Karnataka Elections: ಉಡುಪಿ ಜಿಲ್ಲೆಯ ಹಾಲೀ 3 ಬಿಜೆಪಿ ಶಾಸಕರಿಗೆ ಬಿಗ್ ಶಾಕ್, ಕೈತಪ್ಪಿದ ಟಿಕೆಟ್
ಉಡುಪಿ, ಏಪ್ರಿಲ್ 11: ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಜೆಡಿಎಸ್ ತಮ್ಮತಮ್ಮ ಮೊದಲನೇ/ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ, ಬಿಜೆಪಿಯ ಒಂದೇ ಒಂದು ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿರಲಿಲ್ಲ. ನವದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಯಲ್ಲಿ ಕೊನೆಗೂ ಕೇಸರಿ ಪಾಳಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 189 ಕ್ಷೇತ್ರಗಳಿಗೆ ಟಿಕೆಟ್ ಅನ್ನು ಫೈನಲ್ ಮಾಡಿದೆ.
ಕಳೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಐದಕ್ಕೆ ಐದೂ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಕಳೆದ ಬಾರಿ ಇದ್ದಷ್ಟು ಪೂರಕ ಸನ್ನಿವೇಶ ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಇಲ್ಲದನ್ನು ಅರಿತಿರುವ ಬಿಜೆಪಿ ವರಿಷ್ಠರು ಭಾರೀ ಬದಲಾವಣೆಗೆ ಮುಂದಾಗಿದ್ದಾರೆ. ಹಾಗಾಗಿ, ಹಲವು ಹಾಲೀ ಶಾಸಕರಿಗೆ ಟಿಕೆಟ್ ಕೈತಪ್ಪಿದೆ.

ಕಾಂಗ್ರೆಸ್ ಪಕ್ಷವು ಈಗಾಗಲೇ ಕಾರ್ಕಳ ಹೊರತು ಪಡಿಸಿ ಮಿಕ್ಕೆಲ್ಲಾ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದ್ದಾಗಿದೆ. ಉಡುಪಿ ಕಾಂಗ್ರೆಸ್ ಘಟಕದಲ್ಲೂ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಅಪಸ್ವರ ಜೋರಾಗಿದೆ. ಅದರಲ್ಲೂ ಪ್ರಮುಖವಾಗಿ ಉಡುಪಿ ಕ್ಷೇತ್ರದಲ್ಲಿ ಹೊಸಬರಿಗೆ ಮಣೆ ಹಾಕಲಾಗಿದೆ ಎನ್ನುವ ಅಸಮಾಧಾನ ಜೋರಾಗಿದೆ.
ಟಿಕೆಟ್ ಹಂಚಿಕೆಯ ನಂತರ ಭಿನ್ನಮತ ಸ್ಫೋಟಿಸಬಹುದು ಎನ್ನುವುದನ್ನು ಅರಿತಿರುವ ಬಿಜೆಪಿಯು, ಭಾರೀ ಲೆಕ್ಕಾಚಾರದೊಂದಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದೆ. ಜಿಲ್ಲೆಯ ಹಾಲೀ ಐವರು ಶಾಸಕರಲ್ಲಿ ಮೂವರಿಗೆ ಟಿಕೆಟ್ ತಪ್ಪಿದೆ, ಆ ಮೂಲಕ ಹೊಸ ಮುಖಗಳಿಗೆ ಬಿಜೆಪಿ ವರಿಷ್ಠರು ಮಣೆ ಹಾಕುವ ಮೂಲಕ ಸವಾಲಿನ ಕೆಲಸಕ್ಕೆ ಕೈಹಾಕಿದ್ದಾರೆ. ಕಾರ್ಕಳದಲ್ಲಿ ಹಾಲೀ ಶಾಸಕ ವಿ.ಸುನೀಲ್ ಕುಮಾರ್ ಅವರಿಗೆ (ಬಿಲ್ಲವ/ಪೂಜಾರಿ ಸಮುದಾಯ) ಟಿಕೆಟ್ ನೀಡಲಾಗಿದೆ.
