Karntaka Weather: ಕರ್ನಾಟಕದ ಕರಾವಳಿ ಸೇರಿ ಈ ಭಾಗದವರಿಗೆ ಹೈ-ಅಲರ್ಟ್, ಯಾವೆಲ್ಲ ಜಿಲ್ಲೆಗಳಲ್ಲಿ ಇಂದು ಮಳೆ?
ರಾಜ್ಯಾದ್ಯಂತ ನೈಋತ್ಯ ಮುಂಗಾರು (Southwest Monsoon) ಸಾಮಾನ್ಯವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕದ ಕರಾವಳಿಯವರೆಗೆ ಹರಡಿರುವ ಟ್ರಫ್ ಪ್ರಭಾವದಿಂದಾಗಿ ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜನತೆಗೆ ಹೈ-ಅಲರ್ಟ್ ನೀಡಲಾಗಿದ್ದು, ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.
ಇಂದು ಎಲ್ಲೆಲ್ಲಿ ಮಳೆ?
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಕಳೆದ ಒಂದು ದಿನದಲ್ಲಿ ಕರಾವಳಿಯ ಬಹುತೇಕ ಭಾಗಗಳಲ್ಲಿ, ಉತ್ತರ ಒಳನಾಡಿನ ಹಲವೆಡೆ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಗೇರುಸೊಪ್ಪ ಅತಿ ಹೆಚ್ಚು 11 ಸೆಂ.ಮೀ ಮಳೆಯಾಗಿದೆ. ಆಗುಂಬೆ (ಶಿವಮೊಗ್ಗ ಜಿಲ್ಲೆ) 7 ಸೆಂ.ಮೀ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ) 7 ಸೆಂ.ಮೀ ಮಳೆ ವರದಿಯಾಗಿದೆ. ಇಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದ್ದು, ಒಂದೆರಡು ಕಡೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ.

ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿಯೂ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ವಾಯುಭಾರ ಕುಸಿತ
ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಒಡಿಶಾ-ಪಶ್ಚಿಮ ಬಂಗಾಳದ ಕರಾವಳಿ ತೀರಕ್ಕೆ ಹೊಂದಿಕೊಂಡಂತೆ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ವಲಯವು ಸದ್ಯ ತೀವ್ರಗೊಳ್ಳುತ್ತಿದ್ದು, ಮುಂದಿನ 2 ದಿನಗಳಲ್ಲಿ ಮತ್ತಷ್ಟು ಬಲಗೊಳ್ಳಲಿದೆ. ಸಮುದ್ರ ಮಟ್ಟದಿಂದ 7.6 ಕಿಮೀ ಎತ್ತರದವರೆಗೆ ಚಂಡಮಾರುತದ ಸುಳಿಗಾಳಿ ಹರಡಿದೆ. ಇದರೊಂದಿಗೆ ಮಹಾರಾಷ್ಟ್ರದಿಂದ ಕರ್ನಾಟಕದ ಕರಾವಳಿಯವರೆಗಿನ ಕಡಲಾಚೆಯ ಟ್ರಫ್ ಮಳೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ನೈಋತ್ಯ ಮುಂಗಾರು ಜುಲೈ 3ರಂದು ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದ ಕೆಲವು ಭಾಗಗಳಿಗೆ ಮತ್ತಷ್ಟು ವಿಸ್ತರಿಸಿದ್ದು, ಮುಂದಿನ 4-5 ದಿನಗಳಲ್ಲಿ ಪಂಜಾಬ್ ಸೇರಿದಂತೆ ಇಡೀ ದೇಶವನ್ನು ಆವರಿಸಲು ವಾತಾವರಣ ಪೂರಕವಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಹಾಗೂ ಪ್ರವಾಸಿಗರು ನದಿ ಮತ್ತು