ಉಡುಪಿ ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ, ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ
ಉಡುಪಿ, ಆಗಸ್ಟ್ 21: ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಪುಡಿ ರಾಜಕಾರಣಿಯೊಬ್ಬರು ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಕಲ್ಲುಕೋರೆಯನ್ನು ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚಾರ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವುದು ಈ ಚಾರ ಪಂಚಾಯತ್ನ ಸದಸ್ಯ ದಿನೇಶ್ ಶೆಟ್ಟಿ . ಅದೂ ಸರ್ಕಾರಿ ಜಾಗದಲ್ಲಿ ಮಾತ್ರವಲ್ಲ ಇದು ಗೋಮಾಳ ಜಾಗವೂ ಹೌದು!

ಕಾನೂನುಗಳನ್ನು ಗಾಳಿಗೆ ತೂರಿ ಭೂಗರ್ಭವನ್ನು ಅಗೆದು ಅಕ್ರವಾಗಿ ಕೆಂಪು ಕಲ್ಲುಗಳನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದಾರೆ.
ಚಾರ ಪಂಚಾಯತ್ನಿಂದ ಕೇವಲ ಒಂದೇ ಕಿಲೋ ಮೀಟರ್ ದೂರದಲ್ಲಿ ಈ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಯುತಿದ್ದರೂ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮಾತ್ರ ಹಗಲು ನಿದ್ದೆ ಮಾಡುತ್ತಿದೆ.
ಕಾರಣ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ರಾಜಕಾರಣ. ದೊಡ್ಡವರ ಹೆಸರುಗಳನ್ನು ಹೇಳಿಕೊಂಡು ಸ್ಥಳೀಯ ಮುಗ್ಧ ಗ್ರಾಮಸ್ಥರನ್ನು ಹೆದರಿಸಿ-ಬೆದರಿಸಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ಈ ಕಲ್ಲು ಗಣಿಗಾರಿಕೆಯಿಂದಾಗಿ ಇಲ್ಲಿನ ರಸ್ತೆಗಳೆಲ್ಲವು ಹಾಳಾಗಿ ಹೋಗಿದೆ. ಸುತ್ತಮುತ್ತಲಿನ ಮನೆಯವರು ಯಂತ್ರದ ಶಬ್ದದಿಂದ ಕಳೆದ ಅನೇಕ ತಿಂಗಳುಗಳಿಂದ ನೆಮ್ಮದಿಯ ನಿದ್ದೆಯನ್ನೇ ಮರೆತಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ. ಇದೀಗ ಈ ಪುಡಿ ರಾಜಕರಣಿ ವಿರುದ್ದ ಸ್ಥಳೀಯ ಜನತೆ, ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದನೆ ದೊರೆಯದೇ ಹೋದಲ್ಲಿ ಅಖಾಡಕ್ಕೆ ಇಳಿದು ಕೋರೆಯನ್ನು ಶಾಶ್ವತವಾಗಿ ಬಂದ್ ಮಾಡಲು ಅಣಿಯಾಗುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications