ನಾನು ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯಗೇಕೆ ಸಂಕಟ?
ಉಡುಪಿ, ಮೇ 8: ನಾನು ಕರ್ನಾಟಕಕ್ಕೆ ಬಂದ್ರೆ ಸಿದ್ದರಾಮಯ್ಯ ಹರಿಹಾಯೋದ್ಯಾಕೆ? ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದರು.
ಉಡುಪಿ ಜಿಲ್ಲೆಯ ಬೈಂದೂರಿನ ತ್ರಾಸಿಯಲ್ಲಿ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಿದ ಆದಿತ್ಯನಾಥ್, ಬೈಂದೂರು ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಪ್ರಚಾರ ಮಾಡಿದರು.
ನಾನು ಕರ್ನಾಟಕಕ್ಕೆ ಬಂದ್ರೆ ನಿಮಗೇನು ಕಷ್ಟ? ಇಲ್ಲಿನ ರೈತರು, ಯುವಕರು ಸಂಕಷ್ಟದಲ್ಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಇಲ್ಲಿನ ಹಿಂದೂ ಯುವಕರಿಗೆ ರಕ್ಷಣೆಯಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಿಳಿಸಿ ಇಲ್ಲಿನ ಜನರಿಗೆ ಮನವರಿಕೆ ಮಾಡಲು, ನಾನು ಪದೇ ಪದೇ ಕರ್ನಾಟಕಕ್ಕೆ ಬರುತ್ತೇನೆ ಎಂದು ಯೋಗಿ ಆದಿತ್ಯನಾಥ ಅವರು ಸಿದ್ದರಾಮಯ್ಯಗೆ ಸವಾಲೆಸೆಯುವ ದಾಟಿಯಲ್ಲಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಚುನಾವಣಾ ಪ್ರಚಾರ ಆರಂಭಿಸಿದ ಯೋಗಿ, ಮುರುಡೇಶ್ವರ ದೇವಸ್ಥಾನಕ್ಕೆ ತೆರಳಿ ಕೆಲ ಕಾಲ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಬಳಿಕ ಬೈಂದೂರಿಗೆ ತೆರಳಿ ಮತ್ತೊಂದು ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.

ಕರ್ನಾಟಕಕ್ಕಿಂತ ಮುಂದಿದ್ದೇವೆ
ಕರ್ನಾಟಕ ಸರ್ಕಾರ ಮಾಡದೇ ಇರುವುದನ್ನು ಉತ್ತರ ಪ್ರದೇಶದಲ್ಲಿ ನಾನು ಸಾಧಿಸಿ ತೋರಿಸಿದ್ದೇನೆ. ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ. 12 ಲಕ್ಷ ಬಡವರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಎಲ್.ಪಿ.ಜಿ ಸಂಪರ್ಕ ನೀಡುವುದರಲ್ಲೂ ನಾವು ಕರ್ನಾಟಕಕ್ಕಿಂತ ಮುಂದಿದ್ದೇವೆ ಎಂದು ಯೋಗಿ ಹೇಳಿಕೊಂಡರು.

ಕಾಂಗ್ರೆಸ್ ಎಟಿಎಂ ಕರ್ನಾಟಕ
ವಿಕಾಸ ಸಿದ್ದರಾಮಯ್ಯ ಸರ್ಕಾರದ ಅಜೆಂಡಾ ಅಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಮಾಡುವುದೇ ಅವರ ಅಜೆಂಡಾ. ಜಿಹಾದಿ ತತ್ವ ಪ್ರೋತ್ಸಾಹಿಸುವುದು, ಬಿಜೆಪಿ ಕಾರ್ಯಕರ್ತರ ಕೊಲೆ ಮಾಡುವುದು ಸಿದ್ದರಾಮಯ್ಯ ಅಜೆಂಡಾ ಎಂದು ಆದಿತ್ಯನಾಥ ಆರೋಪಿಸಿದರು.

ಟಿಪ್ಪು ಜಯಂತಿಗೆ ಮಾತ್ರ ಉತ್ಸಾಹ
ಕರ್ನಾಟಕದಲ್ಲಿ ಹನುಮ ಜಯಂತಿಗೆ, ಶಿವಾಜಿ ಜಯಂತಿಗೆ ಅವಕಾಶ ಇಲ್ಲ. ಆದರೆ ಟಿಪ್ಪು ಜಯಂತಿ ಆಚರಿಸಲು ಈ ಸರ್ಕಾರಕ್ಕೆ ಇರುವ ಉತ್ಸಾಹ ಬೇರೆ ಯಾವ ವಿಚಾರದಲ್ಲೂ ಇಲ್ಲ ಎಂದು ದೂರಿದ ಯೋಗಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ಓಡಿಸಲು, ಅಭಿವೃದ್ಧಿಯ ಗುರಿ ತಲುಪಲು ಬಿಜೆಪಿಯನ್ನು ಬೆಂಬಲಿಸಿ ಎಂದು ಕರೆ ನೀಡಿದರು.

ಮುರುಡೇಶ್ವರದಲ್ಲಿ ಪೂಜೆ
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮುರುಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೆಳಿಗ್ಗೆ ತೆರಳಿದ ಯೋಗಿ ಆದಿತ್ಯನಾಥ, ನೆಲದ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಮುಖ್ಯ ಅರ್ಚಕರು ಮತ್ತಿತರರು ಮಂತ್ರಘೋಷಗಳ ಮೂಲಕ ವಿಶೇಷ ಪೂಜೆ ನೆರವೇರಿಸಿದರು. ಕೆಲ ಸಮಯ ದೇವಸ್ಥಾನದಲ್ಲಿ ಕಳೆದ ಯೋಗಿ, ಬಳಿಕ ಉಡುಪಿಯ ಬೈಂದೂರಿನಲ್ಲಿ ಪ್ರಚಾರ ಭಾಷಣ ಮಾಡುವ ಸಲುವಾಗಿ ಅಲ್ಲಿಂದ ತೆರಳಿದರು.

ರಾಜ್ಯಕ್ಕೆ ಬಿಜೆಪಿ ಅವಶ್ಯಕ
ಬೈಂದೂರಿಗೆ ತೆರಳುವ ಮುನ್ನ ಭಟ್ಕಳದಲ್ಲಿ ಯೋಗಿ ಪ್ರಚಾರ ಭಾಷಣ ಮಾಡಿದರು. ಎಲ್ಲರ ಸುರಕ್ಷತೆ, ಎಲ್ಲರ ಏಳಿಗೆಗಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಅವಶ್ಯಕವಾಗಿದೆ. ಹೀಗಾಗಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಶ್ರಮವಹಿಸಬೇಕು. ಭಟ್ಕಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಧಿಕ ಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ರಾಮರಾಜ್ಯವನ್ನಾಗಿಸಿ
ಪ್ರತಿಯೊಬ್ಬರಿಗೂ ಭಾರತದ ಭವ್ಯ ಇತಿಹಾಸ ತಿಳಿದಿದೆ. ಭಾರತದ ರಾಜಕೀಯ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಬಹಳ ಮಹತ್ವದ್ದು. ಕರ್ನಾಟಕದ ಈ ನೆಲವನ್ನು ಭ್ರಷ್ಟಾಚಾರ, ಜಿಹಾದಿಗಳ ಪ್ರಭಾವದಿಂದ ಮುಕ್ತಗೊಳಿಸಬೇಕು. ರಾಮರಾಜ್ಯವನ್ನಾಗಿ ಬದಲಿಸಬೇಕು ಎಂದು ಹೇಳಿದರು.












Click it and Unblock the Notifications