ಹೊಗಳಿ ಹೊಗಳಿ ಚುನಾವಣೆಗೆ ನಿಲ್ಲುವುದು ಶೀರೂರು ಸ್ವಾಮೀಜಿ ತಂತ್ರವೆ?
ಉಡುಪಿ, ಮಾರ್ಚ್ 12 : "ಸ್ವಾಮೀಜಿ ರಾಜಕೀಯ ಪ್ರವೇಶ ನನಗೆ ಆಶ್ಚರ್ಯ ತಂದಿದೆ. ಸುದ್ದಿ ನೋಡಿ ನಾನು ದಿಗ್ಭ್ರಾಂತನಾದೆ" ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವರ ಸಾಕ್ಷಿಯಾಗಿ ನನಗೆ ಈ ಬಗ್ಗೆ ಪೂರ್ವ ಸೂಚನೆ ಕೊಟ್ಟಿಲ್ಲ. ಶೀರೂರು ಸ್ವಾಮೀಜಿ ಹಿಂದಿನ ಚುನಾವಣೆಯಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ನನ್ನ ಕಾರ್ಯ ವೈಖರಿ ಬಗ್ಗೆ ಸ್ವಾಮೀಜಿ ಹೊಗಳಿದ್ದಾರೆ ಅಂತ ಖುಷಿಯಾಗಿದ್ದೆ ಎಂದರು.
ಆದರೆ, ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಅವರ ಕಾಲು ಹಿಡಿದು ಹಿಡಿದು ನಳಿನ್ ಕುಮಾರ್ ಕಟೀಲ್ ಸೋಲಿಸಿದರು. ಅದೇ ರೀತಿ ಹೊಗಳಿ ಹೊಗಳಿ ಸ್ಪರ್ಧಿಸುವುದು ಶೀರೂರು ಸ್ವಾಮೀಜಿ ತಂತ್ರಗಾರಿಕೆ ಇರಬಹುದು ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸದ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿ ಉಡುಪಿಗೆ ಭೇಟಿ ನೀಡಲಿದ್ದಾರೆ. ಕಾಪು ಕ್ಷೇತ್ರದಲ್ಲಿ ಮಾತ್ರ ಪ್ರವಾಸ ಮಾಡುತ್ತಾರೆ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ ಉಡುಪಿ ಪ್ರವಾಸ ಸಂದರ್ಭದಲ್ಲಿ ಕೃಷ್ಣಮಠಕ್ಕೆ ಭೇಟಿ ನೀಡುವುದು ಸಂಶಯ ಎಂದು ಹೇಳಿದ ಅವರು, ಎರಡನೇ ಹಂತದಲ್ಲಿ ಪ್ರವಾಸದ ಸಂದರ್ಭದಲ್ಲಿ ಉಡುಪಿ, ಕುಂದಾಪುರ , ಬೈಂದೂರಿಗೆ ಬರುತ್ತಾರೆ. ಮಾರ್ಚ್ 20-21 ರಾಹುಲ್ ಗಾಂಧಿ ಪ್ರವಾಸ ಕೈ ಗೊಳ್ಳುವ ಸಾಧ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ವಾಗ್ದಾಳಿ ನಡೆಸಿದ ಪ್ರಮೋದ್ ಮದ್ವರಾಜ್ , ಇಂದಿರಾ ಗಾಂಧಿಯ ಮೊಮ್ಮಗ ರಾಹುಲ್ ಗಾಂಧಿ. ನೆಹರೂ ಅವರ ಮರಿಮಗ. ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ. ರಾಹುಲ್ ಗಾಂಧಿಗೆ ಬಡಿಗೆ ಹಿಡಿಯಿರಿ ಅಂತ ಸಂಸದೆ ಹೇಳಿದ್ದಾರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ಯಪಡಿಸಿದರು.
ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ತಿಳಿದಿಲ್ಲ. ನನಗೆ ಖೇಣಿಯೂ ಸಿಕ್ಕಿಲ್ಲ, ಖರ್ಗೆಯೂ ಸಿಕ್ಕಿಲ್ಲ. ಬೀದರ್ ರಾಜಕೀಯದಲ್ಲಿ ನಾನೇಕೆ ಹಸ್ತಕ್ಷೇಪ ಮಾಡಲಿ? ಖರ್ಗೆ ವಿರೋಧಿಸಿದ್ದು ನನಗೆ ಗೊತ್ತಿಲ್ಲ ಎಂದು ಹೇಳಿದರು.












Click it and Unblock the Notifications