ಆರ್.ಆರ್ ನಗರ ಸೋಲಿಸಿದ್ದು ಸಿದ್ದರಾಮಯ್ಯ, ಶಿರಾ ಕ್ಷೇತ್ರ ಸೋಲಿಸಿದ್ದು ಡಿಕೆಶಿ: ಕಟೀಲ್
ಉಡುಪಿ, ನವೆಂಬರ್ 12: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರೇ ಕಾರಣರಾಗಿದ್ದಾರೆ. ಆರ್.ಆರ್ ನಗರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿಸಿದ್ದರೆ, ಶಿರಾ ಕ್ಷೇತ್ರವನ್ನು ಡಿ.ಕೆ ಶಿವಕುಮಾರ್ ಸೋಲಿಸಿದ್ದಾರೆ ಎಂದು ಉಡುಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.
ಉಡುಪಿಯಲ್ಲಿ ನಡೆಯುತ್ತಿರುವ ಪ್ರಶಿಕ್ಷಣ ವರ್ಗಕ್ಕೆ ಆಗಮಿಸಿದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರಿಗೂ ಅವರ ನಾಯಕರ ಜಗಳ ಗೊತ್ತಾಗಿ ಅಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವೈಯಕ್ತಿಕ ಟೀಕೆ ನಡೆಸಿತು. ಸಿಎಂ ಯಡಿಯೂರಪ್ಪ ಮತ್ತು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದರು. ಮುಂದೆ ಎರಡು ವಿಧಾನಸಭೆ, ಒಂದು ಲೋಕಸಭಾ ಚುನಾವಣೆ ಬರುತ್ತದೆ. ಆ ಚುನಾವಣೆಯಲ್ಲೂ ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲಲಿದೆ ಎಂದರು.

ಕಾಂಗ್ರೆಸ್ ನಲ್ಲಿ ಸ್ವಯಂಘೋಷಿತ ನಾಯಕರೇ ಹೆಚ್ಚಾಗಿದ್ದಾರೆ ಎಂದ ಕಟೀಲ್, ನಾನು ಬಂಡೆ, ನಾನು ಹುಲಿಯ ಅಂತ ಹೆಸರು ಇಟ್ಟುಕೊಂಡಿದ್ದಾರೆ. ತಾಲಿಬಾನಿಗಳು ಕೂಡಾ ಇದೇ ರೀತಿ ಹೆಸರು ಇಟ್ಟುಕೊಳ್ಳುತ್ತಾರೆ. ಬಂಡೆಯನ್ನು ಹುಲಿ ದೂಡಿ ಹಾಕಿದೆ. ಹುಲಿಯಾನನ್ನು ಬಂಡೆ ದುಡಿ ಹಾಕಿದೆ. ಇವತ್ತು ಹುಲಿಯೂ ಇಲ್ಲಾ, ಬಂಡೆಯ ಇಲ್ಲವೆಂದು ಲೇವಡಿ ಮಾಡಿದರು.
ಬಿಜೆಪಿ ನಾಯಕತ್ವದ ಬಗ್ಗೆ ಕಾಂಗ್ರೆಸ್ ಬಹಳಷ್ಟು ಪ್ರಶ್ನೆ ಮಾಡಿತು. ಸಿಎಂ ಸ್ಥಾನ ಬದಲಾಗುತ್ತೆ ಎಂದು ಜನರಲ್ಲಿ ಗೊಂದಲ ಸೃಷ್ಟಿ ಮಾಡಿದರು. ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟಪಡಿಸಿದರು.
ಮುಂದಿನ ಎರಡೂವರೆ ವರ್ಷಗಳ ಕಾಲ ಯಡಿಯೂರಪ್ಪ ಅವರೇ ನಮ್ಮ ಸರ್ವಸಮ್ಮತ ನಾಯಕ. ಹುಡುಗನಿಗೆ ಪ್ರಾಯ ಆಗಿದೆ ಮದುವೆಗೆ ಹುಡುಗಿ ಹುಟ್ಟಿಯೇ ಇಲ್ಲ. ಕಾಂಗ್ರೆಸ್ ನವರು ಮದುವೆ ನಿಶ್ಚಯಕ್ಕೂ ಮೊದಲೇ ಮಗುವಿಗೆ ಹೆಸರಿಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕತ್ವಕ್ಕೆ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.












Click it and Unblock the Notifications