ಕಾಲೇಜು ಆರಂಭ ಹಿನ್ನಲೆ; ಉಡುಪಿಯಲ್ಲಿ 700ಕ್ಕೂ ಅಧಿಕ ಪೊಲೀಸರ ನಿಯೋಜನೆ
ಉಡುಪಿ, ಫೆಬ್ರವರಿ 15: ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಬುಧವಾರದಿಂದ ಕಾಲೇಜುಗಳು ಆರಂಭಗೊಳ್ಳಲಿದೆ. ಪ್ರೌಢ ಶಾಲೆ ಆರಂಭದ ಸಂದರ್ಭದಲ್ಲಿ ಹಿಜಾಬ್ ಕುರಿತು ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಬುಧವಾರದಿಂದ ಕಾಲೇಜುಗಳೂ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ ಹಿಜಾಬ್ ಗದ್ದಲ ಆರಂಭವಾಗುವ ಆತಂಕ ಎದುರಾಗಿದೆ.
ವಿಶೇಷವಾಗಿ ಹಿಜಾಬ್ ವಿವಾದ ಆರಂಭವಾದ ಉಡುಪಿ ಜಿಲ್ಲೆಯಲ್ಲಿ ಕಾಲೇಜು ಆರಂಭ ಹಿನ್ನಲೆಯಲ್ಲಿ ವಿಶೇಷ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದ್ದು, 700ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ರಾಮನಗರ: ಶಾಲಾ, ಕಾಲೇಜಿನ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿ
ಬುಧವಾರದಂದು ಕಾಲೇಜು ಆರಂಭದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಜಿಲ್ಲಾಮಟ್ಟದ ಶಾಂತಿ ಸಭೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ, ಜಿಲ್ಲೆಯ ಶಿಕ್ಷಣ ಅಧಿಕಾರಿಗಳು, ಹಿಂದೂ- ಮುಸ್ಲಿಂ ಸಂಘಟನೆಯ ಪ್ರಮುಖರು ಭಾಗವಹಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮರಾವ್, "ಜಿಲ್ಲಾ ಮಟ್ಟದ ಶಾಂತಿ ಸಭೆಯನ್ನು ಮಾಡಿದ್ದೇವೆ. ಸಭೆಯಲ್ಲಿ ಶಿಕ್ಷಣ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದೇವೆ. ಪ್ರತಿ ಕಾಲೇಜಿನಲ್ಲಿ ಪೋಷಕರ ಮತ್ತು ವಿದ್ಯಾರ್ಥಿಗಳ ಸಭೆ ಮಾಡಲು ಸೂಚನೆ ನೀಡಿದ್ದೇವೆ. ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಲು ಮನವಿಯನ್ನು ಮಾಡಿದ್ದೇವೆ. ಬುಧವಾರದಿಂದ ಜಿಲ್ಲೆಯಾದ್ಯಂತ ಕಾಲೇಜುಗಳು ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸಭೆಯಲ್ಲಿ ಮಾತುಕತೆ ಮಾಡಿದ್ದೇವೆ. ನೆಲದ ಕಾನೂನನ್ನು ಸರ್ವರೂ ಪಾಲಿಸುವಂತೆ ಕೋರಿದ್ದೇವೆ," ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದ್ದಾರೆ.
"ಶಾಂತಿ ಸಭೆಯಲ್ಲಿ ಉಡುಪಿ ಜಿಲ್ಲಾ ಪ್ರಮುಖರು ಭಾಗವಹಿಸಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಲಾಗಿದೆ. ಆದೇಶ ಪಾಲನೆ ಮಾಡುವಂತೆ ಎಲ್ಲರೂ ಅಭಿಪ್ರಾಯ ಕೊಡಿದ್ದಾರೆ. ಈಗಾಗಲೇ ಹಿಜಾಬ್ ಗದ್ದಲ ಇರುವ ಶಾಲಾ ಕಾಲೇಜಲ್ಲಿ ಕೂಡಾ ವಿಶೇಷ ಸಭೆ ಕರೆಯಲಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ".
"ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುತ್ತೇವೆ. ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು. ಶೈಕ್ಷಣಿಕ ವಾತಾವರಣ ಯಾರೂ ಕೆಡಿಸಬಾರದು ಅಂತಾ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಶಾಂತಿ ಸಭೆಗೆ ಅಹ್ವಾನಿಸಿದ ಎಲ್ಲರೂ ಸಭೆಯಲ್ಲಿ ಪಾಲ್ಗೊಂಡಿದ್ದಾರೆ," ಅಂತಾ ಡಿಸಿ ಕೂರ್ಮರಾವ್ ಹೇಳಿದ್ದಾರೆ.
ಕೋರ್ಟ್ ಮಧ್ಯಂತರ ಆದೇಶ ಎಲ್ಲಾ ಸಂಸ್ಥೆಗಳಲ್ಲಿ ಪಾಲಿಸಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಪೋಷಕರಿಗೆ ಜಿಲ್ಲಾಡಳಿತ ವಿನಂತಿ ಮಾಡುತ್ತಿದ್ದೇವೆ. ಕೋರ್ಟ್ ಆದೇಶ, ಕಾನೂನು ಎಲ್ಲರೂ ಪಾಲಿಸಬೇಕು. ಯಾರೂ ಕಾಲೇಜಿನ, ತರಗತಿಯ ವಾತಾವರಣ ಕೆಡಿಸಬಾರದು ಎಂದು ಉಡುಪಿ ಡಿಸಿ ಕೂರ್ಮರಾವ್ ಮನವಿ ಮಾಡಿದ್ದಾರೆ.
ಇನ್ನು ಉಡುಪಿಯಲ್ಲಿ ಹಿಜಾಬ್ ವಿವಾದ ಸಂಬಂಧಿಸಿದಂತೆ ಸಂಪೂರ್ಣ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಬಂದೋಬಸ್ತ್ ಮಾಡಿದ್ದೇವೆ. ಹಲವಾರು ಶಾಂತಿ ಸಭೆಗಳು ಕೆಲವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಎಲ್ಲಾ ಠಾಣೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆ ಮಾಡಲಾಗಿದೆ. 8 ಡಿಎಆರ್, 2 ಕೆಎಸ್ಆರ್ಪಿ ತುಕಡಿಯನ್ನು ಉಡುಪಿ ಜಿಲ್ಲೆಯಾದ್ಯಂತ ನಿಯೋಜನೆ ಮಾಡಿದ್ದೇವೆ. ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಿದ್ದೇವೆ ಅಂತಾ ಹೇಳಿದ್ದಾರೆ.
Recommended Video