ಅರಣ್ಯ ಇಲಾಖೆ ಬೋನಿಗೆ ಮೂರ್ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆ
ಉಡುಪಿ, ಜನವರಿ 28: ಮರ್ಣೆ - ಪೆರಣಂಕಿಲ ಸಮೀಪದ ಗುಂಡಪಾದೆ ಬಳಿ ಶುಕ್ರವಾರ ಅರಣ್ಯ ಇಲಾಖೆ ಇಟ್ಟ ಬೋನಿಗೆ ಚಿರತೆ ಸಿಕ್ಕಿಬಿದ್ದಿದೆ. ವಾರದಿಂದ ಈ ಪರಿಸರದ ಹಾಡಿಗಳಲ್ಲಿ ಹಾಡಹಗಲೇ ಚಿರತೆ ಕಂಡುಬಂದು ಸ್ಥಳೀಯರು ಭಯಗೊಂಡಿದ್ದರು. ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಉಡುಪಿ ವಲಯದ ಸಿಬ್ಬಂದಿ ಗುಂಡುಪಾದೆಯ ಕಾಡಿನ ಮಧ್ಯ ಭಾಗದಲ್ಲಿ ಬೋನಿನೊಳಗೆ ನಾಯಿಯೊಂದನ್ನು ಕೂಡಿ ಹಾಕಿ, ಚಿರತೆಯ ಸೆರೆಗೆ ಬಲೆ ಬೀಸಿದ್ದರು. ನಾಯಿಯ ಬೇಟೆಗಾಗಿ ಬೋನಿನೊಳಗೆ ನುಗ್ಗಿದ ಚಿರತೆ ಅದರೊಳಗೆ ಬಂದಿಯಾಯಿತು.
ಕಾಡಿನ ಮಧ್ಯದಲ್ಲಿ ಬೋನು ಇರಿಸಿದ ಕಾರಣ ಚಿರತೆ ಸೆರೆಯಾಗಿರುವ ವಿಚಾರ ಸ್ಥಳೀಯರಿಗೆ ತಿಳಿಯಿತು. ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಬೋನುಸಹಿತ ಚಿರತೆಯನ್ನು ಕೊಂಡೊಯ್ದರು. ಆರೋಗ್ಯಕರವಾಗಿದ್ದ ಸುಮಾರು 3-4 ವರ್ಷ ಪ್ರಾಯದ ಈ ಹೆಣ್ಣು ಚಿರತೆಯನ್ನು ಬಳಿಕ ರಕ್ಷಿತಾರಣ್ಯದಲ್ಲಿ ಬಿಡಲಾಯಿತು.
ಕುಂದಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ್ ನಿರ್ದೇಶನದಲ್ಲಿ ಉಡುಪಿ ಅರಣ್ಯ ವಲಯ ಅಧಿಕಾರಿ ಕ್ಲಿಫರ್ಡ್ ಲೋಬೊ ಮಾರ್ಗದರ್ಶನದಲ್ಲಿ ಹಿರಿಯಡ್ಕ ಉಪವಲಯ ಅರಣ್ಯಾಧಿಕಾರಿ ದಯಾನಂದ್, ಅರಣ್ಯ ರಕ್ಷಕ ಗಣಪತಿ ನಾಯಕ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.