ಧಂ ಇದ್ರೆ ಮುಟ್ ನೋಡಿ, ಬಿಜೆಪಿ ವಿರುದ್ದ ಕೇಸರಿ ಬೆಲ್ಟ್ ನಲ್ಲಿ ಸಚಿವ ಸಿ ಎಸ್ ಪುಟ್ಟರಾಜು ಓಪನ್ ಚಾಲೆಂಜ್
ಧಂ ಇದ್ರೆ ಮುಟ್ ನೋಡಿ, ಬಿಜೆಪಿ ವಿರುದ್ದ ಕೇಸರಿ ಬೆಲ್ಟ್ ನಲ್ಲಿ ಸಚಿವ ಸಿ ಎಸ್ ಪುಟ್ಟರಾಜು ಓಪನ್ ಚಾಲೆಂಜ್
Recommended Video

ಉಡುಪಿ, ಸೆ 15: ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾದಿ ಆಗಿ ಎಲ್ಲರೂ ಸರಕಾರದ ಅಸ್ಥಿರತೆಯ ಬಗ್ಗೆ ಮಾತನಾಡುವವರೇ, ಬೆಂಕಿಯಿಲ್ಲದೇ ಹೊಗೆಯಾಡಲು ಸಾಧ್ಯವೇ? ಆದರೆ, ಎಲ್ಲವೂ ಆಗುತ್ತಿರುವುದು ಮಾಧ್ಯಮಗಳಿಂದ ಎಂದು ಗೂಬೆ ಕೂರಿಸುವುದು ಮಾತ್ರ ಮಿಡಿಯಾಗಳ ಮೇಲೆ.
ಸಮ್ಮಿಶ್ರ ಸರಕಾರದಲ್ಲಿ ತಾನು ಬಯಸಿದ ಖಾತೆ ಸಿಗಲಿಲ್ಲ ಎಂದು ದೇವೇಗೌಡರ ಕರೆಗೂ ನಾಟ್ ರೀಚೇಬಲ್ ಆಗಿದ್ದ ಸಣ್ಣ ನೀರಾವರಿ ಖಾತೆಯ ಸಚಿವ ಸಿ ಎಸ್ ಪುಟ್ಟರಾಜು, ಕೇಸರಿ ಬೆಲ್ಟ್ ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ಷರಸಃ ವಾಗ್ದಾಳಿ ನಡೆಸಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಮಾತನಾಡುತ್ತಿದ್ದ ಪುಟ್ಟರಾಜು, ನಾವು ಬರೀ ಶಾಸಕರಲ್ಲ, ಕುಮಾರಣ್ಣನ ಬಾಡಿ ಗಾರ್ಡ್, ನಮ್ಮ ಶರ್ಟ್ ಮುಟ್ಟಿ ನೋಡಿ, ಆಗಿದೆ ಮಾರಿಹಬ್ಬ ಎಂದು ಬಿಜೆಪಿಯವರನ್ನು ಎಚ್ಚರಿಸಿದ್ದಾರೆ.
ಇತ್ತ, ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳಿಗೆ ಬಿಜೆಪಿಯನ್ನು ದೂಷಿಸುವುದು ಸರಿಯಲ್ಲ, ಮೊದಲು ನಿಮ್ಮ ಪಕ್ಷದಲ್ಲಿರುವ ಆಂತರಿಕ ಗೊಂದಲಗಳನ್ನು ಸರಿಪಡಿಸಿಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಯನ್ನು ನೀಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸಚಿವ ಪುಟ್ಟರಾಜು, ಬಿಜೆಪಿ ವಿರುದ್ದ ಗುಡುಗಿದ ಪರಿ, ಕೇಸರಿ ಬೆಲ್ಟ್ ನಲ್ಲೇ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಬೇಕು ಎನ್ನುವ ರೀತಿಯಲ್ಲಿತ್ತು. ನೀರಾವರಿ ಸಚಿವ ಪುಟ್ಟರಾಜು, ಬಿಜೆಪಿ ವಿರುದ್ದ ಹರಿಹಾಯ್ದ ಪರಿ ಹೀಗಿದೆ..