ಸಮುದ್ರ ತೀರಗಳಿಗೆ ತೆರಳುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕರಾವಳಿ ಜನತೆಗೆ ಹೈ-ಅಲರ್ಟ್: ಮೀನುಗಾರರಿಗೆ ಎಚ್ಚರಿಕೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿರುವ ಬೆನ್ನಲ್ಲೇ, ಸಮುದ್ರದಲ್ಲಿ ಭೀಕರ ಹವಾಮಾನ ಸೃಷ್ಟಿಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ. ಜುಲೈ 3ರಿಂದ ಜುಲೈ 8ರವರೆಗೆ ಕರ್ನಾಟಕದ ಕರಾವಳಿ ತೀರದಲ್ಲಿ ಭಾರಿ ಬಿರುಗಾಳಿ ಸಹಿತ ದೈತ್ಯ ಅಲೆಗಳು ಏಳುವ ಸಾಧ್ಯತೆ ಇದ್ದು, ಮೀನುಗಾರರು ಮತ್ತು ಪ್ರವಾಸಿಗರಿಗೆ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಜುಲೈ 3ರಿಂದ ಜುಲೈ 8ರವರೆಗೆ ಕರ್ನಾಟಕ ಕರಾವಳಿಯುದ್ದಕ್ಕೂ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಕೆಲವೊಮ್ಮೆ ಇದರ ತೀವ್ರತೆ ಗಂಟೆಗೆ 60 ಕಿಲೋಮೀಟರ್ ದಾಟುವ ಸಾಧ್ಯತೆಯಿದೆ. ಸಮುದ್ರ ಅತ್ಯಂತ ಆಕ್ಷೇಪಾರ್ಹ ಹಾಗೂ ಪ್ರಕ್ಷುಬ್ಧವಾಗಿರಲಿದ್ದು, ಯಾವುದೇ ಕಾರಣಕ್ಕೂ ಮೀನುಗಾರರು ಈ ದಿನಗಳಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಇಂಕಾಯಿಸ್ (INCOIS) ಸಂಸ್ಥೆಯು ರಾಜ್ಯದ ಮೂರೂ ಕರಾವಳಿ ಜಿಲ್ಲೆಗಳಿಗೆ ಹೈ ವೇವ್ ಅಲರ್ಟ್ ಘೋಷಿಸಿದ್ದು, ಕಡಲತೀರಗಳಲ್ಲಿ ಅಲೆಗಳ ಅಬ್ಬರ ಜೋರಾಗಿರಲಿದೆ. ದಕ್ಷಿಣ ಕನ್ನಡದ ಮೂಲ್ಕಿಯಿಂದ ಮಂಗಳೂರು): ಜುಲೈ 3ರ ಸಂಜೆ 5:30 ರಿಂದ ಜುಲೈ 4ರ ರಾತ್ರಿ 11:30 ರವರೆಗೆ ಸಮುದ್ರದಲ್ಲಿ ಬರೋಬ್ಬರಿ 3.0 ಇಂದ 3.3 ಮೀಟರ್ ಎತ್ತರದ ದೈತ್ಯ ಅಲೆಗಳು ಅಪ್ಪಳಿಸಲಿವೆ. ಉಡುಪಿ ಬೈಂದೂರಿನಿಂದ ಕಾಪು ಕರಾವಳಿ ತೀರದಲ್ಲಿ 3.0 ಇಂದ 3.2 ಮೀಟರ್ ಎತ್ತರದ ಅಲೆಗಳು ಏಳುವ ಮುನ್ಸೂಚನೆ ಇದೆ. ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳ ಕಡಲತೀರದಲ್ಲಿ 2.8 ಇಂದ 3.0 ಮೀಟರ್ ಎತ್ತರದವರೆಗೆ ಅಲೆಗಳ ಅಬ್ಬರ ಇರಲಿದೆ.
ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಕಡಲ ಉದ್ಯೋಗಗಳು, ಬೋಟಿಂಗ್ ಹಾಗೂ ಕರಾವಳಿ ತೀರದ ಪ್ರವಾಸೋದ್ಯಮ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅಥವಾ ಅತ್ಯಂತ ಜಾಗರೂಕರಾಗಿರಲು ಸೂಚಿಸಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಮುದ್ರದ ಹತ್ತಿರ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ನೀರಿಗೆ ಇಳಿಯುವ ಸಾಹಸಕ್ಕೆ ಕೈಹಾಕದಂತೆ ಜಿಲ್ಲಾಡಳಿತಗಳು ಎಚ್ಚರಿಸಿವೆ.












Click it and Unblock the Notifications