ಚುನಾವಣೆ ಹೊತ್ತಿಗೆ ಮತ್ತೆ ಕೊಲ್ಲೂರು ಅನುದಾನ ವಿವಾದ !
ಉಡುಪಿ, ಮೇ 03 : ಕೊಲ್ಲೂರು ದೇವಾಲಯದಿಂದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗಳಿಗೆ ಬರುತ್ತಿದ್ದ ಅನುದಾನ ನಿಲ್ಲಿಸಿದಾಗ ಸಾಕಷ್ಟು ವಿವಾದ ಉಂಟಾಗಿತ್ತು. ಈಗ ಚುನಾವಣೆ ಹೊತ್ತಿಗೆ ಮತ್ತೆ ಈ ವಿವಾದ ಜೀವ ಪಡೆದುಕೊಂಡಿದೆ.
ಸಚಿವ, ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಮತ್ತು ಬೈಂದೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ನಡುವೆ ಈಗ ಈ ಕುರಿತು ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಈ ವಿವಾದ ಜೀವ ಪಡೆದಿದ್ದು ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ? ಕಾದು ನೋಡಬೇಕು.
'ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಳಿಗೆ ಕೊಲ್ಲೂರಿನ ಅನುದಾನ ನಿಲ್ಲಿಸಲು ನಾನು ಸಲಹೆ ನೀಡಿದ್ದೆ' ಎನ್ನುವ ಸಚಿವ ರಮಾನಾಥ ರೈ ಹೇಳಿಕೆಯ ಹಿಂದೆ ಬೈಂದೂರು ಶಾಸಕ ಗೋಪಾಲ ಪೂಜಾರಿಯ ಕುಮ್ಮಕ್ಕು ಇದೆ ಎಂದು ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಹೆಮ್ಮಾಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಮಾನಾಥ ರೈ ಅವರು, 'ಹಿಂದೆಂದೂ ಈ ರೀತಿ ಹೇಳಿರಲಿಲ್ಲ, ಈಗ ಧಿಡೀರ್ ಆಗಿ ಚುನಾವಣಾ ಸಮಯದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ರೈ ಅವರಿಗೂ ಈ ರೀತಿಯ ಹೇಳಿಕೆ ಅವರ ಕ್ಷೇತ್ರದಲ್ಲಿ ಸ್ವಲ್ಪ ಮತಗಳನ್ನು ತಂದು ಕೊಡಬಹುದೆಂಬ ಭಾವನೆ ಇರಬಹುದು. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಶಾಸಕರು ರಮಾನಾಥ ರೈ ಅವರ ಮೂಲಕ ಹೀಗೆ ಹೇಳಿಸಿರಬಹುದು' ಎಂದರು.
'ಕಲ್ಲಡ್ಕ ಮತ್ತು ಪುಣಚದ ಶಾಲೆಗಳಿಗೆ ಪ್ರತಿ ತಿಂಗಳು ಬಿಸಿಯೂಟಕ್ಕೆ ಅನುದಾನವಾಗಿ ಕೊಲ್ಲೂರು ದೇವಳದಿಂದ ರವಾನೆಯಾಗುತ್ತಿದ್ದ 4.5 ಲಕ್ಷ ರೂಪಾಯಿಗಳ ಅನುದಾನ ಸ್ಥಗಿತಗೊಳಿಸುವಂತೆ ಸುಕುಮಾರ ಶೆಟ್ಟಿ ನನಗೆ ಸಲಹೆ ನೀಡಿದ್ದರು'.
'ಈ ಅನುದಾನ ಭಕ್ತರು ನೀಡುವ ಹಣದ ಹಗಲು ದರೋಡೆಯಾಗಿದೆ' ಎಂದು ಸುಕುಮಾರ ಶೆಟ್ಟಿ ನನಗೆ ಹೇಳಿದ್ದರು ಎಂದು ಬಂಟ್ವಾಳ ಕ್ಷೇತ್ರದ ಪ್ರಚಾರ ಸಭೆಯೊಂದರಲ್ಲಿ ಸಚಿವ ರಮಾನಾಥ ರೈ ಹೇಳಿದ್ದರು.
ಈ ಹೇಳಿಕೆ ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿತ್ತು. ಶಾಲಾ ಮಕ್ಕಳ ಬಿಸಿಯೂಟವನ್ನು ರೈ ಕಸಿದುಕೊಂಡಿದ್ದಾರೆ ಎಂದು ಬಿಜೆಪಿ ಕಳೆದೊಂದು ವರ್ಷದಿಂದ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈ ಅವರ ಈ ಹೇಳಿಕೆ ಮಹತ್ವ ಪಡೆದಿತ್ತು.












Click it and Unblock the Notifications