ಜೆಡಿಎಸ್ ಪಕ್ಷ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ
ಕೃಷ್ಣನ ನಾಡಿನಲ್ಲಿ ಜೆಡಿಎಸ್ ಪಕ್ಷ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ಇಲ್ಲಿನ ರೈತರನ್ನೂ ಒಗ್ಗೂಡಿಸುವ ಕೆಲಸಕ್ಕೆ ನಾವು ಮುಂದಾಗಲಿದ್ದೇವೆ, ಉಡುಪಿ ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ, ನಾವು ಮಂಡ್ಯದವರು ಎಂದು ಸಚಿವ ಸಿ ಎಸ್ ಪುಟ್ಟರಾಜು, ಬಿಜೆಪಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಮಾಧ್ಯಮಗಳ ಬೆಂಬಲ ಜಾಸ್ತಿಯಾಗುತ್ತಿದೆ
ಬಿಜೆಪಿಯವರಿಗೆ ರಾಜ್ಯದಲ್ಲಿ ಮಾಧ್ಯಮಗಳ ಬೆಂಬಲ ಜಾಸ್ತಿಯಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದ ಪುಟ್ಟರಾಜು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸಿದರೆ 28ಕ್ಕೆ 25 ಸ್ಥಾನ ಗೆಲ್ಲುವುದು ಖಚಿತ. ಬಿಜೆಪಿಯವರ ಬಣ್ಣವನ್ನು ಸದ್ಯದಲ್ಲೇ ಬಯಲು ಮಾಡುತ್ತೇವೆ
ಎಂದು ಬಿಜೆಪಿಯರಿಗೆ, ಸಚಿವ ಪುಟ್ಟರಾಜು ಚಾಲೆಂಜ್ ಮಾಡಿದ್ದಾರೆ.

ನಾವೆಲ್ಲಾ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಾಡಿಗಾರ್ಡ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರವನ್ನೂ ನಾವು ಕ್ಲೀನ್ ಸ್ವೀಪ್ ಮಾಡಿದ್ದೇವೆ. ನಾವೆಲ್ಲಾ ಬರೀ ಶಾಸಕರಲ್ಲಾ.. ನಾವೆಲ್ಲಾ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಾಡಿಗಾರ್ಡ್ ಗಳು, ಬರೆದಿಟ್ಟು ಕೊಳ್ಳಿ. ನಮ್ಮ ಶರ್ಟ್ ಮುಟ್ಟಲು ನಿಮಗೆ ತಾಕತ್ ಇದ್ಯಾ ಎನ್ನುವ ಓಪನ್ ಚಾಲೆಂಜ್ ಅನ್ನು ಸಚಿವ ಪುಟ್ಟರಾಜು, ಬಿಜೆಪಿಯವರಿಗೆ ಮಾಡಿದ್ದಾರೆ.

ಬಿಜೆಪಿಯವರ ದುಡ್ಡು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ
ದುಡ್ಡಿನ ದರ್ಪದಿಂದ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿಯವರ ದುಡ್ಡು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಗೊಂದಲವಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ವಿದೇಶ ಪ್ರವಾಸದಲ್ಲಿರುವ ಸಿದ್ದರಾಮಯ್ಯನವರು, ರಾಜ್ಯಕ್ಕೆ ವಾಪಸ್ ಆದ ಕೂಡಲೇ, ಸಂಪುಟ ವಿಸ್ತರಣೆ ನಡೆಯಲಿದೆ, ಬಿಜೆಪಿಯ ಆಟ ನಡೆಯುವುದಿಲ್ಲ - ಸಿ ಎಸ್ ಪುಟ್ಟರಾಜು.

ಜನ, ಮೋದಿ ಮತ್ತು ಬಿಜೆಪಿಗೆ ಸರಿಯಾದ ಪಾಠವನ್ನು ಕಲಿಸಲಿದ್ದಾರೆ
ಇಷ್ಟುದ್ದ ಭಾಷಣ ಬಿಗಿಯುವ ಪ್ರಧಾನಿ ಮೋದಿ, ನಾಲ್ಕುವರೆ ವರ್ಷದಲ್ಲಿ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿರುವ ಮುಂಬರುವ ಚುನಾವಣೆಯಲ್ಲಿ ಜನ, ಮೋದಿ ಮತ್ತು ಬಿಜೆಪಿಗೆ ಸರಿಯಾದ ಪಾಠವನ್ನು ಕಲಿಸಲಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ನಮ್ಮ ತಂಟೆಗೆ ಬಂದರೆ ಹುಷಾರ್ ಎಂದಿರುವ ಪುಟ್ಟರಾಜು, ನಾವು ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದ್ದೇವೆ ಎನ್ನುವ ಭರವಸೆಯ ಮಾತನ್ನಾಡಿದ್ದಾರೆ.











Click it and Unblock the Notifications