ಉಡುಪಿ: ಟಿಕೆಟ್ ಸಿಗದ ರಘುಪತಿ ಭಟ್
ಮೂರು ಬಾರಿಯ ಎಂಎಲ್ಎ ರಘುಪತಿ ಭಟ್ ಅವರಿಗೆ ಟಿಕೆಟ್ ಕೈತಪ್ಪಿದೆ. ಭಟ್ರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಚರ್ಚೆ ಈ ಭಾಗದಲ್ಲಿ ಜೋರಾಗಿಯೇ ನಡೆಯುತ್ತಿತ್ತು. "ನನಗೆ ಟಿಕೆಟ್ ಸಿಗದೇ ಇರಲು ಯಾವುದೇ ಬಲವಾದ ಕಾರಣಗಳು ಇಲ್ಲ" ಎನ್ನುವ ವಿಶ್ವಾಸದ ಮಾತನ್ನು ರಘುಪತಿ ಭಟ್ ಆಡಿದ್ದರು. ಆದರೆ, ಬಿಜೆಪಿ ವರಿಷ್ಠರು ಮೊಗವೀರ ಸಮುದಾಯದ ಯಶಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್, ಪ್ರಸಾದರಾಜ್ ಕಾಂಚನ್ ಅವರಿಗೆ ಟಿಕೆಟ್ ನೀಡಿದೆ.
ಕಾಪು: ವರಿಷ್ಠರ ವಿಶ್ವಾಸ ಗೆಲ್ಲಲಾಗದ ಲಾಲಾಜಿ ಮೆಂಡನ್
ಮೂರು ಬಾರಿ ಗೆದ್ದಿದ್ದ ಲಾಲಾಜಿ ಮೆಂಡನ್ ಅವರಿಗೆ ಟಿಕೆಟ್ ಕೈತಪ್ಪಿದೆ. ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಲಾಲಾಜಿ ಮೆಂಡನ್ ಫೇಲ್ ಆಗಿದ್ದೇ ಟಿಕೆಟ್ ತಪ್ಪಲು ಕಾರಣ ಎಂದು ಹೇಳಲಾಗುತ್ತಿದೆ. ಬಿಜೆಪಿಯು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿಯವರಿಗೆ (ಬಂಟ ಸಮುದಾಯ) ಟಿಕೆಟ್ ನೀಡಿದೆ. ಕಾಂಗ್ರೆಸ್ಸಿನಿಂದ ವಿನಯ್ ಕುಮಾರ್ ಸೊರಕೆಗೆ ಟಿಕೆಟ್ ಈಗಾಗಲೇ ದಕ್ಕಿದೆ.
ಕುಂದಾಪುರ: ಹಾಲಾಡಿ ಬಯಸಿದಂತೆ ಟಿಕೆಟ್ ನೀಡಿದ ಬಿಜೆಪಿ
ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ಕುಂದಾಪುರದ ವಾಜಪೇಯಿ ಹೇಳಿದ್ದರು. ಅವರ ರಾಜಕೀಯ ಗುರುವಿನ ಮಗ ಕಿರಣ್ ಕುಮಾರ್ ಕೂಡ್ಗಿಗೆ (ಬ್ರಾಹ್ಮಣ ಸಮುದಾಯ) ಟಿಕೆಟ್ ನೀಡುವಂತೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬಹಿರಂಗವಾಗಿಯೇ ಪಕ್ಷವನ್ನು ಒತ್ತಾಯಿಸಿದ್ದರು. ಹಾಲಾಡಿ ವರ್ಚಸ್ಸಿಗೆ ಬೆಲೆ ಕೊಟ್ಟ ಬಿಜೆಪಿ, ಕಿರಣ್ ಕುಮಾರ್ ಕೂಡ್ಗಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ಸಿನಿಂದ ದಿನೇಶ್ ಹೆಗ್ಡೆ ಕಣದಲ್ಲಿದ್ದಾರೆ.
ಬೈಂದೂರು: ಸುಕುಮಾರ್ ಶೆಟ್ಟಿ ಇನ್ನೂ ಸಸ್ಪೆನ್ಸ್
ಈ ಬಾರಿಯ ಚುನಾವಣೆಯಲ್ಲಿ ಸುಕುಮಾರ್ ಶೆಟ್ರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಆದರೆ, ಮೊದಲ ಪಟ್ಟಿಯಲ್ಲಿ ಕ್ಷೇತ್ರದ ಟಿಕೆಟ್ ಅನ್ನು ಬಿಜೆಪಿ ವರಿಷ್ಠರು ಘೋಷಣೆಯನ್ನು ಮಾಡಲಿಲ್ಲ. ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ವಿರೋಧಿ ಹವಾ ಇದ್ದಿದ್ದರಿಂದ ಬಿಜೆಪಿ ವರಿಷ್ಠರು ಗುರುರಾಜ್ ಗಂಟಿಹೊಳಿ (ಬಂಟ ಸಮುದಾಯ) ಟಿಕೆಟ್ ನೀಡುತ್ತೆ ಎಂದು ಹೇಳಲಾಗುತ್ತಿದೆ.












Click it and Unblock the Notifications