ಉಡುಪಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ, ಸೆಪ್ಟೆಂಬರ್ 24 : ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ 'ಮನೆ ಮನೆಗೆ ಕಾಂಗ್ರೆಸ್' ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.
ಲೇಬರ್ ಕಾಲೋನಿಯ ಮನೆಗಳಿಗೆ ತೆರಳಿ ಸರ್ಕಾರದ ಸಾಧನೆಯ ಮಾಹಿತಿಗಳನ್ನು ಒಳಗೊಂಡ ಕಿರುಹೊತ್ತಿಗೆಗಳನ್ನು ನೀಡಿದರು. ಮನೆಗಳಿಗೆ ಮನೆ-ಮನೆ ಕಾಂಗ್ರೆಸ್ ಸ್ಟೀಕ್ಕರ್ ಅಂಟಿಸಿದರು. ಈ ಕಾರ್ಯಕ್ರಮದ ಅಡಿ ಸರ್ಕಾರದ ಸಾಧನೆಯ ಮಾಹಿತಿಗಳನ್ನು ಒಳಗೊಂಡ ಕಿರುಹೊತ್ತಿಗೆಗಳನ್ನು ಕಾಂಗ್ರೆಸ್ ನಾಯಕರು ವಿಧಾನ ಸಭಾ ಕ್ಷೇತ್ರದ ಎಲ್ಲಾ 209 ಬೂತ್ ಗಳಲ್ಲಿ ಮನೆ ಮನೆಗೆ ವಿತರಿಸಲಿದ್ದಾರೆ.
ಮತಗಟ್ಟೆ ಸಮಿತಿ ಸದಸ್ಯರು ತಂಡಗಳಾಗಿ ಪ್ರತಿ ದಿನ 10ರಿಂದ 15 ಮನೆಗಳಿಗೆ ತೆರಳಿ ಕರಪತ್ರ ಮತ್ತು ಕಿರುಹೊತ್ತಿಗೆಯನ್ನು ಹಂಚಲಿದ್ದಾರೆ. ವಾರ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ಕಾರ್ಯಕರ್ತರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಂಘಟನೆಗೆ ಬಲ ತುಂಬಲು ಉದ್ದೇಶಿಸಲಾಗಿದೆ.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಕ್ಷೇತ್ರ ಕಾಪುವಿನಲ್ಲೂ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಬೇಕೆಂಬ ಪರಿಕಲ್ಪನೆಯಡಿ ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕ್ಷೇತ್ರದಲ್ಲಿ ಸಂಚರಿಸಿದ ಕಾಂಗ್ರೆಸ್ ನಾಯಕರು ಅಲ್ಲಿಯ ಮನೆ-ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಿದರು. ವಿನಯ್ ಕುಮಾರ್ ಸೊರಕೆಯವರೊಂದಿಗೆ, ಕಾಪು ವಿಧಾನಸಭಾ ಕ್ಷೇತ್ರ ಉಸ್ತುವಾರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಬಸವರಾಜ್, ಬ್ಲಾಕ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.