ದಸರಾ ಮುಗಿದ ನಂತರ ಶಾಲೆ ಜೊತೆಗೆ ಬಿಸಿಯೂಟನೂ ಆರಂಭ: ಶಿಕ್ಷಣ ಸಚಿವ
ಉಡುಪಿ, ಅಕ್ಟೋಬರ್ 8: "ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭ ಮಾಡಲು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್ಫೋರ್ಸ್ ಸಭೆ ಕರೆಯುತ್ತಾರೆ. ಸಿಎಂ ಬೊಮ್ಮಾಯಿ ಶೀಘ್ರ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ," ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಸಚಿವರು, "ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ಝೀರೋ ಇದೆ. ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ," ಎಂದರು.
"ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭ ಮಾಡಲಾಗುತ್ತದೆ, ಜೊತೆಗೆ ದಸರಾ ಮುಗಿದ ತಕ್ಷಣ ಬಿಸಿಯೂಟ ಆರಂಭವಾಗಲಿದೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶೀಘ್ರ ಶಾಲೆ ಆರಂಭಿಸುತ್ತೇವೆ," ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

"ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ, ಮುಂದೆಯೂ ಕಡ್ಡಾಯ ಮಾಡಲ್ಲ. ಆನ್ಲೈನ್ ಹಾಗೂ ಆಫ್ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ," ಎಂದು ತಿಳಿಸಿದರು.
"ಆನ್ಲೈನ್ ತರಗತಿಯಿಂದ ಕೆಲ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ.90ರಷ್ಟು ಇದೆ. ದಸರಾದ ಮರುದಿನದಿಂದಲೇ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಲಾಗುವುದು," ಎಂದು ಉಡುಪಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಶಾಲೆ ಆರಂಭಿಸಿ ಸಾರ್ ಎಂದ ವಿದ್ಯಾರ್ಥಿನಿ
ಶಾಲೆಗೆ ಬಂದರೆ ಮಾತ್ರ ಪಾಠ ಅರ್ಥ ಆಗುತ್ತದೆ, ಶಾಲೆ ಆರಂಭಿಸಿ ಸಾರ್ ಎಂದು ಶಿಕ್ಷಣ ಸಚಿವರಿಗೆ ವಿದ್ಯಾರ್ಥಿನಿ ಬೇಡಿಕೆ ಇಟ್ಟ ಘಟನೆ ಉಡುಪಿ ನಗರದ ಒಳಕಾಡು ಶಾಲೆ ಆವರಣದಲ್ಲಿ ನಡೆದಿದೆ.
ಶಾಲೆ ಪರಿಶೀಲನೆಗೆ ಬಂದಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ಗೆ ನಾಲ್ಕನೇ ತರಗತಿ ಬಾಲಕಿ ಸಂಪ್ರೀತಿ ಒತ್ತಾಯ ಮಾಡಿದಳು. ಆಗ "ಯಾಕಮ್ಮ ನಿನಗೆ ಆನ್ಲೈನ್ ಕ್ಲಾಸ್ ಅರ್ಥ ಆಗಲ್ವಾ?," ಎಂದು ಕೇಳಿದ್ದಕ್ಕೆ, "ಇಲ್ಲ ಸರ್ ಶಾಲೆಗೆ ಬಂದರೆ ಮಾತ್ರ ಪಾಠ ಅರ್ಥ ಆಗುತ್ತದೆ," ಎಂದು ಉತ್ತರಿಸಿದಳು.
"ಅದೇ ಟೀಚರ್ಗಳು ಅಲ್ವೇನಮ್ನಾ ಪಾಠ ಮಾಡೋದು?," ಎಂದು ಹೇಳಿದಾಗ, "ಶಾಲೆಗೆ ಬಂದು ಪಾಠ ಕೇಳುವುದಕ್ಕೆ ಖುಷಿಯಾಗುತ್ತದೆ ಸರ್," ಎಂದಳು. ಅದಕ್ಕೆ "ಆಯ್ತಮ್ಮ ಶಾಲೆ ಶುರು ಮಾಡೋಣ," ಎಂದು ಶಿಕ್ಷಣ ಸಚಿವರು ಬಾಲಕಿಗೆ ಭರವಸೆ ನೀಡಿದರು.

ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಆಯ್ಕೆಗೆ ಸಮರ್ಥನೆ
ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥರನ್ನು ಆಯ್ಕೆ ಮಾಡಿರುವುದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಮರ್ಥಿಸಿಕೊಂಡಿದ್ದಾರೆ. "ಇತ್ತೀಚಿಗೆ ಎಲ್ಲವನ್ನೂ ವಿರೋಧಿಸುವ ಮಾನಸಿಕತೆ ಬಂದುಬಿಟ್ಟಿದೆ. ಕಾಂಗ್ರೆಸ್ಗೆ ವಿರೋಧ ಪಕ್ಷದಲ್ಲಿ ಹೆಚ್ಚು ದಿನ ಕುಳಿತ ಅನುಭವವಿಲ್ಲ. ವಿರೋಧ ಪಕ್ಷದ ಸಂಸ್ಕೃತಿಯನ್ನು ಕಾಂಗ್ರೆಸ್ ಕಲಿತಿಲ್ಲ," ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಾಗ್ದಾಳಿ ನಡೆಸಿದರು.
"ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಆಯ್ಕೆಯನ್ನು ಯಾವ ಕಾರಣಕ್ಕೆ ವಿರೋಧಿಸುತ್ತೀರಿ ಎಂದು ಕಾಂಗ್ರೆಸ್ನವರು ತಿಳಿಸಲಿ," ಎಂದು ಸಚಿವ ಬಿ.ಸಿ. ನಾಗೇಶ್ ಪ್ರಶ್ನಿಸಿದ್ದಾರೆ.
Recommended Video
ಸೆಪ್ಟೆಂಬರ್ 8ರಂದು ಹೊರಡಿಸಿರುವ ಆದೇಶದ ಪ್ರಕಾರ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು 1ರಿಂದ 10ನೆ ತರಗತಿಯವರೆಗಿನ ಸಮಾಜ ವಿಜ್ಞಾನ, ಪರಿಸರ ಅಧ್ಯಯನ ಮತ್ತು ಭಾಷಾ ವಿಷಯಗಳ ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡಲಿದೆ. ಈ ಸಮಿತಿಯನ್ನು ಕಾಂಗ್ರೆಸ್ ಕಟುವಾಗಿ ವಿರೋಧಿಸಿದೆ.












Click it and Unblock the Notifications