7 ಮೀನುಗಾರರು ನಾಪತ್ತೆ ಪ್ರಕರಣ: ಅಪಹರಣ ಆರೋಪ
ಉಡುಪಿ, ಜನವರಿ 22: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಏಳು ಮಂದಿ ಮೀನುಗಾರರ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಅವರಿದ್ದ ಸುವರ್ಣ ತ್ರಿಭುಜ ಬೋಟ್ ಕೂಡ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವ ಸುವರ್ಣ ತ್ರಿಭಜ ಬೋಟ್ ಗಾಗಿ ಮಹಾರಾಷ್ಟ್ರ ಬಂದರುಗಳನ್ನು ಸಂಪರ್ಕಿಸುವ ನದಿಗಳಲ್ಲಿ ನಡೆದ ಪೊಲೀಸ್ ಹಾಗೂ ಕೋಸ್ಟ್ ಗಾರ್ಡ್ ಶೋಧ ಕಾರ್ಯಾಚರಣೆ ಬಗ್ಗೆ ತಂಡದಲ್ಲಿದ್ದ ಮೀನುಗಾರರು ಈಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಹಾಗೂ ಕಣ್ಮರೆಯಾಗಿರುವ 7 ಮಂದಿ ಮೀನುಗಾರರಿಗಾಗಿ ಶೋಧ ನಡೆಸಲಾಗಿತ್ತು. ತಲಾ ಮೂವರು ಮೀನುಗಾರರನ್ನೊಳಗೊಂಡ ಮೂರು ಪೊಲೀಸ್ ತಂಡ ಗಳನ್ನು ರಚಿಸಿ ವೆಂಗುರ್ಲ ಪ್ರಮುಖ ಬಂದರಿನ ಮೂಲಕ ಕಿರಣ್ ಪನಿ, ರೇಡಿ, ನಿವಾಟಿ, ಮಾಲ್ವನ್ ಪ್ರಮುಖ ಬಂದರಿನ ಮೂಲಕ ಅಚೀರಾ, ದೇವಘಡ ಬಂದರಿನ ಮೂಲಕ ವಿಜಯದುರ್ಗ ಬಂದರುಗಳ ನದಿಗಳಲ್ಲಿ ಹುಡುಕಾಟ ನಡೆಸಲಾಗಿತ್ತು.
ಮರುದಿನ ಕಲಸೆ ಬಂದರಿನಲ್ಲಿ ಎರಡು ತಂಡಗಳು ಶೋಧ ಕಾರ್ಯ ನಡೆಸಿದ್ದವು. ಆದರೆ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆಯಾಗಲೀ ಅಥವಾ ಸುವರ್ಣ ತ್ರಿಭುಜ ಬೋಟ್ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

ಕಾರ್ಯಾಚರಣೆ ಬಗ್ಗೆ ಅತೃಪ್ತಿ
ಅದೇ ರೀತಿ ಏಳು ಮಂದಿ ಮೀನುಗಾರರನ್ನೊಳಗೊಂಡ ಪೊಲೀಸ್ ತಂಡ ಗೋವಾಕ್ಕೆ ತೆರಳಿ ಅಲ್ಲಿ ಬೈತುಲ್, ಪಣಜಿ, ವಾಸ್ಕೋ ಬಂದರುಗಳಲ್ಲಿ ಹುಡುಕಾಟ ನಡೆಸಿತ್ತು. ಇಲ್ಲಿ ಕೂಡ ಯಾವುದೇ ಸುಳಿವು ಲಭಿಸದೆ ತಂಡ ವಾಪಾಸ್ಸು ಬಂದಿತ್ತು. ಆದರೆ ಈ ಶೋಧ ಕಾರ್ಯಾಚರಣೆ ಪಾಲ್ಗೊಂಡಿದ್ದ ಮಲ್ಪೆ ಮೀನುಗಾರರು ಕಾರ್ಯಾಚರಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಪರಿಣಾಮಕಾರಿಯಾಗಿ ಮಾಡಬೇಕಿತ್ತು
ನಾಪತ್ತೆಯಾಗಿರುವ ಮೀನುಗಾರರು ಮತ್ತು ಅವರು ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಶೋಧ ಕಾರ್ಯಾಚರಣೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಾಗಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಫಲವಾಗಿವೆ ಎಂದು ಆರೋಪ
ನಾಪತ್ತೆಯಾಗಿರುವ ಮೀನುಗಾರರನ್ನು ಅಪಹರಣ ಮಾಡಿರುವ ಬಗ್ಗೆ ಮಲ್ಪೆ ಮೀನುಗಾರರು ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರದ ಬಂದರುಗಳ ನದಿಯನ್ನು ಸಂಪೂರ್ಣ ಶೋಧ ನಡೆಸುವಲ್ಲಿ ಪೊಲೀಸ್ ಹಾಗೂ ಕೋರ್ಸ್ಟ್ ಗಾರ್ಡ್ ತಂಡಗಳು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.

ಮೀನುಗಾರರ ಅಸಮಾಧಾನ
ಮಹಾರಾಷ್ಟ್ರದ ಮೀನುಗಾರರು ನಮ್ಮವರನ್ನು ಅಪಹರಿಸಿ ಬೋಟನ್ನು ಬಂದರುಗಳನ್ನು ಸಂಪರ್ಕಿಸುವ ನದಿಯಲ್ಲಿ ಇಟ್ಟಿದ್ದಾರೆ. ಆದುದರಿಂದ ನದಿಗಳಲ್ಲಿ ಹುಡುಕುವ ಕೆಲಸ ಆಗಬೇಕು. ಕೇವಲ 500 ಮೀಟರ್ವರೆಗೆ ಹುಡುಕಿದರೆ ಯಾವುದೇ ಸುಳಿವು ಸಿಗುವುದಿಲ್ಲ ಎಂದು ತಂಡದಲ್ಲಿದ್ದ ಮೀನುಗಾರರು ಅಸಮಾಧಾನವನ್ನು ಹೊರ ಹಾಕಿದ್ದಾರೆ.












Click it and Unblock the Notifications