ಮದ್ಯ, ಮಾನಿನಿ ಪೈಕಿ ಶೀರೂರು ಶ್ರೀ ಪ್ರಾಣ ತೆಗೆದದ್ದು ಯಾವುದು?
ಉಡುಪಿ, ಜುಲೈ 20: ಶೀರೂರು ಮಠದ ಲಕ್ಷ್ಮೀವರ ತೀರ್ಥರಿಗೆ ವಿಷ ಪ್ರಾಶನ ಆಗಿದ್ದೋ ಆಹಾರ ದೋಷವೋ ಅಥವಾ ಜೊತೆಗಿದ್ದವರೇ ವಿಷ ಕೊಟ್ಟಿದ್ದಾರೋ ಗೊತ್ತಿಲ್ಲ. ಅತಿಯಾದ ಮದ್ಯಪಾನದಿಂದ ಸಾವಾಗಿದೆ ಅಂದಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಊರಲ್ಲಿ ಇರಲಿಲ್ಲ. ಬೇರೆ ಊರಲ್ಲಿದ್ದೆ. ಪೂರ್ವ ನಿಗದಿತ ಕಾರ್ಯಕ್ರಮ ಇತ್ತು. ಆದ್ದರಿಂದ ಹುಬ್ಬಳ್ಳಿಯಿಂದ ಬರಲು ಆಗಲಿಲ್ಲ. ಆ ಕಾರಣಕ್ಕೆ ಅಂತಿಮ ವಿಧಿ- ವಿಧಾನದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಹೇಳಿದರು.
ಶೀರೂರು ಶ್ರೀಗಳ ಸಾವು : ಪೇಜಾವರ ಶ್ರೀಗಳು ಹೇಳಿದ್ದೇನು?
ಇನ್ನು ಶ್ರೀಗಳ ಸಾವಿನ ವಿಚಾರದ ಬಗ್ಗೆ ಹೇಳಬೇಕು ಅಂದರೆ, ಕಲಾಯಿ ಹಾಕದ ಪಾತ್ರೆಯಲ್ಲಿ ಆಹಾರ ಸೇವಿಸಿದ್ದಾರೆ ಎಂದು ಅವರ ಪೂರ್ವಾಶ್ರಮದ ಸಹೋದರ ತಿಳಿಸಿದರು ಎಂದರು.
ಹೊಸ ಮಹಿಳೆಯ ಜತೆ ಶೀರೂರು ಶ್ರೀಗಳಿಗೆ ಸಂಪರ್ಕ ಇತ್ತು. ಆಕೆ ಜತೆಗೆ ಏನಾದರೂ ಜಗಳ ಅಗಿರಬಹುದು. ಒಟ್ಟಾರೆ ಲಕ್ಷ್ಮೀವರ ತೀರ್ಥರ ಸಾವಿನ ಬಗ್ಗೆ ಸರಿಯಾದ ವಿಚಾರಣೆ ಆಗಲಿ. ಬೇರೆ ಮಠದ ಕಡೆಯಿಂದ ವಿಷಪ್ರಾಶನ ಅಗುವ ಸಾಧ್ಯತೆ ಇಲ್ಲ. ಒಂದು ವೇಳೆ ಇದ್ದರೆ ಮಠದ ಒಳಗಿನವರದೇ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.
