ ಬಿಸಿ ಬಿಸಿಯಾಗತೊಡಗಿತು. ಮೊಬೈಲ್ ಕೈಯ್ಯಲ್ಲಿ ತೆಗೆದಾಗ ಕೆಂಡ ಹಿಡಿದ ಹಾಗೆ ಆಗಿದೆ. ಕೂಡಲೇ ಮೊಬೈಲ್ ಹೊರಗೆ ತೆಗೆದು ಬಿಸಾಡಿದೆ," ಎನ್ನುತ್ತಾರೆ ಮಂಜುನಾಥ್ .
ಹೈವೇ ಮಧ್ಯೆಯೇ ಮೊಬೈಲ್ ಬ್ಲಾಸ್ಟ್ ಆಗಿದ್ದರಿಂದ ಇಂದ್ರಾಳಿ ಜಂಕ್ಷನ್ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಕೂಡಾ ಆಯ್ತ. ಸ್ಥಳದಲ್ಲಿದ್ದವರು ಏನು ನಡೆಯುತ್ತಿದೆ ಎಂದು ಕುತೂಹಲಕ್ಕಾಗಿ ಗುಂಪು ಸೇರಿದ್ದರು. ಬಸ್ನಿಂದ ಇಳಿದೂ ಜನ ಗುಂಪು ಸೇರಿದರು. ನಂತರ ಉಡುಪಿ ನಗರದ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮಂಜುನಾಥ್ ಆರು ತಿಂಗಳ ಹಿಂದೆ 10 ಸಾವಿರ ರೂಪಾಯಿ ಕೊಟ್ಟು ಈ ಮೊಬೈಲನ್ನು ಖರೀದಿ ಮಾಡಿದ್ದರು. ಆದರೆ ವಾರೆಂಟಿ ಮುಗಿಯುವ ಮೊದಲೇ ಮೊಬೈಲ್ ಬ್ಲಾಸ್ಟ್ ಆಗಿದ್ದು ಮಂಜುನಾಥ್ ಅವರಿಗೆ ಬೇಸರ ತಂದಿದೆ.