ಚುನಾವಣೆ ಮುನ್ನ ಗಲಭೆಗಳಾಗುವ ಸಾಧ್ಯತೆ ಇದೆ: ಪ್ರಕಾಶ್ ರೈ
ಉಡುಪಿ, ಏಪ್ರಿಲ್ 24: ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಗಲಭೆಗಳಾಗುವ ಸಾಧ್ಯತೆ ಇದೆ ಎಂದು ನಟ ಪ್ರಕಾಶ್ ರೈ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಸ್ಟ್ ಆಸ್ಕಿಂಗ್ ಅಭಿಯಾನದ ಭಾಗವಾಗಿ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಕಾಶ್ ರೈ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚುನಾವಣಾ ತಂತ್ರ ಹೆಣೆಯುತ್ತಿದ್ದಾರೆ, ರಾಜ್ಯದ ಜನ ಜಾಗೃತೆಯಿಂದ ಇರಿ ಎಂದು ಎಚ್ಚರಿಕೆ ನೀಡಿದರು.
'ಅಮಿತ್ ಶಾ ನೀವು ಯಾರು? ನೀವು ಮಹಾನ್ ರಾಜಕೀಯ ಚಾಣಾಕ್ಯನಾ? ದೇಶದ ಪ್ರಗತಿಗೆ ನೀವು ಏನು ಮಾಡಿದ್ದೀರಿ ? ಎಂದು ಇದೇ ಸಮಯದಲ್ಲಿ ಅವರು ಪ್ರಶ್ನೆ ಮಾಡಿದರು.

'ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಅವರುಗಳು ರಾಜ್ಯಕ್ಕೆ ಬಂದರೆ ಯಡಿಯೂರಪ್ಪ ಅವರು ಅವರ ಮುಂದೆ ಕೈ ಕಟ್ಟಿ ನಿಲ್ಲುತ್ತಾರೆ, ಯಡಿಯೂರಪ್ಪ ಅವರಿಗೆ ಸ್ವಾಭಿಮಾನವೇ ಇಲ್ಲ ಎಂದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗಿ ಉಳಿಯಲ್ಲ ಎಂದು ಭವಿಷ್ಯ ನುಡಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಅವರಿಗಿಂತ ವಾಸಿ, ಕೊನೆಯ ಎರಡು ವರ್ಷ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರಕಾರಕ್ಕೆ ಪ್ರಕಾಶ್ ರೈ ಸರ್ಟಿಫಿಕೇಟ್ ನೀಡಿದರು.
'ಬಿಜೆಪಿ ಒಂದು ಪ್ರಾಣಾಂತಿಕ ಕಾಯಿಲೆ, ಮೊದಲು ಆ ಸಮಸ್ಯೆ ಬಗೆಹರಿಸಬೇಕು. ಭಾರತ ಇನ್ನೊಂದು ಪಾಕಿಸ್ತಾನ ಆಗಬಾರದು,ಬಿಜೆಪಿ ಭಕ್ತರು ನನ್ನನ್ನು ಪಾಕಿಸ್ತಾನಕ್ಕೆ ಕಳಿಸುವ ಮಾತಾಡುತ್ತಾರೆ ಅಲ್ಲಿಗೆ ಯಾಕೆ ಯುಕೆ.ಯುಎಸ್ಗೆ ಕಳುಹಿಸಿ ಎಂದು ಟಾಂಗ್ ನೀಡಿದರು.
ಬಿಜೆಪಿಯವರು ಹಿಂದೂ ಧರ್ಮದ ಗುತ್ತಿಗೆ ಪಡೆದುಕೊಂಡಿದ್ದಾರಾ? ಸರ್ಕಾರ ರಚನೆ ಮಾಡಿದ ಮೇಲೆ ಧರ್ಮ, ಜಾತಿ ಯಾಕೆ? ಬೆಂಕಿ ಹಾಕುವ ಮಾತುಗಳು ಯಾಕೆ? ಎಂದು ಪ್ರಕಾಶ್ ರೈ ಆಕ್ರೋಶಗೊಂಡರು.












Click it and Unblock the Notifications