ಶೀರೂರು ಶ್ರೀಗಳಿಗೆ ಹೊಸ ಮಹಿಳೆ ಜತೆ ಸಂಪರ್ಕ
ಶೀರೂರು ಶ್ರೀಗಳಿಗೆ ಇಷ್ಟರವರೆಗೆ ಒಬ್ಬ ಮಹಿಳೆ ಜೊತೆ ಸಂಪರ್ಕ ಇತ್ತು. ಈಗ ಹೊಸ ಮಹಿಳೆಯ ಸಂಪರ್ಕ ಆಗಿತ್ತು. ಅವರು ವಿಪರೀತ ಮದ್ಯಪಾನ ಮಾಡಿದ್ದರಿಂದಲೂ ಸಾವು ಸಂಭವಿಸಿರಬಹುದು. ಆದರೆ ಅಷ್ಟ ಮಠಗಳ ಇತರ ಸ್ವಾಮಿಗಳ ಕಡೆಯಿಂದ ಇಂಥ ಕೃತ್ಯ ಆಗಲು ಸಾಧ್ಯವೇ ಇಲ್ಲ. ನನಗೆ ಅವರ ಬಗ್ಗೆ ಪ್ರೀತಿ ಇತ್ತು. ಆದ್ದರಿಂದಲೇ ನಿಮ್ಮ ಮೇಲೆ ವಿಶ್ವಾಸ ಇದೆ. ಆದರೆ ಮಠದ ದೇವರಿಗೆ ಪೂಜೆ ಬೇಡ ಎಂದಿದ್ದೆ. ಅವರ ಪರ್ಯಾಯದಲ್ಲೂ ಪೂಜೆಗೆ ಹೋಗಿದ್ದೆ. ಆದರೆ ನಮ್ಮ ಪರ್ಯಾಯದಲ್ಲಿ ದೇವರ ಪೂಜೆ ಕೊಟ್ಟಿಲ್ಲ. ಅವರಿಗೆ ಈ ಬಗ್ಗೆ ಬೇಸರ ಇತ್ತು. ಆದರೂ ನನಗೆ ಅವರ ಬಗ್ಗೆ ಬಹುವಾದ ಪ್ರೀತಿ ಇತ್ತು ಎಂದು ಪೇಜಾವರ ಶ್ರೀಗಳು ಹೇಳಿದರು.
ನನ್ನ ಬಳಿ ತಪ್ಪು ಒಪ್ಪಿಕೊಂಡಿದ್ದರು
ನನ್ನ ಬಳಿ ಅವರೇ ಅನೇಕ ಸಲ ತಪ್ಪು ಒಪ್ಪಿಕೊಂಡಿದ್ದರು. ಆದರೆ ಸರಿಯಾಗಲಿಲ್ಲ. ತಮಗೆ ಮಕ್ಕಳಿದೆ ಎಂದು ಅವರು ಒಪ್ಪಿಕೊಂಡಿದ್ದರು. ಶೀರೂರು ಮಠದ ಪಟ್ಟದ ದೇವರನ್ನು ಕೊಡಬಾರದು ಎಂದು ನಾನು ಹೇಳಿಲ್ಲ. ಕೊಡುವ ನಿರ್ಧಾರಕ್ಕೆ ಇತರ ಮಠಾಧೀಶರ ವಿರೋಧ ಇತ್ತು. ಅಷ್ಟ ಮಠಗಳ ಪೈಕಿ ಕೆಲವು ಮಠಾಧೀಶರಿಗೆ ಮಕ್ಕಳಿದ್ದಾರೆ ಎಂಬ ಲಕ್ಷೀವರ ತೀರ್ಥರ ಹೇಳಿಕೆಯಿಂದ ಇತರ ಮಠಾಧೀಶರಿಗೆ ನೋವಾಗಿತ್ತು. ಇನ್ನು ತಮಗೆ ಮಕ್ಕಳಿದ್ದಾರೆ ಎಂದು ಶೀರೂರು ಶ್ರೀಗಳೇ ಒಪ್ಪಿಕೊಂಡ ಮೇಲೆ ಅವರು ಸನ್ಯಾಸಿ ಎಂದು ಒಪ್ಪಲು ಸಾಧ್ಯವಿರಲಿಲ್ಲ. ಶಿಷ್ಯ ಸ್ವೀಕಾರ ಮಾಡಿ ಎಂದು ಇತರ ಮಠಾಧೀಶರು ಸಭೆಯೊಂದರಲ್ಲಿ ಆಗ್ರಹಿಸಿದ್ದರು. ನಾನು ಆ ಸಭೆಯಲ್ಲಿ ಭಾಗವಹಿಸಿಲ್ಲ ಎಂದರು.
ಮಗನಿಗೆ ಯತಿ ದೀಕ್ಷೆಯಿಂದ ಮಾಲ್ ನಿರ್ಮಾಣ ತನಕ ಶೀರೂರು ಶ್ರೀ ವಿವಾದಗಳು
ಮಾಧ್ಯಮಗಳಲ್ಲಿ ಸರಿಯಾಗಿ ವರದಿಯಾಗಿಲ್ಲ
ಇನ್ನು ನಾನು ಹೇಳಿದ್ದು ಮಾಧ್ಯಮಗಳಲ್ಲಿ ಸರಿಯಾಗಿ ವರದಿಯಾಗಿಲ್ಲ. ಶೀರೂರು ಸ್ವಾಮೀಜಿಯಲ್ಲಿ ಅನೇಕ ಒಳ್ಳೆ ಗುಣ ಇತ್ತು. ಬ್ರಾಹ್ಮಣೇತರರ ಜೊತೆಗೂ ಬೆರೆತು ಸಮಾನತೆ ತೋರಿದ್ದಾರೆ. ಉತ್ತಮ ಕಲಾವಿದ, ಉದಾರಿ. ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದರು. ಆದರೆ ಮದ್ಯಪಾನ ಮತ್ತು ಸ್ತ್ರೀಯರ ಆಸಕ್ತಿಯಿಂದ ಸನ್ಯಾಸಕ್ಕೆ ದ್ರೋಹ ಮಾಡಿದ್ದರು. ಸ್ವಲ್ಪ ಪುಂಡಾಟಿಕೆಯನ್ನೂ ಮಾಡುತ್ತಿದ್ದರು. ಯಾವ ಸ್ವಾಮಿಗಳೂ ವಿಷ ಹಾಕಲು ಸಾಧ್ಯವಿಲ್ಲ. ಇನ್ನು ಅವರ ಬಾಲ್ಯದ ಕೆಲವು ಪ್ರಕರಣ ಕೇಳಿದ್ದೆ. ದುಶ್ಚಟ ಬಿಡುವಂತೆ ಮುಖತಃ ಹೇಳಿದ್ದೇನೆ ಎಂದು ಪೇಜಾವರ ಸ್ವಾಮೀಜಿ ತಿಳಿಸಿದರು.
ನನಗೂ ತಾರುಣ್ಯದಲ್ಲಿ ಮಹಿಳೆ ಸಂಪರ್ಕವಿತ್ತು ಎಂದಿದ್ದರು
ನಮ್ಮ ಪದ್ಧತಿಯಲ್ಲಿ ಸಾವಿಗೆ ಹೋಗುವ ಕ್ರಮ ಇಲ್ಲ. ಸನ್ಯಾಸಿ ಅಲ್ಲ ಎಂದು ಹೇಳಿದ ಕಾರಣಕ್ಕೆ ಗೊಂದಲ ಇತ್ತು. ಅವರು ಬದುಕಿರುವಾಗಲೇ ಶೀರೂರು ಶ್ರೀಗಳು ಅಷ್ಟ ಮಠಾಧೀಶರಲ್ಲ ಎಂದು ಹೇಳಿದ್ದೆವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೀರೂರು ಶ್ರೀಗಳು ನಮ್ಮ ಮೇಲೂ ಆರೋಪ ಮಾಡಿದ್ದರು. ತಾರುಣ್ಯದಲ್ಲಿ ನಮಗೆ ಮಹಿಳೆಯ ಸಂಪರ್ಕ ಇತ್ತು ಎಂದಿದ್ದರು. ಮಕ್ಕಳಿದ್ದಾರೆ ಎಂದಿದ್ದರು. ಶೀರೂರು ಸ್ವಾಮಿಗಳ ಬಗ್ಗೆ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಿ, 10 ಸಾವಿರ ಕರಪತ್ರ ಮಾಡುವುದಾಗಿ ಅನಾಮಿಕರೊಬ್ಬರು ಹೇಳಿದ್ದರು. ಅವರು ಮಾಡಿದ್ದ ಆರೋಪವೆಲ್ಲ ಸತ್ಯ. ಇನ್ನು ಉಡುಪಿಯ ಅಷ್ಟಮಠಗಳಿಗೆ ಸಂವಿಧಾನ ತರುವ ವಿಚಾರಕ್ಕೆ ಒಪ್ಪಿದ್ದೇವೆ. ಆದರೆ ಅದು ಸರ್ವಾನುಮತದಿಂದ ಆಗಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.